ಕೇರಳದಲ್ಲಿ ಉನ್ನತ ಹುದ್ದೆಗಳನ್ನು ಮುಸ್ಲಿಮರು ಕಸಿದುಕೊಳ್ಳುತ್ತಿದ್ದಾರೆ: ಶಾಸಕ ಪಿ.ಸಿ.ಜಾರ್ಜ್ ಗಂಭೀರ ಹೇಳಿಕೆ

ಕೊಚ್ಚಿ : ಮುಸ್ಲಿಂ ಸಮುದಾಯವು ಉನ್ನತ ಶಿಕ್ಷಣ ಇಲಾಖೆ ಸೇರಿದಂತೆ ಕೇರಳದಲ್ಲಿ ಪ್ರಮುಖ ಹುದ್ದೆಗಳನ್ನು ಕಸಿದುಕೊಳ್ಳುತ್ತಿದೆ ಎಂದು ಕೋಟ್ಟಾಯಂ ಜಿಲ್ಲೆಯ ಪೂಂಜಾರ್ ವಿಧಾನಸಭಾ ಕ್ಷೇತ್ರದ ಶಾಸಕ ಪಿ.ಸಿ.ಜಾರ್ಜ್ ಗಂಭೀರ ಹೇಳಿಕೆ ನೀಡಿದ್ದಾರೆ.
ಕೇರಳದ ಏಳು ಜಿಲ್ಲೆಗಳ ಜಿಲ್ಲಾಕಾರಿಗಳು ಒಂದೇ ಸಮುದಾಯಕ್ಕೆ ಸೇರಿದವರು ಮತ್ತು ಇದು ಹೇಗೆ ಸಾಧ್ಯವಾಯಿತು ಎಂಬುದರ ಕುರಿತು ನಾವು ಸಮಗ್ರ ಚಿಂತನೆ ನಡೆಸಬೇಕಾಗಿದೆ ಎಂದು ಅವರು ಹೇಳಿದರು.
ಪಿಎಸ್‍ಸಿಯಲ್ಲಿನ ಕಾನೂನು ಸಮಸ್ಯೆಗಳು ಮತ್ತು ಫಾ.ಸ್ಟಾನ್ ಸ್ವಾಮಿಯ ಬಂಧನದ ವಿರುದ್ಧ ಪ್ರತಿಭಟಿಸಲು ಎರಾಟ್ಟುಪೆಟ್ಟಾದ ಅರುವಿಟ್ಟುರಾದಲ್ಲಿ ಸಿರೋ ಮಲಬಾರ್ ಯುವ ಚಳವಳಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ರಾಜ್ಯದ ಶೇಕಡಾ 70ರಷ್ಟು ಶಿಕ್ಷಣ ಸಂಸ್ಥೆಗಳನ್ನು ಕ್ಯಾಥೊಲಿಕ್ ಧರ್ಮಗುರುಗಳು ಪ್ರಾರಂಭಿಸಿರುವುದಾಗಿದೆ. ಆದರೆ ಪ್ರಸ್ತುತ ಸ್ಥಿತಿಗತಿ ಬದಲಾಗಿದೆ. ಐಎಎಸ್, ಐಇಎಸ್ ಮತ್ತು ಐಎಫ್‍ಎಸ್ ಕೋರ್ಸ್‍ಗಳನ್ನು ಕಲಿಯುವವರು ಎಲ್ಲಿ ಹೋದರು. ನಮ್ಮ ಮಕ್ಕಳು ಯಾಕಿಷ್ಟು ಕೆಳಗಿದ್ದಾರೆ. ಈ ಬಗ್ಗೆ ಚರ್ಚ್ ನೇತೃತ್ವದಲ್ಲಿ ಅಧ್ಯಯನ ನಡೆಸಬೇಕು ಎಂದು ಸೂಚನೆ ನೀಡಿದರು. ಚಿನ್ನ ಕಳ್ಳ ಸಾಗಣಿಕೆಗೆ ಸಂಬಂಸಿ ಆರೋಪ ಸ್ಥಾನದಲ್ಲಿರುವ ಸಚಿವ ಕೆ.ಟಿ.ಜಲೀಲ್ ಅವರು ಉನ್ನತ ಶಿಕ್ಷಣ ಇಲಾಖೆಯಲ್ಲಿ ತಮ್ಮದೇ ಜನರನ್ನು ಇರಿಸಿಕೊಂಡಿದ್ದಾರೆ ಎಂದು ಜಾರ್ಜ್ ಗಂಭೀರ ಆರೋಪ ಮಾಡಿದರು. ಪ್ರಸ್ತುತ ಕ್ಯಾಬಿನೆಟ್ ನಲ್ಲಿರುವ ಕ್ಯಾಥೊಲಿಕ್ ಮಂತ್ರಿಗಳು ತಮ್ಮ ವಿಭಾಗದಲ್ಲಿ ಸಾಕಷ್ಟು ಕ್ಯಾಥೊಲಿಕ್ ಜನರನ್ನು ಸೇರಿಸಿಕೊಳ್ಳಬೇಕು ಎಂದೂ ನುಡಿದರು. ಎಂ.ಜಿ.ವಿಶ್ವವಿದ್ಯಾಲಯದಲ್ಲಿ ಉಪಕುಲಪತಿ ಸ್ಥಾನಕ್ಕೆ ಇಕ್ಬಾಲ್ ನಾಮನಿರ್ದೇಶನಗೊಂಡಾಗ ಅವರನ್ನು ಸಿರಿಯಾಕ್ ಥೋಮಸ್ ಅವರು ನೇಮಕ ಮಾಡಿದರು. ಏಕೆಂದರೆ ಅವರಿಗೆ ಇಕ್ಬಾಲ್‍ರನ್ನು ನೇಮಿಸಲು ಒತ್ತಡಗಳಿತ್ತು. ಕೇರಳದಲ್ಲಿ ಕ್ರಿಶ್ಚಿಯನ್ನರು ಹೊರತುಪಡಿಸಿ ಕೆಲವು ಸಮುದಾಯಗಳು ಸ್ವಾತಂತ್ರ್ಯದ ನಂತರ ಬೆಳೆದಿವೆ ಎಂಬುದನ್ನು ಬೊಟ್ಟು ಮಾಡಿದರು.
ಪಾಕಿಸ್ತಾನದಲ್ಲಿ ಎಲ್ಲರನ್ನೂ ಮುಸ್ಲಿಮರನ್ನಾಗಿ ಮಾಡಲಾಯಿತು. ಚರ್ಚ್‍ಗಳು ಮತ್ತು ದೇವಾಲಯಗಳನ್ನು ಮಸೀದಿಗಳಾಗಿ ಪರಿವರ್ತಿಸಲಾಯಿತು. ಹಿಂದೂ ದೇವಾಲಯಗಳನ್ನು ನೆಲಸಮ ಮಾಡಲಾಗಿದೆ ಮತ್ತು ಆ ದೇವಾಲಯಗಳಲ್ಲಿ ಪ್ರಸ್ತುತ ಹಿಂದೂಗಳಿಲ್ಲ. ಚರ್ಚ್‍ಗಳದ್ದೂ ಅದೇ ದುಸ್ಥಿತಿಯಾಗಿದೆ ಎಂದು ಪಿ.ಸಿ.ಜಾರ್ಜ್ ಇದೇ ಸಂದರ್ಭದಲ್ಲಿ ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ