ದೇಶದ ಯಾವುದೇ ಪ್ರಜೆಯೂ ಕಾಶ್ಮೀರದಲ್ಲಿ ಜಮೀನು ಕೊಳ್ಳಬಹುದು: ಕೇಂದ್ರದಿಂದ ಕಾನೂನು

ಶ್ರೀನಗರ: ಭಾರತದ ಯಾವುದೇ ಪ್ರಜೆ ಕೂಡ ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ನಲ್ಲಿ ಜಮೀನು ಕೊಳ್ಳಲು ಸಾಧ್ಯವಾಗುವಂತೆ ಕೇಂದ್ರ ಸರ್ಕಾರ ಭೂಕಾನೂನನ್ನು ತಿದ್ದುಪಡಿ ಮಾಡಿ ಅಧಿಸೂಚನೆ ಹೊರಡಿಸಿದೆ. ವರ್ಷದ ಹಿಂದೆ ಕಾಶ್ಮೀರದ ವಿಶೇಷ ಸ್ಥಾನಮಾನ ಹಿಂಪಡೆದಿದ್ದ ಕೇಂದ್ರ ಸರ್ಕಾರದ ಈ ನಡೆ ನಿರೀಕ್ಷಿತವೇ ಆಗಿದೆ. ಕೇಂದ್ರದ ಈ ಆದೇಶ ತತ್ಕ್ಷಣದಿಂದಲೇ ಜಾರಿಗೆ ಬರಲಿದೆ. ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಇದ್ದಾಗ ಅಲ್ಲಿ ಆ ರಾಜ್ಯದ ಹೊರಗಿನ ಯಾರಿಗೂ ಕೂಡ ಜಮೀನು ಕೊಳ್ಳಲು ಸಾಧ್ಯವಿರಲಿಲ್ಲ. ಜಮ್ಮು-ಕಾಶ್ಮೀರ ಮತ್ತು ಲಡಾಖ್ ನಿವಾಸಿಗಳು ಮಾತ್ರ ಆ ಹಕ್ಕು ಹೊಂದಿದ್ದರು. ಆದರೆ, 370ನೇ ವಿಧಿ ರದ್ದು ಮಾಡಿ ವಿಶೇಷ ಸ್ಥಾನಮಾನ ಹಿಂಪಡೆಯುವ ಮೂಲಕ ಕಾಶ್ಮೀರವನ್ನು ದೇಶದ ಇತರ ರಾಜ್ಯಗಳಂತೆ ಮುಕ್ತ ವ್ಯವಹಾರಕ್ಕೆ ತೆರೆದಿಡಲಾಗಿದೆ.
ಇದೇ ವೇಳೆ, ಜಮ್ಮು ಮತ್ತು ಕಾಶ್ಮೀರದಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ಭೂ ಕಾನೂನಿನ ಕ್ರಮವನ್ನು ನ್ಯಾಷನಲ್ ಕಾನ್ಫೆರೆನ್ಸ್ ವ್ಯಂಗ್ಯವಾಗಿ ಟೀಕಿಸಿದ್ದಾರೆ. ಜಮ್ಮು-ಕಾಶ್ಮೀರ ಈಗ ಮಾರಾಟಕ್ಕಿದೆ ಎಂದು ವ್ಯಂಗ್ಯ ಮಾಡಿದ್ದಾರೆ.
“ಜಮ್ಮು-ಕಾಶ್ಮೀರದ ಭೂ ಮಾಲಕತ್ವ ಕಾನೂನುಗಳಿಗೆ ತಿದ್ದುಪಡಿ ತಂದಿರುವುದು ಸಹಿಸಲು ಆಗುತ್ತಿಲ್ಲ. ಕೃಷಿಯೇತರ ಜಮೀನುಗಳ ಖರೀದಿ ಮತ್ತು ಕೃಷಿ ಜಮೀನಿನ ಹಸ್ತಾಂತರ ಈಗ ಇನ್ನಷ್ಟು ಸುಲಭ ಮಾಡಿಕೊಡಲಾಗಿದೆ. ಈ ರಾಜ್ಯದ ಸ್ವಾತಂತ್ರ್ಯಕ್ಕಿದ್ದ ಒಂದು ಸಣ್ಣ ಎಳೆ ಕೂಡ ಹೊರಟು ಹೋಯಿತು. ಜಮ್ಮು-ಕಾಶ್ಮೀರ ಈಗ ಮಾರಾಟಕ್ಕಿದೆ. ಬಡ ಹಾಗೂ ಸಣ್ಣ ಭೂಮಾಲಿಕರು ಈಗ ತೊಂದರೆ ಅನುಭವಿಸುತ್ತಾರೆ” ಎಂದು ಫಾರೂಕ್ ಅಬ್ದುಲ್ಲಾ ಟ್ವೀಟ್ ಮಾಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ