ಏ.30ರವರೆಗೆ ಲಾಕ್‍ಡೌನ್ ವಿಸ್ತರಿಸಲು ನಿರ್ಧಾರ

ಬೆಂಗಳೂರು: ಕೊರೋನಾ ಹಿನ್ನೆಲೆಯಲ್ಲಿ ದೇಶಾದ್ಯಂತ 21 ದಿನಗಳ ಕಾಲ ಕೇಂದ್ರ ಸರ್ಕಾರ ಘೋಷಿಸಿದ್ದ ಲಾಕ್‍ಡೌನ್ ಅವಯು ಏ.14ಕ್ಕೆ ಅಂತ್ಯಗೊಳ್ಳಲಿದ್ದು, ಏ.30ರವರೆಗೆ 2ನೇ ಹಂತದ ಲಾಕ್ ಡೌನ್ ಘೋಷಣೆಯಾಗಿದೆಯಲ್ಲದೆ, ಇನ್ನಷ್ಟು ಬಿಗಿ ಕ್ರಮಗಳನ್ನು ತೆಗೆದುಕೊಳ್ಳುವುದು ಅನಿವಾರ್ಯವಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದರು.

ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆಗಿನ ವೀಡಿಯೋ ಸಂವಾದದ ಬಳಿಕ ಗೃಹಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ರಾಜ್ಯದ ಪರಿಸ್ಥಿತಿಯನ್ನು ಪ್ರಧಾನಮಂತ್ರಿಗಳಿಗೆ ವಿವರಿಸಿದ್ದು, ಲಾಕ್‍ಡೌನ್ ಮುಂದುವರಿಸುವುದು ಅನಿವಾರ್ಯ ಎಂದು ಎಲ್ಲ ರಾಜ್ಯಗಳೂ ಅಭಿಪ್ರಾಯಪಟ್ಟಿವೆ. ಇದರಿಂದ ಕರ್ನಾಟಕವೂ ಹೊರತಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ ಎಂದರು.

ಸಮುದಾಯದಲ್ಲಿ ಕೊರೋನಾ ಹರಡುವ ಸಾಧ್ಯತೆಗಳ ಕುರಿತು ಪ್ರಧಾನಮಂತ್ರಿಯವರು ಕಳವಳ ವ್ಯಕ್ತಪಡಿಸಿದರು ಎಂದು ತಿಳಿಸಿದರು.

ಒಗ್ಗಟ್ಟಿನ ಹೋರಾಟ ಅನಿವಾರ್ಯ
ಹಾಟ್‍ಸ್ಪಾಟ್‍ಗಳನ್ನು ಗುರುತಿಸಿ, ಸೀಲ್‍ಡೌನ್ ಮಾಡುವ ಮೂಲಕ ಹಾಗೂ ಇತರ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವ ಮೂಲಕ ರಾಜ್ಯಗಳು ಮಾಡುತ್ತಿರುವ ನಿಯಂತ್ರಣದ ಪ್ರಯತ್ನಗಳು ಶ್ಲಾಘನೀಯ. ದೇಶದಲ್ಲಿ ಕೋವಿಡ್ ಪ್ರಕರಣಗಳ ಬೆಳವಣಿಗೆಯ ದರ ಲಾಕ್ ಡೌನ್ ನಂತರ ಶೇ.28 ರಿಂದ ಶೇ. 14 ಕ್ಕೆ ಇಳಿದಿರುವುದು ಸಮಾಧಾನದ ಸಂಗತಿ. ಆದರೂ ನಾವು ಒಗ್ಗಟ್ಟಿನಿಂದ ಹೋರಾಡಿದರೆ ಮಾತ್ರವೇ ಯಶಸ್ವಿಯಾಗಲು ಸಾಧ್ಯ ಎಂದು ಸಲಹೆ ನೀಡಿದ್ದಾರೆ.

ಇನ್ನಷ್ಟು ಕಠಿಣ ಲಾಕ್ ಡೌನ್
ಯಾವುದೇ ಕಾರಣಕ್ಕೂ ಲಾಕ್ ಡೌನ್ ನಲ್ಲಿ ಸಡಿಲಗೊಳಿಸಬಾರದು. ಲಾಕ್ ಡೌನ್ ವಿಸ್ತರಣೆ ಕುರಿತು ಸಲಹೆಗಳು ಬಂದಿವೆ. ಮುಂದಿನ 15 ದಿನಗಳಲ್ಲಿ ಲಾಕ್ ಡೌನ್ ಅನುಷ್ಠಾನದ ಕುರಿತು ಇನ್ನು ಒಂದೆರಡು ದಿನಗಳಲ್ಲಿ ಮಾರ್ಗಸೂಚಿಗಳನ್ನು ಹೊರಡಿಸಲಾಗುವುದು.

ಮುಂದಿನ ಎರಡು ವಾರಗಳ ಕಾಲ ಲಾಕ್‍ಡೌನ್ ಹಿಂದಿನ 3 ವಾರಗಳಿಗಿಂತ ವಿಭಿನ್ನವಾಗಿರುತ್ತದೆ.

ವಿಶೇಷವಾಗಿ ಆರ್ಥಿಕ ಚಟುವಟಿಕೆಗಳಿಗೆ ಸಹಾಯವಾಗುವಂತೆ, ಕೃಷಿ ಮತ್ತು ಕೈಗಾರಿಕೆ ಹಾಗೂ ಕಾರ್ಮಿಕರಿಗೆ ಉದ್ಯೋಗದ ದೃಷ್ಟಿಯಿಂದ ಕೆಲವು ಮಾರ್ಗಸೂಚಿಗಳನ್ನು ಕೇಂದ್ರ ಸರ್ಕಾರ ರೂಪಿಸಲಿದೆ. ಸರ್ಕಾರಿ ಕಚೇರಿಗಳು ಭಾಗಶಃ ನೌಕರರೊಂದಿಗೆ ಕಾರ್ಯ ನಿರ್ವಹಿಸಲಿವೆ.

* ದೇಶಾದ್ಯಂತ 142 ಹಾಟ್‍ಸ್ಪಾಟ್ ಗುರುತಿಸಿ, ಕೊರೋನಾ ನಿಯಂತ್ರಣಕ್ಕೆ ಕ್ರಮ
* ಈವರೆಗೆ 2.84 ಲಕ್ಷ ಪಿಪಿಇ ಕಿಟ್‍ಗಳ ಪೂರೈಕೆ
* ಪ್ರತಿ ಎರಡು ದಿನಗಳಿಗೊಮ್ಮೆ 2 ಲಕ್ಷ ಮಾಸ್ಕ್ ಪೂರೈಕೆಗೆ ಕ್ರಮ
* ನಗರಗಳಲ್ಲಿ ಸಿಲುಕಿಕೊಂಡಿರುವ ಕಾರ್ಮಿಕರಿಗೆ ಇರುವ¯್ಲÉೀ ಅಗತ್ಯ ಸೌಲಭ್ಯ

ಪರೀಕ್ಷಾ ಪ್ರಯೋಗಾಲಯ ತಿಂಗಳಾಂತ್ಯಕ್ಕೆ 300ಕ್ಕೆ ಹೆಚ್ಚಳ
ಪರೀಕ್ಷಾ ಪ್ರಯೋಗಾಲಯಗಳ ಸಂಖ್ಯೆ 220ಕ್ಕೆ ಹೆಚ್ಚಿಸಲಾಗಿದೆ. ಪ್ರಸ್ತುತ ದಿನಕ್ಕೆ 15,000 ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಏಪ್ರಿಲ್ 30ರ ವೇಳೆಗೆ ಪರೀಕ್ಷಾ ಪ್ರಯೋಗಾಲಯಗಳ ಸಂಖ್ಯೆಯನ್ನು 300ಕ್ಕೆ ಹೆಚ್ಚಿಸಲಾಗುವುದು. ಮೇ 31ರ ವೇಳೆಗೆ ಪ್ರತಿ ದಿನ 1 ಲಕ್ಷ ಪರೀಕ್ಷೆಗಳನ್ನು ನಡೆಸುವ ಗುರಿ ಹೊಂದಲಾಗಿದೆ.

ಪರೀಕ್ಷಾ ಸೌಲಭ್ಯ ಹೆಚ್ಚಿಸುವ ನಿಟ್ಟಿನಲ್ಲಿ ಐಸಿಎಂಆರ್‍ಗೆ ಅರ್ಜಿ ಸಲ್ಲಿಸುವಂತೆ ಖಾಸಗಿ ಪ್ರಯೋಗಾಲಯಗಳು ಮತ್ತು ವೈದ್ಯಕೀಯ ಕಾಲೇಜುಗಳಿಗೆ ಸಲಹೆ ನೀಡುವಂತೆ ಪ್ರಧಾನ ಮಂತ್ರಿಯವರು ಸೂಚಿಸಿದರು.

ಮೀನುಗಾರಿಕೆಗೆ ವಿನಾಯ್ತಿ
ಮೀನುಗಾರಿಕೆ ಮತ್ತು ಮೀನು ಸಂಸ್ಕರಣಾ ಚಟುವಟಿಕೆಗಳಿಗೆ ಲಾಕ್ ಡೌನ್ ನಿಂದ ವಿನಾಯಿತಿ ನೀಡಲಾಗಿದೆ ಎಂದು ಪ್ರಧಾನ ಮಂತ್ರಿಯವರು ತಿಳಿಸಿದರು. ಇದರಿಂದ ರಾಜ್ಯದ ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಮೀನುಗಾರರಿಗೆ ಅನುಕೂಲವಾಗಲಿದೆ.

11 ನೇ ಸ್ಥಾನದಲ್ಲಿ ರಾಜ್ಯ
ರಾಜ್ಯದಲ್ಲಿ ಶನಿವಾರ 7 ಪ್ರಕರಣಗಳು ವರದಿಯಾಗಿದ್ದು, ಒಟ್ಟಾರೆ ಸಂಖ್ಯೆ 214 ಕ್ಕೆ ಏರಿದೆ.
ಪ್ರಾರಂಭದಲ್ಲಿ 3ನೇ ಸ್ಥಾನದಲ್ಲಿದ್ದ ಕರ್ನಾಟಕವು ಈಗ 11ನೇ ಸ್ಥಾನದಲ್ಲಿದೆ.

ಲಾಕ್ ಡೌನ್ ಬಿಗಿ ಕ್ರಮಗಳು
* ಬೆಂಗಳೂರು ನಗರದಲ್ಲಿ 345 ಚೆಕ್ ಪೋಸ್ಟ್
* ಇತರ ಜಿಲ್ಲೆಗಳ ಗಡಿ ಭಾಗ ಹಾಗೂ ಅಂತರ್ ರಾಜ್ಯ ಗಡಿ ಭಾಗಗಳಲ್ಲಿ 588 ಚೆಕ್ ಪೋಸ್ಟ್ ಸ್ಥಾಪಿಸಿ ವಾಹನಗಳ ಓಡಾಟ ನಿಯಂತ್ರಣ
* ಈವರೆಗೆ 43,432 ವಾಹನಗಳ ಜಪ್ತಿ
* ಲಾಕ್ ಡೌನ್ ಉಲ್ಲಂಘನೆಗೆ ಸಂಬಂಧ 1558 ಎಫ್‍ಐಆರ್ ದಾಖಲು, 2,682 ಜನರ ಬಂಧನ
* ತಬ್ಲಿಘಿ ಜಮಾತ್‍ನ 50 ವಿದೇಶಿ ಕಾರ್ಯಕರ್ತರನ್ನು ಗುರುತಿಸಿ ಕ್ವಾರಂಟೈನ್
* ವೀಸಾ ನಿಯಮ ಉಲ್ಲಂಘನೆಯ ಪ್ರಕರಣ ದಾಖಲು
* ಬೆಂಗಳೂರು ನಗರದಲ್ಲಿ 269 ತೆಬ್ಲಿಘಿ ಜಮಾತ್‍ನ ಕಾರ್ಯಕರ್ತರು
*ಇತರ ಜಿಲ್ಲೆಗಳಲ್ಲಿ 482 ಕಾರ್ಯಕರ್ತರ ಗುರುತು ಪತ್ತೆ
* ಒಟ್ಟು 801 ಕಾರ್ಯಕರ್ತರ ಕ್ವಾರಂಟೈನ್
* ಬೆಂಗಳೂರು ನಗರ, ಇತರ ಆಯುಕ್ತಾಲಯಗಳ ವ್ಯಾಪ್ತಿಯಲ್ಲಿ 273 ಹೊಯ್ಸಳ ವಾಹನಗಳನ್ನು ನಾಗರಿಕರಿಗೆ ವೈದ್ಯಕೀಯ ಮತ್ತು ಇತರ ತುರ್ತು ಸಂದರ್ಭಗಳಿಗೆ ಬಳಕೆ

ಅಲಾಕ್‍ಡೌನ್, ಸೀಲ್‍ಡೌನ್, ಕ್ಲ್ಯಾಂಪ್‍ಡೌನ್‍ಗಳ ಕುರಿತಂತೆ ಸಾರ್ವಜನಿಕ ವಲಯದಲ್ಲಿ ಗೊಂದಲವಿದ್ದು, ಸರ್ಕಾರ ಈ ಬಗ್ಗೆ ಸ್ಪಷ್ಟಪಡಿಸಬೇಕು ಎಂದು ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿಆಗ್ರಹಿಸಿದ್ದಾರೆ.

3 ವಲಯವಾಗಿ ವಿಂಗಡಣೆ
* ಸೋಂಕಿತರ ಸಂಖ್ಯೆ ಹೆಚ್ಚಿರುವ ಜಿಲ್ಲೆಗಳು ಅಪಾಯಕಾರಿ ವಲಯ (ಡೇಂಜರ್‍ಝೋನ್)
* ಸೋಂಕಿತರ ಸಂಖ್ಯೆ ಕಡಿಮೆ ಇರುವ ಜಿಲ್ಲೆಗಳು ಎಚ್ಚರಿಕೆ ವಲಯ (ಅಲರ್ಟ್ ಝೋನ್)
* ಸೋಂಕಿತರ ಸಂಖ್ಯೆ ಅತಿ ಕಡಿಮೆ ಇರುವ ಜಿಲ್ಲೆಗಳು ಸುರಕ್ಷಿತ ವಲಯ (ಸೇಫ್ ಝೋನ್)

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ