ತುರ್ತು ಪರಿಸ್ಥಿತಿ ಬಿಟ್ಟು ಮನೆಯಿಂದ ಹೊರ ಬರಬೇಡಿ: ಕಲಬುರಗಿ ಡಿಸಿ ಮನವಿ

ಕಲಬುರಗಿ: ತುರ್ತು ಪರಿಸ್ಥಿತಿ ಬಿಟ್ಟು ಯಾರೂ ಮನೆಯಿಂದ ಸುಮ್ಮನೆ ಹೊರಗೆ ಬರಬೇಡಿ ಎಂದು ಕಲಬುರಗಿ ಜಿಲ್ಲಾಧಿಕಾರಿ ಬಿ ಶರತ್ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಜಿಲ್ಲೆಯಲ್ಲಿ ಕೊರೊನಾ ವೈರಸ್ ಗೆ ವೃದ್ಧ ಬಲಿ ಹಾಗೂ 46 ಜನ ಶಂಕಿತರಿಗೆ ಚಿಕಿತ್ಸೆ ಹಿನ್ನೆಲೆಯಲ್ಲಿ ಇಂದು ಕಲಬುರಗಿಯ ವಾರ್ತಾ ಭವನದಲ್ಲಿ ಜಿಲ್ಲಾಧಿಕಾರಿ ಬಿ.ಶರತ್ ಸುದ್ದಿಗೋಷ್ಠಿ ನಡೆಸಿದರು. ಮೃತ ವ್ಯಕ್ತಿಯ ಜೊತೆ ಒಟ್ಟು 71 ಜನರಿಗೆ ಅದರಲ್ಲಿ ನಾಲ್ಕು ಜನ ನೇರ ಸಂಪರ್ಕ ಇರುವ ಹಿನ್ನೆಲೆಯಲ್ಲಿ ಅವರಿಗೆ ಇಎಸ್‍ಐ ವಾರ್ಡ್‍ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮೃತ ವ್ಯಕ್ತಿಗೆ ಚಿಕಿತ್ಸೆ ನೀಡಿದ ಕಲಬುರಗಿಯ ಖಾಸಗಿ ಆಸ್ಪತ್ರೆಯ ನರ್ಸ್ ನನ್ನು ಸಹ ಚಿಕಿತ್ಸೆಗೆ ಒಳಪಡಿಸಲಾಗಿದೆ. ಮೃತ ವ್ಯಕ್ತಿಯ ನಾಲ್ಕು ಜನರಲ್ಲಿ ಇಬ್ಬರು ಹೆಣ್ಣು ಮಕ್ಕಳು. ಓರ್ವ ವ್ಯಕ್ತಿ ಹಾಗೂ ಮೃತ ವ್ಯಕ್ತಿ ಮೊಮ್ಮಗ ಸಹ ಹೈ ರಿಸ್ಕ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರು.

ಇದೇ ವೇಳೆ ಕೊರೊನಾ ಕಾಯಿಲೆಯಿದ್ದ ವ್ಯಕ್ತಿ ಮಗನನ್ನು ಸಂದರ್ಶನ ಮಾಡಿದ ಪತ್ರಕರ್ತರನ್ನು ಹೊರ ಹೋಗುವಂತೆ ಡಿಸಿ ಮನವಿ ಮಾಡಿದರು. ಖಾಸಗಿ ಚಾನಲ್ ಓರ್ವ ಕ್ಯಾಮೆರಾಮನ್ ಹಾಗೂ ಇಬ್ಬರು ವರದಿಗಾರರನ್ನು ಚಿಕಿತ್ಸೆಗೆ ಒಳಪಡಿಸಲು ಜಿಲ್ಲಾಡಳಿತ ಸಿದ್ಧತೆ ನಡೆಸಿದೆ. ಇಂತಹ ದುಸ್ಸಾಹಸಕ್ಕೆ ಯಾರೂ ಕೈ ಹಾಕಬೇಡಿ ಎಂದು ಡಿಸಿ ಮಾಧ್ಯಮದವರ ಬಳಿ ಮನವಿ ಮಾಡಿಕೊಂಡರು.

ಮೃತ ವೃದ್ಧನ ಮಗ ಮೊದಲು ವಿಜಯಪುರಕ್ಕೆ ಹೋಗಿ ಬಂದಿರುವುದರ ಬಗ್ಗೆ ಮಾಹಿತಿ ಕಲೆ ಹಾಕುತ್ತೇನೆ. ಅಂತ್ಯಕ್ರಿಯೆಗೆ ಒಟ್ಟು 71 ಜನ ಭಾಗವಹಿಸಿದ್ದರು. ಇವರೆಲ್ಲರು ಸೆಕೆಂಡರಿ ಕಾಂಟ್ರ್ಯಾಕ್ಟ್ ನಲ್ಲಿದ್ದಾರೆ. ಹೀಗಾಗಿ ಎಲ್ಲರ ಮೇಲೆ ಕೂಡ ನಿಗಾ ಇಡಲಾಗಿದೆ. ತುರ್ತು ಪರಿಸ್ಥಿತಿ ಹೊರತು ಪಡಿಸಿ ಕಲಬುರಗಿ ನಗರದ ಜನ ಹೊರಗಡೆ ಬರಬಾರದು ಎಂದು ಜನರಲ್ಲಿ ಕೇಳಿಕೊಂಡರು.

ತುರ್ತು ಪರಿಸ್ಥಿತಿ ಬಿಟ್ಟು ಸುಮ್ಮ ಸುಮ್ಮನೆ ಹೊರ ಬರಬೇಡಿ. ನಾವು ಏನು ಕರ್ಫ್ಯೂ ಹಾಕುತ್ತಿಲ್ಲ. ಯಾರಾದರೂ ಮನೆಯಿಂದ ಒಬ್ಬರು ಹೊರಬಂದು ಬೇಕಾದ ವಸ್ತುಗಳನ್ನು ತೆಗೆದುಕೊಳ್ಳಬೇಕು ಎಂದು ಡಿಸಿ ಸಲಹೆ ನೀಡಿದ್ದಾರೆ.

ಯಾರು ಮನೆಯಲ್ಲಿ(ಹೋಂ ಐಸೋಲೇಷನ್) ಚಿಕಿತ್ಸೆ ಪಡೆಯುತ್ತಿದ್ದಾರೋ ಅವರಿಗೆಲ್ಲ ಮನೆಗೆ ಊಟ ತಲುಪಿಸುವ ಕೆಲಸ ಮಾಡುತ್ತಿದ್ದೇವೆ. ಸದ್ಯ ಗಂಭೀರವಾದ ಪರಿಸ್ಥಿತಿಯಿದೆ. ಹೀಗಾಗಿ ಎಲ್ಲರೂ ಮನೆಯಲ್ಲಿಯೇ ಇರಬೇಕು. ಮದುವೆ ಸಹ ಎರಡು ಕುಟುಂಬಗಳ ಮಾತ್ರ ಅನುಮತಿ ಪಡೆದು ಮಾಡಬೇಕು. ಮೊದಲು ನಮಗೆ ಕಾರ್ಯಕ್ರಮದ ಬಗ್ಗೆ ಮಾಹಿತಿ ಕೊಡಬೇಕು. ನಂತರ ನಾವು ಅನುಮತಿ ನೋಡಿ ಕೊಡುತ್ತೇವೆ ಎಂದರು.

ಹೊರ ದೇಶಗಳಿಗೆ ಹೋಗಿ ಬಂದವರು ಸ್ವಯಂಪ್ರೇರಣೆಯಿಂದ ಬಂದು ಪರೀಕ್ಷೆಗೆ ಒಳಪಡಿಸಬೇಕು. ಬೇರೆಯವರು ಅತಿ ತುರ್ತು ಕೆಲಸ ಇಲ್ಲ ಅಂದ್ರೆ ಈ ಕಡೆ ಬರಬೇಡಿ. ಕಾಲ್ ಸೆಂಟರ್ ಆರಂಭಿಸುತ್ತಿದ್ದೇವೆ. ಜನರಿಗೆ ಏನಾದರೂ ಹುಷಾರಿಲ್ಲ ಅಂದ್ರೆ ಅವರು ಮಾಹಿತಿ ಕೊಡದಿದ್ರೆ ಬೇರೆಯವರು ಮಾಹಿತಿ ಕೊಡಲು ಅವಕಾಶವಿದೆ. ಈ ಮೂಲಕ ಕೊರೋನಾ ಕಾಯಿಲೆ ತಡೆಗಟ್ಟಲು ಸಹಾಯವಾಗಲಿದೆ. 2 ವಾರಗಳ ಕಾಲ ಯಾರು ಅನಾವಶ್ಯಕ ಹೊರಗೆ ಬರಬೇಡಿ. ಆರ್‍ಟಿಓ, ಸಬ್ ರಿಜಿಸ್ಟರ್ ಸೇರಿದಂತೆ ಸರ್ವಿಸ್ ಓರಿಯಂಟೆಡ್ ವ್ಯವಸ್ಥೆ ಇರುವುದಿಲ್ಲ ಎಂದು ತಿಳಿಸಿದರು.

ಕಚೇರಿಗಳು ಜನರಿಗೆ ಸೌಲಭ್ಯ ನೀಡುವುದಿಲ್ಲ. ತಂಬಾಕು ಪದಾರ್ಥದ ವಸ್ತುಗಳನ್ನು ಕೆಲ ದಿನಗಳ ಕಾಲ ಮಾರಾಟ ಮಾಡಲು ನಿಷೇಧಿಸುತ್ತಿದ್ದೇವೆ. ಕಲಬುರಗಿಯಿಂದ ಈಶಾನ್ಯ ಸಾರಿಗೆ ಬಸ್ ಸೌಲಭ್ಯಗಳಲ್ಲಿ ಸ್ವಲ್ಪ ಕಡಿತ ಮಾಡುತ್ತೇವೆ. ಈ ಬಗ್ಗೆ ಸಾರಿಗೆ ಇಲಾಖೆ ಎಂಡಿ ಜೊತೆ ಚರ್ಚಿಸಿ ಮಾಹಿತಿ ಕೊಡುತ್ತೇವೆ ಎಂದು ಹೇಳಿದರು.

 

 

 

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ