ಕಾಶ್ಮೀರದ ಕಗ್ಗಂಟು: ಒಮರ್ ಅಬ್ದುಲ್ಲಾ, ಮೆಹಬೂಬಾ ಮುಫ್ತಿ ಮೇಲೆ ಸಾರ್ವಜನಿಕ ಸುರಕ್ಷತಾ ಕಾಯ್ದೆ ಹೇರಿಕೆ

ಶ್ರೀನಗರ: ಕಳೆದ ವರ್ಷ ಆಗಸ್ಟ್​​​​​ ತಿಂಗಳಿನಲ್ಲಿ ಜಮ್ಮುಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿತ್ತು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕೈಗೊಂಡ ನಿರ್ಧಾರದ ವಿರುದ್ಧ ಪಾಕಿಸ್ತಾನ ಸೇರಿದಂತೆ ಜಮ್ಮುಕಾಶ್ಮೀರದ ರಾಜಕೀಯ ನಾಯಕರು ಕಿಡಿಕಾರಿದ್ದರು. ಹೀಗೆ ಟ್ವೀಟ್​​ ಮೂಲಕ ಕೇಂದ್ರದ ನಿರ್ಧಾರವನ್ನು ವಿರೋಧಿಸಿದ್ದ ಎನ್ಸಿ ಮುಖ್ಯಸ್ಥ ಒಮರ್ಅಬ್ದುಲ್ಲಾ ಹಾಗೂ ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿರನ್ನು 6 ತಿಂಗಳು ಗೃಹಬಂಧನದಲ್ಲಿ ಇರಿಸಲಾಗಿತ್ತು. ಬಂಧನ ಅವಧಿ ಮುಗಿಯಲು ಇನ್ನೇನು ಕೆಲವೇ ಗಂಟೆಗಳು ಬಾಕಿ ಇರುವಂತೆಯೇ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, ಮೆಹಬೂಬಾ ಮುಫ್ತಿ ಮೇಲೆ ಸಾರ್ವಜನಿಕ ಸುರಕ್ಷತಾ ಕಾಯ್ದೆ(ಪಿಎಸ್) ಹೇರಲಾಗಿದೆ. ನಿನ್ನೆ ಗುರುವಾರ ರಾತ್ರಿ ಪಿಎಸ್​​ ಹೇರುವ ಮೂಲಕ ಮತ್ತೆ ಅವಧಿ ವಿಸ್ತರಿಸಲಾಗಿದೆ.

ಕಳೆದ ವರ್ಷ ಆಗಸ್ಟ್ 5ನೇ ತಾರೀಕಿನಂದಲೂ ತನ್ನ ಹರಿ ನಿವಾಸದಲ್ಲೇ ಒಮರ್ ಗೃಹ ಬಂಧನದಲ್ಲಿದ್ದಾರೆ. ಆದರೀಗ ಗುರುವಾರ ರಾತ್ರಿ ಪೊಲೀಸ್ ಅಧಿಕಾರಿಗಳೊಂದಿಗೆ ಹರಿ ನಿವಾಸಕ್ಕೆ ಆಗಮಿಸಿದ ಮ್ಯಾಜಿಸ್ಟ್ರೇಟ್ ಹೀಗೆ ಪಿಎಸ್‌ಎ ವಾರೆಂಟ್ ನೀಡಿದ್ದಾರೆ. ಈ ಬೆನ್ನಲ್ಲೇ ಸರ್ಕಾರದ ಅತಿಥಿಗೃಹವೊಂದರಲ್ಲಿ ಬಂಧನಕ್ಕೀಡಾಗಿರುವ ಮೆಹಬೂಬಾ ಮುಫ್ತಿಗೂ ಹೀಗೆ ವಾರೆಂಟ್ ನೀಡಲಾಗಿದೆ.

 

ಈ ಸಂಬಂಧ ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಪುತ್ರಿ  ಸನಾ ಇಲ್ತಿಜಾ ಜವೇದ್  ಟ್ವೀಟ್​​ ಮಾಡಿದ್ದಾರೆ. ಸದ್ಯ ಕಾಶ್ಮೀರದಲ್ಲಿ ತಾತ್ಕಲಿಕ ಬಂಧನದಲ್ಲಿರುವ ಮೆಹಬೂಬಾ ಮುಫ್ತಿ ಟ್ವಿಟರ್​​​​​​​ ಖಾತೆ ಮೂಲಕವೇ ಟ್ವೀಟ್​​ ಮಾಡಿದ್ದ ಪುತ್ರಿ ಸನಾ ಇಲ್ತಿಜಾ ಜವೇದ್ ಹೀಗೆ ಬರೆದಿದ್ಧಾರೆ.

“ಸರ್ಕಾರವು ಸಂವಿಧಾನ ವಿರೋಧಿ ನೀತಿ ಅನುಸರಿಸುತ್ತಿದೆ . ಇಲ್ಲಿ ಸಮಾನತೆ, ಸಾಮಾಜಿಕ ನ್ಯಾಯ ಯಾವುದಕ್ಕೂ ಬೆಲೆ ಇಲ್ಲ ಎಂದು ಇಲ್ತಿಜಾ ಕಿಡಿಕಾರಿದ್ದಾರೆ.
ಈ ಹಿಂದೆಯೇ ಮಾಜಿ ಮುಖ್ಯಮಂತ್ರಿಗಳಾದ ಒಮರ್​ ಅಬ್ದುಲ್ಲಾ ಮತ್ತು ಮೆಹಬೂಬಾ ಮುಫ್ತಿ ಬಂಧನದ ವೇಳೆ ಕಾಶ್ಮೀರ ಪೊಲೀಸರು ಎಚ್ಚರವಹಿಸಿದ್ದರು.

ನಗರದೆಲ್ಲೆಡೆ ಬಿಗಿ ಪೊಲೀಸ್​​ ಬಂದೋಬಸ್ತ್​​ ಜತೆಗೆ ನಿಷೇಧಾಜ್ಞೆಯೂ ಹೇರಲಾಗಿತ್ತು. ಇಲ್ಲಿನ ಭದ್ರತೆ ಬಿಗಿಗೊಳಿಸಿ ಈಗಾಗಲೇ ಪ್ರವಾಸಿಗರನ್ನು ತಮ್ಮ ತಮ್ಮ ಸ್ಥಳಕ್ಕೆ ವಾಪಸ್​ ಕಳಿಸಲಾಗಿತ್ತು. ಮೊಬೈಲ್​, ಇಂಟರ್​ನೆಟ್​ ಸೇವೆಗಳನ್ನು ಸ್ಥಗಿತಗೊಳಿಸಲಾಗಿತ್ತು. ಯಾವುದೇ ಅನಾಹುತ ಸಂಭವಿದಂತೆ ನೋಡಿಕೊಳ್ಳಲು ಹೀಗೆ ಮಾಡಲಾಗಿತ್ತು ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದರು.

ಜಮ್ಮುಕಾಶ್ಮೀರದಲ್ಲಿ ನಡೆಯುತ್ತಿರುವ ಬೆಳವಣಿಗೆಯ ಬಗ್ಗೆ ಕೇಂದ್ರ ವಿರೋಧ ಪಕ್ಷಗಳು ಪ್ರಶ್ನಿಸುತ್ತಲೇ ಇದ್ದವು. ಏನು ನಡೆಯುತ್ತಿದೆ? ರಾಜಕೀಯ ಮುಖಂಡರು ಏನೂ ತಪ್ಪು ಮಾಡದೆ ಯಾಕೇ ಗೃಹಬಂಧನದಲ್ಲಿ ಇರಿಸಲಾಗಿದೆ? ಎಂದು ಕುಟಕಿದ್ದರು. ಕಾಶ್ಮೀರಿಗಳು ನಮ್ಮಂತೆ ನಾಗರಿಕರು ಎಂದು ಉಮರ್​ ಹಾಗೂ ಮುಫ್ತಿ ಗೃಹಬಂಧನವನ್ನು ವಿರೋಧಿಸಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ