ನಿರ್ಗಮಿತ ಮುಖ್ಯಮಂತ್ರಿ ರಘುಬರ್ ದಾಸ್ ವಿರುದ್ಧ ಎಫ್‍ಐಆರ್ ದಾಖಲಿಸಿದ ಪೋಲೀಸರು

ಜಮ್‍ತಾರಾ, ಡಿ.26- ಜಾರ್ಖಂಡ್ ನಿಯೋಜಿತ ಮುಖ್ಯಮಂತ್ರಿ ಮತ್ತು ಜೆಎಂಎಂ ಕಾರ್ಯಾಧ್ಯಕ್ಷ ಹೇಮಂತ್ ಸೊರೇನ್ ಅವರ ಜಾತಿ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿದರೆನ್ನಲಾದ ನಿರ್ಗಮಿತ ಮುಖ್ಯಮಂತ್ರಿ ಮತ್ತು ಬಿಜೆಪಿ ಮುಖಂಡ ರಘುಬರ್ ದಾಸ್ ವಿರುದ್ಧ ಪೋಲೀಸರು ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ.

ಉಪ ವಿಭಾಗೀಯ ಪೋಲೀಸ್ ಅಧಿಕಾರಿ ಅರವಿಂದ್ ಉಪಾಧ್ಯಾಯ ಈ ಪ್ರಕರಣ ಕುರಿತು ಪ್ರಾಥಮಿಕ ತನಿಖೆ ನಡೆಸಿ ನಂತರ ರಘುಬರ್ ದಾಸ್ ವಿರುದ್ಧ ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ ಎಂದು ಪೋಲೀಸ್ ವರಿಷ್ಠಾಧಿಕಾರಿ ಅಂಶುಮಾನ್‍ಕುಮಾರ್ ತಿಳಿಸಿದ್ದಾರೆ.

ಡುಮ್ಕಾ ವಿಧಾನಸಭಾ ಕ್ಷೇತ್ರದ ಮಹಿಜಮ್ ಪ್ರದೇಶದಲ್ಲಿ ಚುನಾವಣಾ ರ್ಯಾಲಿ ಪ್ರಚಾರದ ವೇಳೆ ರಘುಬರ್ ದಾಸ್ ಅವರು ತಮ್ಮ ಜಾತಿ ನಿಂದನೆ ಮಾಡಿದ್ದಾರೆ.

ಇದರಿಂದ ತಮ್ಮ ಜಾತಿ ಗೌರವಕ್ಕೆ ಧಕ್ಕೆಯಾಗಿದೆ ಎಂದು ಆರೋಪಿಸಿ ಎಸ್‍ಸಿ-ಎಸ್‍ಟಿ ಪೋಲೀಸ್ ಠಾಣೆಗೆ ಸೊರೇನ್ ದೂರು ನೀಡಿದ್ದರು.

ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಸೊರೇನ್, ದಾಸ್ ಅವರ ಹೇಳಿಕೆಯಿಂದ ನನ್ನ ಮನಸ್ಸಿಗೆ ತುಂಬಾ ನೋವಾಗಿದೆ. ನಾನು ಈ ಜಾತಿಯಲ್ಲಿ ಜನಿಸಿರುವುದು ತಪ್ಪೇ ಎಂದು ಪ್ರಶ್ನಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ