![citizenship-amendment-act-protest](http://kannada.vartamitra.com/wp-content/uploads/2019/12/citizenship-amendment-act-protest-635x381.jpg)
ನವದೆಹಲಿ, ಡಿ.21- ಭಾರತದ ಪೌರತ್ವಕ್ಕೆ ಆಧಾರ್, ಚುನಾವಣಾ ಗುರುತು ಚೀಟಿ (ವೋಟರ್ ಐಡಿ) ಮತ್ತು ಪಾಸ್ಪೋರ್ಟ್ ದಾಖಲೆಗಳಾಗುವುದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ವ್ಯಕ್ತಿಯ ಜನ್ಮ ಪ್ರಮಾಣ ಪತ್ರ, ಜನನ ಸ್ಥಳ ಪ್ರಮಾಣ ಪತ್ರ ಅಥವಾ ಇವೆರಡನ್ನೂ ಸಲ್ಲಿಸಿ ಭಾರತದ ಪೌರತ್ವಕ್ಕೆ ಸಂಬಂಧಿಸಿದಂತೆ ದಾಖಲೆಯಾಗುತ್ತದೆ ಎಂದು ತಿಳಿಸಿದೆ.
ರಾಷ್ಟ್ರೀಯ ಪೌರತ್ವ ದಾಖಲಾತಿಗೆ ಅಗತ್ಯವಿರುವ ದಾಖಲೆಗಳನ್ನು ಅಧಿಕಾರಿಗಳು ಕೇಳುತ್ತಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬುತ್ತಿರುವ ವದಂತಿಗಳ ಬಗ್ಗೆ ಕೇಂದ್ರ ಗೃಹ ಸಚಿವಾಲಯ ಸ್ಪಷ್ಟನೆ ನೀಡಿದೆ.
ದೇಶಾದ್ಯಂತ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಎನ್ಆರ್ಸಿ ಬಗ್ಗೆ ಎದ್ದಿರುವ ಪ್ರತಿಭಟನೆ ಮತ್ತು ಹಿಂಸಾಚಾರಗಳ ಹಿನ್ನೆಲೆಯಲ್ಲಿ ಆಗಾಗ ಕೇಳಲ್ಪಡುವ ಪ್ರಶ್ನೋತ್ತರಗಳು (ಎಫ್ಎಕ್ಯೂ) ಮತ್ತು ಅದಕ್ಕೆ ಉತ್ತರಗಳನ್ನು ಸಿದ್ದಪಡಿಸಿರುವ ಕೇಂದ್ರ ಸರ್ಕಾರ ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಇರುವ ಗೊಂದಲಗಳನ್ನು ನಿವಾರಿಸಿ, ವಾಸ್ತವಾಂಶಗಳನ್ನು ಜನರ ಮುಂದಿಡುವ ಪ್ರಯತ್ನ ಮಾಡಿದೆ.
ಎನ್ಆರ್ಸಿ ಬಗ್ಗೆ ಈಗ ಮಾತನಾಡುವುದು ಬಹಳ ಬೇಗನೆ ಆಗುತ್ತದೆ. ಆದರೆ, ಚುನಾವಣಾ ಗುರುತು ಚೀಟಿ, ಆಧಾರ್ಕಾರ್ಡ್ ಮತ್ತು ಪಾಸ್ಪೋರ್ಟ್ ಪೌರತ್ವಪಡೆಯಲು ಸಲ್ಲಿಸಬೇಕಾದ ದಾಖಲೆಗಳಾಗುವುದಿಲ್ಲ. ಇತರ ಉದ್ದೇಶಗಳಿಗೆ ಮತ್ತು ಭಾರತದಲ್ಲಿ ವಾಸವಿದ್ದೇವೆ ಎಂದು ಖಚಿತ ಪಡಿಸಲು ತೋರಿಸುವ ದಾಖಲೆಗಳು ಮಾತ್ರ ಆಗಿರುತ್ತವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ಬಗ್ಗೆ ಟ್ವಿಟ್ ಮಾಡಿರುವ ಕೇಂದ್ರ ಗೃಹ ಸಚಿವಾಲಯದ ವಕ್ತಾರರು, ವ್ಯಕ್ತಿಯ ಜನ್ಮ ಪ್ರಮಾಣ ಪತ್ರ, ಜನನ ಸ್ಥಳ ಪ್ರಮಾಣ ಪತ್ರ ಅಥವಾ ಇವೆರಡನ್ನೂ ಸಲ್ಲಿಸಿ ಭಾರತದ ಪೌರತ್ವಕ್ಕೆ ಸಂಬಂಧಿಸಿದಂತೆ ದಾಖಲೆಯಾಗುತ್ತದೆ. ಪೌರತ್ವ ಕಾಯ್ದೆ ಹೆಸರಿನಲ್ಲಿ ಯಾರಿಗೂ ಕಿರುಕುಳ ನೀಡುವುದಾಗಲಿ, ಅನನುಕೂಲತೆ ಮಾಡುವುದಾಗಲಿ ಮಾಡುವುದಿಲ್ಲ.
ಅನಕ್ಷರಸ್ಥ ನಾಗರಿಕರಿಗೆ ಸಮುದಾಯದ ಸದಸ್ಯರು ನೀಡುವ ಸಾಕ್ಷಿಗಳು, ಸ್ಥಳೀಯ ಸಾಕ್ಷಿಗಳು ದಾಖಲೆಗಳಾಗುತ್ತವೆ. ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ಗೃಹ ಸಚಿವಾಲಯ ಕಾನೂನು ಸಚಿವಾಲಯ ಜೊತೆ ಸಮಾಲೋಚಿಸಿ ಕಾನೂನನ್ನು ತಯಾರಿಸುತ್ತಿದೆ.
ಯಾರಿಗೂ ಸುಖಾಸುಮ್ಮನೆ ಭಾರತದ ಪೌರತ್ವ ಸಿಗುವುದಿಲ್ಲ. ಅವರ ಅರ್ಹತೆಯನ್ನು ಸಾಬೀತು ಪಡಿಸಬೇಕು. ಇಲ್ಲಿರುವ ಜನರನ್ನು ಹೊರಗೆ ಕಳುಹಿಸುವುದಿಲ್ಲ. ಜನರು ಅತಿಯಾಗಿ ಆತಂಕಗೊಂಡಿದ್ದಾರೆ. ಕಾನೂನಿನಲ್ಲಿ ಜನರಿಗೆ ಸುರಕ್ಷತೆ ನೀಡಲಾಗುತ್ತದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಸಿಎಎ ಕಾಯ್ದೆಯ 14ಎ ಸೆಕ್ಷನ್ನಡಿ ಜನರಿಗೆ ದೇಶದ ಗುರುತು ಪತ್ರ ನೀಡಲಾಗುತ್ತದೆ. ಸಿಎಎಯನ್ನು ಜಾರಿಗೆ ತರುವುದಿಲ್ಲ ಎಂದು ಕೇರಳ ಮತ್ತು ಪಶ್ಚಿಮ ಬಂಗಾಳ ಸರ್ಕಾರಗಳು ಪಟ್ಟುಹಿಡಿದಿದ್ದರೂ ಸಿಎಎ, ಎನ್ಆರ್ಸಿಗಳನ್ನು ಜಾರಿಗೆ ತರದಿರಲು ಸಾಧ್ಯವೇ ಇಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.