ಹೋರಾಟಗಳ ಮೇಲೆ ಏಕೆ ಇಷ್ಟು ದ್ವೇಷ- ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ

ಬೆಂಗಳೂರು, ಡಿ.20- ಹೋರಾಟಗಾರರನ್ನು ಕಂಡೊಡನೆ ಗುಂಡಿಕ್ಕಲು ಆದೇಶಿಸುವ ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಾವು ಹೋರಾಟದಿಂದಲೇ ಮೇಲೆ ಬಂದದ್ದು ಎಂಬುದನ್ನು ಮರೆತಂತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಟೀಕಿಸಿದ್ದಾರೆ.

ಹೋರಾಟಗಳಿಂದಲೇ ರಾಜಕೀಯದಲ್ಲಿ ಮೇಲೇರಿದವರು ಎಂಬುದನ್ನು ಅಧಿಕಾರದ ಮದ ಮರೆಸಿದಂತಿದೆ ಎಂದು ಅವರು ಟ್ವಿಟರ್‍ನಲ್ಲಿ ಟೀಕಿಸಿದ್ದಾರೆ.

ಯಡಿಯೂರಪ್ಪ ಅವರ ಹೋರಾಟಗಳನ್ನು ಹಿಂದಿನ ಸರ್ಕಾರಗಳು ಬಂದೂಕು ಗುಂಡುಗಳಿಂದ ಹತ್ತಿಕ್ಕಿದ್ದವೇ ಎಂದಿರುವ ಕುಮಾರಸ್ವಾಮಿ, ಹೋರಾಟಗಳ ಮೇಲೆ ಏಕೆ ಇಷ್ಟು ದ್ವೇಷ ಎಂದು ಪ್ರಶ್ನಿಸಿದ್ದಾರೆ.

ಅಧಿಕಾರದ ಅಮಲಿನಲ್ಲಿರುವವರ ದಾಹ, ಕ್ರೌರ್ಯಕ್ಕೆ ಪ್ರಜೆಗಳ ಹೆಣಗಳು ತೋರಣದಂತೆ ಕಟ್ಟಲ್ಪಡುತ್ತಿರುತ್ತವೆ. ಅಧಿಕಾರದ ಹಪಾಹಪಿಗಳು ಸಾವಿನ ದಳ್ಳಾಳಿಗಳಾಗುತ್ತಿದ್ದಾರೆ. ಇಂಥವರೇ ತುಂಬಿರುವ ಜನವಿರೋಧಿ ಪ್ರಭುತ್ವ ಅಂತ್ಯ ಕಾಲ ಸಮೀಪಿಸಿದೆ ಎಂದು ಹೇಳಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ