ಮುಖ್ಯಮಂತ್ರಿ ನಿವಾಸಕ್ಕೆ ಎಡತಾಕುತ್ತಿರುವ ಸಚಿವ ಸ್ಥಾನದ ಆಕಾಂಕ್ಷಿಗಳು

ಬೆಂಗಳೂರು,ಡಿ.12- ಶತಾಯಗತಾಯ ಸಂಪುಟಕ್ಕೆ ಸೇರ್ಪಡೆಯಾಗಲೇಬೇಕೆಂದು ತೀರ್ಮಾನಿಸಿರುವ ಸಚಿವ ಸ್ಥಾನದ ಆಕಾಂಕ್ಷಿಗಳು ಮುಖ್ಯಮಂತ್ರಿ ನಿವಾಸಕ್ಕೆ ಎಡತಾಕುತ್ತಿದ್ದಾರೆ.

ಬೆಳಗ್ಗೆಯಿಂದ ಸಂಜೆವರೆಗೂ ಶಾಸಕರು, ಮಾಜಿ ಸಚಿವರು ಸೇರಿದಂತೆ ಮತ್ತಿತರರು ಡಾಲರ್ಸ್ ಕಾಲೋನಿಯಲ್ಲಿರುವ ಮುಖ್ಯಮಂತ್ರಿಗಳ ಧವಳಗಿರಿ ನಿವಾಸದ ಬಾಗಿಲು ಬಡಿಯುತ್ತಿದ್ದಾರೆ.

ವಿಜಯನಗರದಿಂದ ಗೆದ್ದಿರುವ ಆನಂದ್ ಸಿಂಗ್, ಮಾಜಿ ಸಚಿವ ರಾದ ಉಮೇಶ್ ಕತ್ತಿ, ರಾಜುಗೌಡ ನಾಯಕ್ ಸೇರಿದಂತೆ ಮತ್ತಿತರರು ತಮ್ಮನ್ನು ಸಂಪುಟಕ್ಕೆ ತೆಗೆದುಕೊಳ್ಳುವಂತೆ ಮುಖ್ಯಮಂತ್ರಿ ಮೇಲೆ ಒತ್ತಡದ ತಂತ್ರ ಅನುಸರಿಸುತ್ತಿದ್ದಾರೆ.

ವಿಜಯನಗರದಿಂದ ಗೆದ್ದಿರುವ ಆನಂದ್ ಸಿಂಗ್ ಇಂದು ಸಿಎಂ ಬಿಎಸ್‍ವೈ ಅವರನ್ನು ಭೇಟಿಯಾಗಿ ಅಭಿನಂದಿಸಿದರು. ಜೊತೆಗೆ ಉಮೇಶ್ ಕತ್ತಿ, ರಾಜುಗೌಡ ನಾಯಕ್ ಮತ್ತಿತರರು ಆಗಮಿಸಿದ್ದರು.

ಈ ಬಾರಿಯ ಸಚಿವ ಸಂಪುಟ ವಿಸ್ತರಣೆ ವೇಳೆ ನನ್ನನ್ನು ಸಂಪುಟಕ್ಕೆ ತೆಗೆದುಕೊಳ್ಳುವಂತೆ ಮಾಜಿ ಸಚಿವ ಉಮೇಶ್ ಕತ್ತಿ ಕೂಡ ಮುಖ್ಯಮಂತ್ರಿಗೆ ಒತ್ತಡ ಹಾಕಿದ್ದಾರೆ.

ಹುಕ್ಕೇರಿಯಿಂದ ನಾನು 8 ಬಾರಿ ಗೆದ್ದು ಬಂದಿದ್ದೇನೆ. ನನ್ನ ಸೇವಾ ಹಿರಿತನ ಪರಿಗಣಿಸಿ ಮಂತ್ರಿ ಸ್ಥಾನ ಕೊಡುವಂತೆ ಮುಖ್ಯಮಂತ್ರಿಗೆ ಕತ್ತಿ ಮನವಿ ಸಲ್ಲಿಸಿದ್ದಾರೆ.
ಇನ್ನು ಸುರಪುರದ ಶಾಸಕ ರಾಜುಗೌಡ ನಾಯಕ್ ಕೂಡ ಹೇಗಾದರೂ ಮಾಡಿ ಮಂತ್ರಿ ಸ್ಥಾನ ಗಿಟ್ಟಿಸಿಕೊಳ್ಳಬೇಕೆಂದು ಕಸರತ್ತು ನಡೆಸುತ್ತಿದ್ದಾರೆ.

ತಮ್ಮ ಮನೆಗೆ ಬರುವ ಶಾಸಕರಿಗೆ ಬಿಎಸ್‍ವೈ ಯಾವುದೇ ಭರವಸೆ ಕೊಟ್ಟಿಲ್ಲ. ಅಂದಿನ ಪರಿಸ್ಥಿತಿ ನೋಡಿಕೊಂಡು ಸೂಕ್ತ ತೀರ್ಮಾನ ಕೈಗೊಳ್ಳುತ್ತೇನೆ ಎಂಬ ಆಶ್ವಾಸನೆಯನ್ನು ನೀಡಿದ್ದಾರೆ.

ಇದರ ಜೊತೆಗೆ ಎಂ.ಪಿ.ಕುಮಾರಸ್ವಾಮಿ, ವಿ.ಸುನೀಲ್‍ಕುಮಾರ್, ಎಸ್.ಅಂಗಾರ, ಅಪ್ಪಚ್ಚುರಂಜನ್, ಕೆ.ಜಿ.ಬೋಪಯ್ಯ, ಎಂ.ಪಿ.ರೇಣುಕಾಚಾರ್ಯ, ಅರವಿಂದ ಲಿಂಬಾವಳಿ, ತಿಪ್ಪಾರೆಡ್ಡಿ, ಗೂಳಿಹಟ್ಟಿ ಶೇಖರ್, ಖೋಟಾ ಶ್ರೀನಿವಾಸ್, ಬಸವನಗೌಡ ಪಾಟೀಲ್ ಯತ್ನಾಳ್, ಸುಭಾಷ್ ಗುತ್ತಿಗೆದಾರ್, ಚಂದ್ರಶೇಖರ್ ರೇವೂರ, ಹಾಲಾಡಿ ಶ್ರೀನಿವಾಸ್ ಶೆಟ್ಟಿ ಕೂಡ ಸಚಿವ ಸ್ಥಾನ ಆಕಾಂಕ್ಷಿಗಳಾಗಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ