ಮನೆ ಮನೆ ಪ್ರಚಾರಕ್ಕೆ ಇಂದೇ ಕೊನೆ; 15 ಕ್ಷೇತ್ರದ ಎಲ್ಲಾ ಮನೆಗಳಿಗೂ ತೆರಳುವಂತೆ ಕಾರ್ಯಕರ್ತರಿಗೆ ಸೂಚಿಸಿದ ಬಿಎಸ್​ವೈ

ಬೆಂಗಳೂರು;  ನರ್ಹ ಶಾಸಕರಿಂದ ತೆರವಾಗಿರುವ ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ನಾಳೆ ಉಪ ಚುನಾವಣೆ ನಡೆಯಲಿದ್ದು, ಮನೆ ಮನೆ ಪ್ರಚಾರಕ್ಕೆ ಇಂದೇ ಕೊನೆಯ ದಿನ. ಹೀಗಾಗಿ ಕ್ಷೇತ್ರಗಳ ಉಸ್ತುವಾರಿ ಹೊತ್ತುಕೊಂಡಿರುವ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ಇಂದು ಸಂಜೆಯ ಒಳಗೆ ಒಂದೂ ಮನೆ ಬಿಡದೆ ಕ್ಷೇತ್ರದ ಎಲ್ಲಾ ಮನೆಗಳಿಗೆ ತೆರಳಿ ಮತಯಾಚಿಸಬೇಕು ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ಸೂಚಿಸಿದ್ದಾರೆ.

ಪ್ರಸ್ತುತ ಬೆಂಗಳೂರಿನ ಮನೆಯಲ್ಲಿ ಕುಳಿತೇ ಚುನಾವಣಾ ಪ್ರಚಾರದ ಕುರಿತು ಮಾಹಿತಿ ತರಿಸಿಕೊಳ್ಳುತ್ತಿರುವ ಬಿಎಸ್​ವೈ ದೂರವಾಣಿ ಮೂಲಕ ಕ್ಷೇತ್ರ ಉಸ್ತುವಾರಿಗಳಿಗೆ ಸೂಚನೆ ನೀಡುತ್ತಿದ್ದಾರೆ. ಪ್ರತಿ ಹಳ್ಳಿಗೂ, ಪ್ರತಿ ಮನೆಗೂ ಕಾರ್ಯಕರ್ತರು ತೆರಳಿ ಮತಯಾಚಿಸಬೇಕು ಎಂದು ಆದೇಶಿಸಿದ್ದಾರೆ.

ಅಲ್ಲದೆ, ಬೂತ್ ಮಟ್ಟದಲ್ಲಿ ಉಸ್ತುವಾರಿ ಹೊತ್ತವರು ಆ ಕ್ಷೇತ್ರದಲ್ಲಿನ ಮತದಾನದ ಸಂಖ್ಯೆ ಹೆಚ್ಚುವಂತೆ ಮಾಡಿಸಬೇಕು. ನಾಯಕರು ಮತದಾರರ ಮನೆಗೆ ತೆರಳಿ ಪ್ರಚಾರ ನಡೆಸಿದಂತೆ ನಾಳೆ ಎಲ್ಲರನ್ನೂ ಕರೆತಂದು ಮತದಾನ ಮಾಡಿಸಬೇಕು ಎಂದು ಬಿಎಸ್​ವೈ ಖಡಕ್ ಸೂಚನೆ ನೀಡಿದ್ದಾರೆ ಎನ್ನಲಾಗುತ್ತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ