ಮಹಾರಾಷ್ಟ್ರ ಬಿಕ್ಕಟ್ಟು: ಶಿವಸೇನೆಗೆ ಬೆಂಬಲ ನೀಡುವ ಬಗ್ಗೆ ಸೋನಿಯಾ-ಪವಾರ್‌ ಚರ್ಚೆ

ಮುಂಬಯಿ: ಶಿವಸೇನೆ ಮತ್ತು ಬಿಜೆಪಿ ನಡುವೆ ತಲೆದೋರಿರುವ ಅಧಿಕಾರ ಹಂಚಿಕೆ ಬಿಕ್ಕಟ್ಟು ಬರೆಹರಿಯುತ್ತಿಲ್ಲ. ಇದೇ ಸಂದರ್ಭವನ್ನು ಲಾಭಕ್ಕೆ ಬಳಸಿಕೊಳ್ಳಲು ಮುಂದಾಗಿರುವ ಎನ್‌ಸಿಪಿ ಮತ್ತು ಕಾಂಗ್ರೆಸ್‌ ಶಿವಸೇನೆಯನ್ನು ಬೆಂಬಲಿಸುವ ಸಂಬಂಧ ಚರ್ಚೆ ನಡೆಸುತ್ತಿವೆ.

ಶುಕ್ರವಾರ ರಾಜ್ಯ ಕಾಂಗ್ರೆಸ್‌ ನಾಯಕರು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿಯವರನ್ನು ಭೇಟಿಯಾಗಿ ರಾಜ್ಯದ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚಿಸಿದ್ದಾರೆ. ಸಭೆ ಬಳಿಕ ಮಾತನಾಡಿರುವ ಕಾಂಗ್ರೆಸ್‌ ನಾಯಕರು, ‘ಪರಿಸ್ಥಿಯನ್ನು ಕಾದು ನೋಡಲಿದ್ದೇವೆ’ ಎಂಬುದಾಗಿ ತಿಳಿಸಿದ್ದಾರೆ.
ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ನವೆಂಬರ್‌ 4ರಂದು ನವದೆಹಲಿಯಲ್ಲಿ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಸೋನಿಯಾ ಗಾಂಧಿಯನ್ನು ಭೇಟಿಯಾಗಲಿದ್ದು, ಶಿವಸೇನೆಗೆ ಬೆಂಬಲ ನೀಡುವ ಸಂಬಂಧ ಚರ್ಚೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.
ತಲೆದೋರಿರುವ ಬಿಕ್ಕಟ್ಟು ನಿವಾರಣೆ ಸಂಬಂಧ ಬಿಜೆಪಿ ಮತ್ತು ಶಿವಸೇನೆ ನಡುವೆ ಶುಕ್ರವಾರ ಯಾವುದೇ ಪ್ರಯತ್ನ ನಡೆದಿಲ್ಲ. ಶಿವಸೇನೆ ವಕ್ತಾರ ಸಂಜಯ್‌ ರಾವತ್‌ ಮಾತ್ರ ಪಕ್ಷ ಸರಕಾರ ರಚನೆಗೆ ಸಿದ್ಧವಾಗಿದ್ದು, ಅಧಿವೇಶನದಲ್ಲಿ ಬಹುಮತ ಸಾಬೀತು ಪಡಿಸುತ್ತೇವೆ ಎಂದಿದ್ದಾರೆ.
ಒಂದೊಮ್ಮೆ ಶಿವಸೇನೆ ಮತ್ತು ಬಿಜೆಪಿ ನಡುವೆ ಸಹಮತ ಏರ್ಪಡದೇ ಇದ್ದಲ್ಲಿ, ಎನ್‌ಸಿಪಿ ಮತ್ತು ಸೇನೆಯನ್ನು ಬೆಂಬಲಿಸುವಂತೆ ಕಾಂಗ್ರೆಸ್‌ನ ಒಂದು ಬಣ ಮನವಿ ಮಾಡಿಕೊಂಡಿದೆ. ಹೀಗಿದ್ದೂ ಕಾಂಗ್ರೆಸ್‌ ಹೈಕಮಾಂಡ್‌ ಮಾತ್ರ ಇದರ ಸಾಧಕ ಬಾಧಕಗಳ ಬಗ್ಗೆ ಆಲೋಚಿಸುತ್ತಿದೆ. “ನಾವು ಪರಿಸ್ಥಿಯನ್ನು ಅವಲೋಕಿಸುತ್ತಿದ್ದೇವೆ. ಸೇನೆ ಯಾವುದೇ ಪ್ರಸ್ತಾಪಗಳನ್ನು ಇಟ್ಟಿಲ್ಲ. ಇದರ ಜೊತೆ ಯಾವುದೇ ಮಾತುಕತೆಗಳೂ ನಡೆದಿಲ್ಲ,” ಎಂಬುದಾಗಿ ಮಾಜಿ ಮುಖ್ಯಮಂತ್ರಿ ಅಶೋಕ್‌ ಚವಾಣ್‌ ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ