ಪ್ರಧಾನಿ ಮೋದಿಯವರ ದ್ವಂದ್ವ ನೀತಿಗೆ ಭಾರೀ ಆಕ್ರೋಶ

ಬೆಂಗಳೂರು,ಅ.3-ನೆರೆ ಪೀಡಿತ ಕರ್ನಾಟಕಕ್ಕೆ ಕೇಂದ್ರ ಸರ್ಕಾರದಿಂದ ಪರಿಹಾರ ಬಿಡುಗಡೆ ವಿಳಂಬವಾಗುತ್ತಿರುವುದಕ್ಕೆ ಆಕ್ರೋಶ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದು ಬಿಜೆಪಿ ಬಿಸಿ ತುಪ್ಪವಾಗಿ ಪರಿಣಮಿಸಿದೆ.

ಅದರಲ್ಲೂ ಬಿಹಾರದಲ್ಲಿ ಉಂಟಾಗಿರುವ ಪ್ರವಾಹಕ್ಕೆ ಟ್ವೀಟ್ ಮಾಡಿ ಸಾಂತ್ವನ  ಹೇಳಿರುವ ನರೇಂದ್ರ ಮೋದಿ ಅವರ ದ್ವಂದ್ವ ನೀತಿಗೆ  ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.

ಪ್ರತಿಪಕ್ಷಗಳ ಇದನ್ನೇ ಅಸ್ತ್ರವಾಗಿಟ್ಟುಕೊಂಡು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಮುಗಿಬೀಳುತ್ತಿದ್ದರೆ,  ಆಡಳಿತದಲ್ಲಿದ್ದರೂ ಬಿಜೆಪಿ ನಿಸ್ಸಹಾಯಕ ಸ್ಥಿತಿಯಲ್ಲಿದೆ.

ಬುಧವಾರ ಗಾಂಧಿ ಜಯಂತಿ  ದಿನವೂ ನೆರೆ ಪರಿಹಾರ ಭಾರೀ ಸದ್ದು ಮಾಡಿತು. ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹ ನೀಡಿದ ಹೇಳಿಕೆ ವಿವಾದದ ಕಿಡಿ ಹೊಚ್ಚಿಸಿದೆ.

ಪ್ರಧಾನಿ ನರೇಂದ್ರ ಮೋದಿಯನ್ನು ಬೈಯ್ದರೆ ಆಕಾಶಕ್ಕೆ  ಉಗುಳಿದಂತೆ ಎಂದು ಹೇಳಿದ್ದು, ಇದು ಪ್ರತಿಪಕ್ಷಗಳ ಕೆಂಗೆಣ್ಣಿಗೆ ಗುರಿಯಾಯಿತು.

ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಮನುಷ್ಯತ್ವ ಇದ್ದಿದ್ದರೆ ಕರ್ನಾಟಕಕ್ಕೆ ಭೇಟಿ ಕೊಡುತ್ತಿದ್ದರು.52 ಇಂಚಿನ ಮೋದಿಗೆ ಕರುಣೆ ಇಲ್ಲವೇ ಎಂದು ಪ್ರಶ್ನಿಸಿದ್ದಾರೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ