ತೇಜಸ್ ಲಘು ಯುದ್ಧ ವಿಮಾನದಲ್ಲಿ ಹಾರಾಟ-ನನ್ನ ಜೀವನದ ಅವಿಸ್ಮರಣೀಯ ಸಂಗತಿ-ರಕ್ಷಣಾ ಸಚಿವ ರಾಜನಾಥ ಸಿಂಗ್

ಬೆಂಗಳೂರು, ಸೆ.19- ತೇಜಸ್ ಲಘು ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ್ದು ನನಗೆ ಥ್ರಿಲ್ ನೀಡಿತು. ಇದು ನನ್ನ ಜೀವನದ ಅವಿಸ್ಮರಣೀಯ ಸಂಗತಿ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಹೇಳಿದ್ದಾರೆ.

ಬೆಂಗಳೂರಿನ ಎಚ್‍ಎಎಲ್ ವಿಮಾನ ನಿಲ್ದಾಣದಲ್ಲಿ ತೇಜಸ್ ಎಲ್‍ಸಿಎ ಫೈಟರ್ ಜೆಟ್‍ನಲ್ಲಿ ಸಹ ಪೈಲೆಟ್ ಆಗಿ 30 ನಿಮಿಷಗಳ ಕಾಲ ಬಾನಂಗಳದಲ್ಲಿ ಹಾರಾಟ ನಡೆಸಿದ ಪ್ರಥಮ ರಕ್ಷಣಾ ಸಚಿವರು ಎಂಬ ಹೆಗ್ಗಳಿಕೆಗೆ ಪಾತ್ರರಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಜಿ ಪೈಲೆಟ್ ಸೂಟ್ ಧರಿಸಿ ಕೈಯಲ್ಲಿ ಹೆಲ್ಮೆಟ್ ಹಿಡಿದು ಕನ್ನಡಕ ಧರಿಸಿದ್ದ ರಾಜನಾಥ ಸಿಂಗ್ ಹಿರಿಯ ಯುದ್ದ ಪೈಲೆಟ್‍ನಂತೆಯೇ ಕಾಣುತ್ತಿದ್ದರು. ತೇಜಸ್‍ನಲ್ಲಿ ಹಾರಾಟವು ಅತ್ಯಂತ ಹಗುರ ಮತ್ತು ಆರಾಮದಾಯಕವಾಗಿತ್ತು. ಇದು ವಾಯು ಪಡೆಗೆ ಸೇರ್ಪಡೆಯಾದ ದಿನದಿಂದಲೂ ಇದರಲ್ಲಿ ಹಾರಾಟ ನಡೆಸಬೇಕು ಎನ್ನುವುದು ನನ್ನ ಬಯಕೆಯಾಗಿತ್ತು. ಇಂದು ಅದು ಈಡೇರಿದೆ ಎಂದರು.

ನಾವು ಅಂದುಕೊಂಡಿದ್ದನ್ನು ಸಾಧಿಸಿದ್ದೇವೆ. ನಾವೀಗ ದಕ್ಷಿಣ ಏಷ್ಯಾ ಮತ್ತು ಇತರ ರಾಷ್ಟ್ರಗಳಿಗೆ ತೇಜಸ್ ಎಲ್‍ಸಿಎ ಯುದ್ಧ ವಿಮಾನಗಳನ್ನು ರಫ್ತು ಮಾಡಲು ಸಮರ್ಥರಾಗಿದ್ದೇವೆ ಎಂದು ರಕ್ಷಣಾ ಸಚಿವರು ತಿಳಿಸಿದರು.

ಭಾರತೀಯ ವಾಯು ಪಡೆಯ ಅತ್ಯಂತ ಸಮರ್ಥ ಲಘು ಯುದ್ಧ ವಿಮಾನ-ತೇಜಸ್‍ನಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್ ಸಹ ಪೈಲೆಟ್ ಆಗಿ ಹಾರಾಟ ನಡೆಸುವಲ್ಲಿ ಯಶಸ್ವಿಯಾಗಿದ್ದಾರೆ.

ಬೆಂಗಳೂರಿನ ಎಚ್‍ಎಎಲ್ ವಿಮಾನ ನಿಲ್ದಾಣದಲ್ಲಿ ಇಂದು ಬೆಳಗ್ಗೆ ರಕ್ಷಣಾ ಸಚಿವರು ಪೈಲೆಟ್ ಸಮವಸ್ತ್ರದೊಂದಿಗೆ ತೇಜಸ್ ಲಘು ಯುದ್ಧ ವಿಮಾನದ ಹಾರಾಟದಲ್ಲಿ ಪಾಲ್ಗೊಂಡು ವಿಶೇಷ ಗಮನ ಸೆಳೆದರು.

ಏರೋ ನಾಟಿಕಲ್ ಡೆವಲಪ್‍ಮೆಂಟ್ ಅಥಾರಟಿಯ ರಾಷ್ಟ್ರೀಯ ವಿಮಾನ ಹಾರಾಟ ಪರೀಕ್ಷಾ ವಿಭಾಗದ ನಿರ್ದೇಶಕರೂ ಆಗಿರುವ ಏರ್‍ವೈಸ್ ಮಾರ್ಷಲ್ ಎನ್.ತಿವಾರಿ ಅವರೊಂದಿಗೆ ಕೋ ಪೈಲೆಟ್ ಆಗಿ ರಾಜನಾಥ ಸಿಂಗ್ ತೇಜಸ್ ಲಘು ಪೈಟರ್‍ಜೆಟ್‍ನಲ್ಲಿ ಹಾರಾಟ ನಡೆಸಿ ಯುದ್ಧ ವಿಮಾನಗಳ ವಾಯು ಯಾನದಲ್ಲಿ ಪಾಲ್ಗೊಂಡ ಕೆಲವೇ ರಕ್ಷಣಾ ಸಚಿವರ ಸಾಲಿಗೆ ಸಿಂಗ್ ಸೇರ್ಪಡೆಯಾದರು.

ಈ ತೇಜಸ್ ಲಘು ಯುದ್ಧ ವಿಮಾನವನ್ನು ಬೆಂಗಳೂರಿನ ಎಚ್‍ಎಎಲ್‍ನಲ್ಲಿ ನಿರ್ಮಿಸಲಾಗಿದೆ. 13 ಟನ್ ತೂಕದ ಈ ಅತ್ಯಾಧುನಿಕ ಪೈಟರ್ ಜೆಟ್ ಮೂರು ಟನ್ ತೂಕದ ಅತ್ಯಾಧುನಿಕ ಶಸ್ತ್ರಾಸ್ತ್ರ ಮತ್ತು ಬಾಂಬ್‍ಗಳನ್ನು ಕೊಂಡೊಯ್ಯುವ ಸಾಮಥ್ರ್ಯವಿದೆ.

ಗಂಟೆಗೆ 1,350 ಕಿ.ಮೀ ವೇಗದಲ್ಲಿ ಮುನ್ನುಗ್ಗುವ ತೇಜಸ್ 500 ಬಾಂಬ್‍ಗಳನ್ನು ವೈರಿ ನೆಲೆಗಳ ಮೇಲೆ ಉಡಾಯಿಸುವ ಶಕ್ತಿ ಹೊಂದಿದೆ. ಈ ವಿಮಾನದಲ್ಲಿರುವ 73 ಕ್ಷಿಪಣಿಗಳು ಅಲ್ಪ ಅಂತರದ ಗುರಿಯನ್ನು ನಿಖರವಾಗಿ ತಲುಪಬಲ್ಲವು.

ಗಗನದಲ್ಲೇ ವೈರಿ ವಿಮಾನಗಳು ಮತ್ತು ಅವುಗಳ ಕ್ಷಿಪಣಿಗಳನ್ನು ಹೊಡೆದುರುಳಿಸುವ ಹಾಗೂ ನೆಲದ ಮೇಲೆ ಇರುವ ಶತ್ರು ಸೇನಾ ನೆಲೆಗಳನ್ನು ಕರಾರುವಾಕ್ಕು ಗುರಿಗಳ ಮೂಲಕ ಧ್ವಂಸಗೊಳಿಸುವ ಸಾಮಥ್ರ್ಯ ತೇಜಸ್ ವಿಮಾನಕ್ಕಿದೆ.

ಇದರಲ್ಲಿ ಅಳವಡಿಸಲಾಗಿರುವ ಮೆಷಿನ್ ಗನ್‍ಗಳು ಏಕ ಕಾಲದಲ್ಲಿ ನಿರಂತರವಾಗಿ ಗುಂಡುಗಳನ್ನು ಹೊರ ಹೊಮ್ಮಿಸುವ ವ್ಯವಸ್ಥೆ ಹೊಂದಿದೆ.

ಗುಂಡು ನಿರೋಧಕ ಗಾಜಿನೊಂದಿಗೆ ವಿಶೇಷ ಕಾಂಪಿಟ್‍ನಲ್ಲಿ ಇಬ್ಬರು ಪೈಲೆಟ್‍ಗಳು ಕುರಿತು ನಿಯೋಜಿತ ಕಾರ್ಯಾಚರಣೆ ನಡೆಸಲು ಅಗತ್ಯವಾದ ಎಲ್ಲಾ ಅತ್ಯಾಧುನಿಕ ಸಾಫ್ಟ್‍ವೇರ್ ಅಳವಡಿತ ಮಾರ್ಗದರ್ಶಿ ತಂತ್ರಜ್ಞಾನ ಅಳವಡಿಸಲಾಗಿದೆ.

2011ರಲ್ಲಿ ಭಾರತೀಯ ವಾಯು ಪಡೆಗೆ ಸೇರ್ಪಡೆಯಾಗಿ ಅತ್ಯಂತ ಯಶಸ್ವಿಯಾಗಿ ತೇಜಸ್ ಕಾರ್ಯ ನಿರ್ವಹಿಸುತ್ತಿದೆ. ಈ ಲಘು ವಿಮಾನ ಎಚ್‍ಎಎಲ್‍ನಲ್ಲೇ ದೇಶೀಯವಾಗಿ ತಯಾರಾಗಿದ್ದರೂ ಕೆಲವು ಸೂಕ್ಷ್ಮ ಬಿಡಿ ಭಾಗಗಳು ಮಾತ್ರ ವಿದೇಶಿ ಮೂಲದ್ದು.

ಐಎಎಫ್‍ನಲ್ಲಿ ಈಗಾಗಲೇ ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತಿರುವ ಫೈಟರ್ ಜೆಟ್‍ಗಳಲ್ಲಿ ತೇಜಸ್ ಲೈಟ್ ಕಾಂಬ್ಯಾಟ್ ವಿಮಾನಗಳಿಗೆ ವಿಶೇಷ ಸ್ಥಾನಮಾನವಿದೆ.

ಈ ಹಿಂದೆ ಜಾರ್ಜ್ ಫರ್ನಾಂಡೀಸ್, ಮನೋಹರ್ ಪರಿಕ್ಕರ್ ಮತ್ತು ನಿರ್ಮಲಾ ಸೀತಾರಾಮನ್ ಅವರು ಭಾರತೀಯ ವಾಯು ಪಡೆಯ ಯುದ್ಧ ವಿಮಾನಗಳಲ್ಲಿ ಸಹ ಪೈಲೆಟ್ ಆಗಿ ಯಶಸ್ವಿ ಹಾರಾಟ ನಡೆಸಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ