ಪಾಕಿಸ್ತಾನದಿಂದ ಮತ್ತೊಂದು ಗೊಡ್ಡು ಬೆದರಿಕೆ

ಇಸ್ಲಾಮಾಬಾದ್/ನವದೆಹಲಿ,ಆ.27- ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ ಭಾರತೀಯ ಸಂವಿಧಾನದ 370ನೇ ವಿಧಿ ರದ್ಧುಗೊಳಿಸಿದರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ದಿನಕ್ಕಕೊಂದು ಹೇಳಿಕೆ ನೀಡಿ ವಿವಾದಕ್ಕೆ ಕಾರಣವಾಗಿರುವ ಪಾಕಿಸ್ತಾನ ಈಗ ಮತ್ತೊಂದು ಗೊಡ್ಡು ಬೆದರಿಕೆ ಹಾಕಿದೆ.

ಕಾಶ್ಮೀರ ವಿಚಾರವಾಗಿ ಪರಮಾಣು ಅಸ್ತ್ರ ಸಹಿತ ಪಾಕಿಸ್ತಾನ ಯಾವುದೇ ಹಂತಕ್ಕೂ ಹೋಗಲು ಸಿದ್ದ ಎಂದು ಹೇಳುವ ಮೂಲಕ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಭಾರತವನ್ನು ಬೆದರಿಸುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.

ಅತ್ತ ಜಿ -7 ಶೃಂಗಸಭೆಯ ಹೊರತಾಗಿ ನಡೆದ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸುತ್ತಿರುವ ಬೆನ್ನಲ್ಲೇ ಇತ್ತ ಪಾಕ್ ಪ್ರಧಾನಿ ಭಾರತಕ್ಕೆ ನೇರವಾಗಿಯೇ ಪರಮಾಣು ಬೆದರಿಕೆ ಹಾಕಿದ್ದು, ಭಾರತ ನಮ್ಮನ್ನು ದಿವಾಳಿಯಾಗಿಸಲು ಪ್ರಯತ್ನಿಸಿದೆ ಎಂದು ಆರೋಪಿಸಿದ್ದಾರೆ.

ಅಲ್ಲದೆ ಮತ್ತೊಮ್ಮೆ ಕಾಶ್ಮೀರದ ಬಗ್ಗೆ ಕ್ಯಾತೆ ತೆಗೆದಿರುವ ಇಮ್ರಾನ್ ಖಾನ್, ಕಾಶ್ಮೀರ ವಿಚಾರವಾಗಿ ನಿರ್ಧರಿಸುವ ಸಮಯ ಬಂದಿದ್ದು, ನಿರ್ಣಾಯಕ ತೀರ್ಮಾನ ಕೈಗೊಳ್ಳಬೇಕಿದೆ. ಕಾಶ್ಮೀರ ವಿಚಾರವಾಗಿ ಭಾರತದೊಂದಿಗೆ ಮಾತುಕತೆ ನಡೆಸಿದಾಗ ಭಯೋತ್ಪಾದನೆ ಬಗ್ಗೆ ಆರೋಪ ಮಾಡಿತು. ಭಯೋತ್ಪಾದನೆ ಹರಡಿದೆ ಎಂದು ನಮ್ಮ ಮೇಲೆ ಆರೋಪ ಹೊರಿಸಲು ಭಾರತವು ಅವಕಾಶವನ್ನು ಹುಡುಕುತ್ತಲೇ ಇದೆ.

ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿರುವ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸುವ ಭಾರತ ಸರ್ಕಾರದ ನಿರ್ಧಾರದಿಂದ ವಿಚಲಿತವಾಗಿರುವ ಪಾಕಿಸ್ತಾನವು ವಿಶ್ವದಾದ್ಯಂತ ಕೋಲಾಹಲ ಮೂಡಿಸಲು ಪ್ರಯತ್ನಿಸುತ್ತಿದೆ. ಆದರೆ, ಕಾಶ್ಮೀರ ವಿಚಾರವಾಗಿ ವಿಶ್ವದ ಹಲವು ರಾಷ್ಟ್ರಗಳು ಪಾಕಿಸ್ತಾನಕ್ಕೆ ತಮ್ಮ ಬೆಂಬಲ ನೀಡಿಲ್ಲ. ಇತ್ತೀಚೆಗೆ ವಿಶ್ವಸಂಸ್ಥೆಯಲ್ಲೂ ಪಾಕಿಸ್ತಾನವು ಕಾಶ್ಮೀರದ ವಿಚಾರವಾಗಿ ದೊಡ್ಡ ಹಿನ್ನಡೆ ಅನುಭವಿಸಿತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ