ರಾಜಕೀಯ ಪ್ರೇರಿತವಾಗಿ ಸಿಬಿಐ ತನಿಖೆಯನ್ನು ಬಳಸಿಕೊಳ್ಳಬಾರದು-ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ

ಬೆಂಗಳೂರು, ಆ.19-ಟೆಲಿಪೋನ್ ಕದ್ದಾಲಿಕೆಯ ಸಿಬಿಐ ಪ್ರಕರಣದಲ್ಲಿ ಯಾರು ಯಾರಿಗೆ ಪೋನ್ ಮಾಡಿದರು ಎಂಬ ಅಂಶಗಳನಷ್ಟೇ ತನಿಖೆ ಮಾಡದೆ ಪೋನ್ ಸಂಭಾಷಣೆ ವೇಳೆ ಪ್ರಸ್ತಾಪವಾಗಿರುವ ಆಪರೇಷನ್ ಕಮಲದ ಆಮಿಷದ ಬಗ್ಗೆಯೂ ಸಮಗ್ರ ತನಿಖೆಯಾಗಬೇಕೆಂದು ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯ ಪ್ರೇರಿತವಾಗಿ ಸಿಬಿಐ ತನಿಖೆಯನ್ನು ಬಳಸಿಕೊಳ್ಳಬಾರದು.ಟೆಲಿಪೋನ್ ಕದ್ದಾಲಿಕೆ ಪ್ರಕರಣ ಕೇವಲ ಒಂದೇ ದೃಷ್ಟಿಕೋನದಲ್ಲಿ ನಡೆಯಬಾರದು ಎಂದರು.

ಟೆಲಿಪೋನ್ ಕದ್ದಾಲಿಕೆ ವೇಳೆ ಕೆಲವು ಮಹತ್ವದ ಅಂಶಗಳು ಪ್ರಸ್ತಾಪವಾಗಿದ್ದು, ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಲು ಕೆಲವು ಆಮಿಷಗಳನ್ನು ಒಡ್ಡಿರುವುದಾಗಿ ಆರೋಪಗಳಿವೆ. ಆ ಬಗ್ಗೆಯೂ ತನಿಖೆ ನಡೆಯಬೇಕಿದೆ ಎಂದು ಹೇಳಿದರು.

ಹಗರಣದ ಸಂಪೂರ್ಣ ವಿಚಾರಣೆ ನಡೆಯಬೇಕು. ಯಾರು ಯಾರಿಗೆ, ಯಾವ ಕಾರಣಕ್ಕಾಗಿ ಕರೆ ಮಾಡಿದ್ದರು? ಕರೆ ಮಾಡಿದ ವೇಳೆ ನಡೆದ ಸಂಭಾಷಣೆಯ ಸಾರಾಂಶಗಳೇನು? ಒಂದು ವೇಳೆ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಲು ಕುದುರೆ ವ್ಯಾಪಾರ ನಡೆದಿದ್ದರೆ, ವಿವಿಧ ರೀತಿಯ ಆಮಿಷಗಳನ್ನು ಒಡ್ಡಿದ್ದರೆ ಅವುಗಳ ಕುರಿತೂ ತನಿಖೆಯಾಗಬೇಕು ಎಂದು ಮಲ್ಲಿಕಾರ್ಜುನ ಖರ್ಗೆ ಒತ್ತಾಯಿಸಿದರು.

ರಾಜ್ಯದ ನೆರೆ ಪರಿಸ್ಥಿತಿಗೆ ಕೇಂದ್ರ ಸರ್ಕಾರ ಸರಿಯಾಗಿ ಸ್ಪಂದಿಸಿಲ್ಲ ಎಂದು ಅವರು ಇದೇ ಸಂದರ್ಭದಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ