ಒಂದು ವಾರದ ಕಾಲ ಜೆಡಿಎಸ್ ಜಿಲ್ಲಾವಾರು ಮುಖಂಡರ ಸಭೆ

ಬೆಂಗಳೂರು, ಆ.19- ಪಕ್ಷ ಸಂಘಟನೆ ಹಾಗೂ ಮುಂಬರುವ ಚುನಾವಣೆಗಳಿಗೆ ಕಾರ್ಯಕರ್ತರನ್ನು ಸಜ್ಜುಗೊಳಿಸುವ ಉದ್ದೇಶದಿಂದ ನಿರಂತರವಾಗಿ ಸಭೆಗಳನ್ನು ನಡೆಸುತ್ತಿರುವ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಇಂದಿನಿಂದ ಒಂದು ವಾರದ ಕಾಲ ಜಿಲ್ಲಾವಾರು ಮುಖಂಡರ ಸಭೆ ನಡೆಸಲಿದ್ದಾರೆ.

ಶನಿವಾರದವರೆಗೆ ನಿರಂತರವಾಗಿ ಜಿಲ್ಲಾವಾರು ಮುಖಂಡರ ಸಭೆಗಳನ್ನು ಜೆಪಿ ಭವನದಲ್ಲಿ ನಡೆಸಲು ಉದ್ದೇಶಿಸಲಾಗಿದೆ.

ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ಇಂದು ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳ ಜಿಲ್ಲಾಧ್ಯಕ್ಷರು, ಮುಖಂಡರು, ಶಾಸಕರು, ಮಾಜಿ ಸಚಿವರ ಸಭೆ ನಡೆಸಲಾಯಿತು.

ಸಭೆಯಲ್ಲಿ ದೇವೇಗೌಡರಲ್ಲದೆ ಎರಡು ಜಿಲ್ಲೆಗಳ ಪ್ರಮುಖ ಮುಖಂಡರು ಕೂಡ ಪಾಲ್ಗೊಂಡಿದ್ದರು.ಪಕ್ಷ ಸಂಘಟನೆ, ಬಿಜೆಪಿ ಸರ್ಕಾರದ ವಿರುದ್ಧ ನಡೆಸುವ ಹೋರಾಟದ ರೂಪುರೇಷೆ ಹಾಗೂ ಪದಾಧಿಕಾರಿಗಳ ಬದಲಾವಣೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಗಿದೆ.

ನಾಳೆ ಮಂಡ್ಯ, ರಾಮನಗರ, 21ರಂದು ಚಾಮರಾಜನಗರ, ಮೈಸೂರು, 22ರಂದು ಚಿತ್ರದುರ್ಗ, ದಾವಣಗೆರೆ, 23ರಂದು ಬಳ್ಳಾರಿ, ಕೊಪ್ಪಳ, ಬೀದರ್, 24ರಂದು ತುಮಕೂರು, ಬೆಂಗಳೂರುನಗರ ಮತ್ತು ಗ್ರಾಮಾಂತರ ಜಿಲ್ಲೆಗಳ ಸಭೆ ನಡೆಯಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ