ರಾಮಜನ್ಮ ಭೂಮಿ-ಬಾಬರಿ ಮಸೀದಿ ಭೂ ವಿವಾದ ಪ್ರಕರಣ-ನಾಲ್ಕನೇ ದಿನವೂ ಮುಂದುವರಿದ ವಿಚಾರಣೆ

ನವದೆಹಲಿ, ಆ.9- ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮಜನ್ಮ ಭೂಮಿ-ಬಾಬರಿ ಮಸೀದಿ ಭೂ ವಿವಾದ ಪ್ರಕರಣದ ವಿಚಾರಣೆಯನ್ನು ಸುಪ್ರೀಂಕೋರ್ಟ್ ನಾಲ್ಕನೆ ದಿನವಾದ ಇಂದು ಕೂಡ ಮುಂದುವರಿಸಿದೆ.

ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗಯ್ ನೇತೃತ್ವದ ಪಂಚ ನ್ಯಾಯಾಧೀಶರ ಸಾಂವಿಧಾನಿಕ ಪೀಠ ಅಯೋಧ್ಯೆ-ಬಾಬರಿ ಮಸೀದಿ ಭೂ ವಿವಾದ ಕುರಿತು ದಿನನಿತ್ಯದ ವಿಚಾರಣೆ ನಾಲ್ಕನೇ ದಿನವಾದ ಇಂದೂ ಮುಂದುವರಿಯಿತು. ಅರ್ಜಿದಾರರಲ್ಲಿ ಒಬ್ಬರಾದ ಮುಸ್ಲಿಂ ಪಕ್ಷಗಾರ ವಾರದ ಎಲ್ಲ ದಿನವೂ ವಿಚಾರಣೆ ನಡೆಸುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಈ ರೀತಿ ಶೀಘ್ರವಾಗಿ ವಿಚಾರಣೆ ನಡೆಸಿದರು ಸಹಕಾರ ನೀಡಲು ತೊಂದರೆಯಾಗುತ್ತದೆ ಎಂಬ ಅಂಶವನ್ನು ಮುಸ್ಲಿಂ ಪಕ್ಷಗಾರರ ಪರ ಹಿರಿಯ ವಕೀಲ ಅಶೋಕ್ ಧವನ್ ಕೋರ್ಟ್ ಗಮನಕ್ಕೆ ತಂದರು.

ಹೊಸ ಪ್ರಕರಣಗಳ ವಿಚಾರಣೆಗೆ ಮಾತ್ರ ಮೀಸಲಾದ ಶುಕ್ರವಾರ(ಇಂದಿನ ದಿನ)ವನ್ನು ಸುಪ್ರೀಂಕೋರ್ಟ್ ಅಯೋಧ್ಯೆ ವಿಚಾರಣೆಗಾಗಿ ಕೈಗೆತ್ತಿಕೊಂಡು ಹಳೆ ಸಂಪ್ರದಾಯವನ್ನು ಮುರಿಯಿತು. ರಾಮಲಲ್ಲಾ ವಿರಾಜಮಾನ್ ಪರ ವಕೀಲರು ತಮ್ಮ ಹೇಳಿಕೆಗಳನ್ನು ದಾಖಲಿಸಲು ಮುಂದಾದಾಗ ಈ ಬಗ್ಗೆ ಧವನ್ ಆಕ್ಷೇಪ ವ್ಯಕ್ತಪಡಿಸಿದರು.

ವಾರದ ಎಲ್ಲ ದಿನಗಳೂ ಈ ಪ್ರಕರಣದ ವಿಚಾರಣೆ ನಡೆಸಿದರೆ ಇದರಿಂದ ನಮಗೆ ಸಿದ್ಧತೆಗೆ ಸಮಯದ ಅಭಾವ ಎದುರಾಗುತ್ತದೆ. ಆದ್ದರಿಂದ ಈ ಬಗ್ಗೆ ಪರಿಶೀಲಿಸಬೇಕೆಂದು ಸುಪ್ರೀಂಕೋರ್ಟ್‍ನನ್ನು ಕೋರಿದರು. ಇದಕ್ಕೆ ಸಮ್ಮತಿ ನೀಡಿದ ಮುಖ್ಯ ನ್ಯಾಯಮೂರ್ತಿ ಅವರು ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಧವನ್‍ಗೆ ಭರವಸೆ ನೀಡಿದರು. ನಂತರ ವಿಚಾರಣೆ ಮುಂದುವರಿಯಿತು.

ರಾಮಲಲ್ಲಾ ಬುಧವಾರದಿಂದ ಆರಂಭಿಸಿರುವ ತನ್ನ ವಾದ ಮತ್ತು ಸಮರ್ಥನೆಗಳನ್ನು ಇಂದು ಕೂಡ ಮಂಡಿಸಿತು.ರಾಮಲಲ್ಲಾ ವಿರಾಜ್‍ಮಾನ್ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಕೆ.ಪ್ರಸಾರನ್ ಅಯೋಧ್ಯೆಯಲ್ಲೇ ಶ್ರೀರಾಮ ಜನಿಸಿದ ಎಂಬುದಕ್ಕೆ ದೇಶದ ಕೋಟ್ಯಂತರ ಜನರಲ್ಲಿರುವ ದೃಢ ಮತ್ತು ಅಚಲ ನಂಬಿಕೆಯೇ ಪ್ರಮುಖ ಸಾಕ್ಷ್ಯಧಾರವಾಗಿದೆ ಎಂದು ನ್ಯಾಯಾಲಯಕ್ಕೆ ನಿನ್ನೆ ತಿಳಿಸಿದ್ದರು.

ಬುಧವಾರ ಸುಪ್ರೀಂನಲ್ಲಿ ನಿರ್ಮೋಹಿ ಅಖಾಡ ಪರ ಹಿರಿಯ ವಕೀಲ ಸುಶೀಲ್ ಜೈನ್ ಅವರು ಕಳೆದ ಎರಡು ದಿನಗಳಿಂದ ಮಂಡಿಸಿದ ವಾದ ಮತ್ತು ಸಮರ್ಥನೆಗಳನ್ನು ಆಲಿಸಿದ ಪೀಠವು ನಿಮ್ಮ ವಾದವನ್ನು ಪುಷ್ಟೀಕರಿಸುವುದಕ್ಕೆ ಸಂಬಂಧಪಟ್ಟ ಸಾಕ್ಷ್ಯಧಾರಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಸೂಚಿಸಿ ರಾಮಲಲ್ಲಾ ವಕೀಲರ ವಾದದ ವಿಚಾರಣೆ ಮುಂದುವರಿಸಿತು.

ನ್ಯಾಯಮೂರ್ತಿಗಳಾದ ಎಸ್.ಎ.ಬೋಬಡೆ, ಡಿ.ವೈ.ಚಂದ್ರಚೂಡ್, ಅಶೋಕ್ ಭೂಷಣ್ ಮತ್ತು ಎಸ್.ಎ.ನಜೀರ್ ಪಂಚ ನ್ಯಾಯಪೀಠದಲ್ಲಿದ್ದಾರೆ.

ಸುಪ್ರೀಕೋರ್ಟ್ ನಿವೃತ್ತ ನ್ಯಾಯಮೂರ್ತಿ ಖಲೀಫುಲ್ಲಾ ನೇತೃತ್ವದ ತ್ರಿಸದಸ್ಯರ ಮಧ್ಯಸ್ಥಿಕೆ ಸಮಿತಿಯ ಸಂಧಾನ ವಿಫಲವಾದ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಈ ವಿವಾದದ ದಿನನಿತ್ಯದ ವಿಚಾರಣೆ ಕೈಗೆತ್ತಿಕೊಂಡಿದೆ.

ರಾಮಜನ್ಮಭೂಮಿ, ಬಾಬರಿ ಮಸೀದಿ ಭೂ ವಿವಾದಕ್ಕೆ ಸಂಬಂಧಿಸಿದಂತೆ ಒಟ್ಟು 14 ಅರ್ಜಿದಾರರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ. 2010ರಲ್ಲಿ ಅಲಹಾಬಾದ್ ಹೈಕೋರ್ಟ್ ನೀಡಿದ್ದ ತೀರ್ಪು ಪ್ರಶ್ನಿಸಿ ಈ ಮೇಲ್ಮನವಿಗಳನ್ನು ಸಲ್ಲಿಸಲಾಗಿದೆ.

ಅಲಹಾಬಾದ್ ಹೈಕೋರ್ಟ್ ತನ್ನ ತೀರ್ಪಿನಲ್ಲಿ 2.77 ಎಕರೆ ಭೂ ಪ್ರದೇಶವನ್ನು ಸುನ್ನಿ ವಕ್ಫ್ ಮಂಡಳಿ ನಿರ್ಮೋಹಿ ಅಖಾಡ ಹಾಗೂ ರಾಮಲಲ್ಲಾ ಈ ಮೂವರು ಪಕ್ಷದಾರರಿಗೆ ಸಮನಾಗಿ ಹಂಚಿಕೆ ಮಾಡಿತ್ತು. ಆದರೆ ಇದರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಮೇಲ್ಮನವಿಗಳನ್ನು ಸಲ್ಲಿಸಲಾಗಿತ್ತು.

ಈ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸಲು ಸುಪ್ರೀಂಕೋರ್ಟ್ ಆದೇಶದ ಮೇರೆಗೆ ರಚಿಸಲಾಗಿದ್ದ ತ್ರಿಸದಸ್ಯ ಮಧ್ಯಸ್ಥಿಕೆ ಸಮಿತಿ ನಾಲ್ಕು ತಿಂಗಳಿಗೂ ಹೆಚ್ಚು ಕಾಲ ಸಂಧಾನ ಪ್ರಕ್ರಿಯೆ ಕೈಗೊಂಡು ಸರ್ವೋಚ್ಚ ನ್ಯಾಯಾಲಯಕ್ಕೆ ತನ್ನ ಮಧ್ಯಂತರ ವರದಿ ಸಲ್ಲಿಸಿತ್ತು.

ಆದರೆ, ವಿವಾದ ಇತ್ಯರ್ಥ ಸಂಧಾನದಲ್ಲಿ ಸಮಿತಿ ವಿಫಲವಾಗಿದೆ ಎಂದು ಸುಪ್ರೀಂಕೋರ್ಟ್ ನಿರ್ಣಯಿಸಿ ದಿನನಿತ್ಯ ವಿಚಾರಣೆ ಮುಂದುವರಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ