ಮುಖ್ಯ ಮಂತ್ರಿ ವಾಸ್ತವ್ಯ ವಿವರಣೆ

ಜಲಧಾರೆ ಮೂಲಕ ಸಮಗ್ರ ರಾಯಚೂರು ಜಿಲ್ಲೆಗೆ ಕುಡಿಯುವ ನೀರು: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ

ರಾಯಚೂರು, ಜೂ.26: ಜಲಧಾರೆ ಯೋಜನೆಯ ಮೂಲಕ ಸಮಗ್ರ ರಾಯಚೂರು ಜಿಲ್ಲೆಗೆ ಕುಡಿಯುವ ನೀರು ಒದಗಿಸುವ ಪ್ರಸ್ತಾವನೆ ಸರಕಾರದ ಮುಂದಿದ್ದು ಅದನ್ನು ಶೀಘ್ರ ಅನುಮೋದನೆ ನೀಡುವುದರ ಮೂಲಕ ಇಡೀ ಜಿಲ್ಲೆಗೆ ನೀರು ಒದಗಿಸಲಾಗುವುದು ಎಂದು ಮುಖ್ಯಮಂತ್ರಿಗಳಾದ ಎಚ್‌.ಡಿ.ಕುಮಾರಸ್ವಾಮಿ ಅವರು ಹೇಳಿದ್ದಾರೆ.

ಮಾನ್ವಿ ತಾಲೂಕಿನ ಕರೇಗುಡ್ಡದಲ್ಲಿ ಜನತಾದರ್ಶನ, ಗ್ರಾಮವಾಸ್ತವ್ಯ ಹಾಗೂ ಮಾನ್ವಿ ವಿಧಾನಸಭಾ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ರೈಲಿನ ಮೂಲಕ ಬೆಂಗಳೂರಿನಿಂದ ಆಗಮಿಸಿ ರಾಯಚೂರು ಅತಿಥಿಗೃಹದಲ್ಲಿ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಬುಧವಾರ ಬೆಳಗ್ಗೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ಬರಗಾಲಕ್ಕೆ ಸಂಬಂಧಿಸಿದಂತೆ ಹಾಗೂ ಅದರ ನಿರ್ವಹಣೆಗೆ ಸಂಬಂಧಿಸಿದಂತೆ ಚರ್ಚಿಸಿದ ಮುಖ್ಯಮಂತ್ರಿಗಳು ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಿ, ಎಲ್ಲಿಯೂ ನೀರಿನ ಸಮಸ್ಯೆ ಉದ್ಭವಿಸದಂತೆ ನೋಡಿಕೊಳ್ಳಿ ಎಂದು ಡಿಸಿ ಶರತ್ ಹಾಗೂ ಜಿಪಂ ಸಿಇಒ ನಳಿನಿ ಅತುಲ್ ಅವರಿಗೆ ಖಡಕ್ ಆಗಿ ಸೂಚನೆ ನೀಡಿದರು.

ಬರಗಾಲದ ಸಮರ್ಪಕ ನಿರ್ವಹಣೆಗೆ ಸಂಬಂಧಿಸಿದಂತೆ ಹಣಕಾಸಿನ ಕೊರತೆ ಇಲ್ಲ ಎಂದು ಡಿಸಿ ಶರತ್ ಅವರು ಸಿಎಂ ಅವರಿಗೆ ತಿಳಿಸಿದರು.

ಮಾನ್ವಿ ವಿಧಾನಸಭಾ ಕ್ಷೇತ್ರದಲ್ಲಿ ಲೋಕೋಪಯೋಗಿ ಇಲಾಖೆ, ಸಣ್ಣ ನೀರಾವರಿ, ಪಶುಸಂಗೋಪನೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಪ್ರವಾಸೋದ್ಯಮ ಇಲಾಖೆ, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ, ಎಚ್ ಕೆಆರ್ಡಿಬಿ, ಬಿಸಿಎಂ ಇಲಾಖೆಗಳಿಗೆ ಸಂಬಂಧಿಸಿದ 8144.99 ಲಕ್ಷ ರೂ.ಗಳ 38ಕಾಮಗಾರಿಗಳು ಶಂಕುಸ್ಥಾಪನೆ ಮತ್ತು ಉದ್ಘಾಟನೆಯಾಗಲಿವೆ ಎಂದು ಅವರು ತಿಳಿಸಿದರು.

ಸಚಿವರಾದವ ಸಾ.ರಾ.ಮಹೇಶ, ಶಿವಶಂಕರ ರೆಡ್ಡಿ, ವೆಂಕಟರಾವ ನಾಡಗೌಡ, ಶಾಸಕ ರಾಜಾವೆಂಕಟಪ್ಪ ನಾಯಕ್ , ಮುಖ್ಯಮಂತ್ರಿಗಳ ಮಾಧ್ಯಮ ಕಾರ್ಯದರ್ಶಿ ಎಚ್.ಬಿ.ದಿನೇಶ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

ಬೆಂಗಳೂರು, ಜೂನ್ 26: ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಇಂದು ಬೆಳಿಗ್ಗೆ ರಾಯಚೂರು ಜಿಲ್ಲೆಯ ಅಭಿವೃದ್ಧಿ ಕುರಿತಂತೆ ರಾಯಚೂರಿನ ಪ್ರವಾಸಿ ಮಂದಿರದಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ್ ನಾಡಗೌಡ, ಜಿಲ್ಲಾಧಿಕಾರಿ ಶರತ್, ಐಜಿಪಿ,ಜಿಪಂ‌ ಸಿಇಒ ಮತ್ತು ಜಿಲ್ಲಾ ರಕ್ಷಣಾಧಿಕಾರಿ ಉಪಸ್ಥಿತರಿದ್ದರು

 ರಾಯಚೂರು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ 3 ಸಾವಿರ ಕೋಟಿ ರೂ: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ
ರಾಯಚೂರು, ಜೂ.26

ಈಗಾಗಲೇ ರಾಯಚೂರು ಜಿಲ್ಲೆಯ ಸಮಗ್ರ ಅಭಿವೃದ್ಧಿ ಸಂಬಂಧಿಸಿದಂತೆ ಆದ್ಯತೆ ಮೇರೆಗೆ ಯಾವ ಕೆಲಸಗಳಿಗೆ ಅದ್ಯತೆ ನೀಡಬೇಕು ಎಂಬ ಮಾಹಿತಿಯನ್ನು ಸಚಿವರು, ಶಾಸಕರು ಹಾಗೂ ಅಧಿಕಾರಿಗಳಿಂದ ಪಡೆದುಕೊಂಡಿದ್ದು,

ಗ್ರಾಮವಾಸ್ತವ್ಯದ ಜತೆಗೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದಂತೆ ವಿವಿಧ ಕಾರ್ಯಕ್ರಮಗಳಿಗಾಗಿ 3 ಸಾವಿರ ಕೋಟಿ ರೂ. ವೆಚ್ಚದ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ತಿಳಿಸಿದರು.

ರಾಯಚೂರಿನ ಅತಿಥಿಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕ್ಯಾಬಿನೆಟ್ ನಲ್ಲಿ ರಾಯಚೂರು ವಿವಿ‌ ಕುರಿತು ಸುಗ್ರಿವಾಜ್ಷೆ ಮಾಡಿ ರಾಜ್ಯಪಾಲರಿಗೆ ಕಳುಹಿಸಲಾಗಿತ್ತು. ವಿವರಣೆಯನ್ನು ರಾಜ್ಯಪಾಲರಿಗೆ ಕೇಳಿದ್ದು, ಆ ಕುರಿತು ಮನವೋಲಿಸಲಾಗುವುದು ಎಂದರು.

ಐಐಐಟಿಗೆ ಭೂಮಿ ನೀಡುವುದು ಸೇರಿದಂತೆ ವಿವಿಧ ಮೂಲಸೌಕರ್ಯಗಳನ್ನು ಕಲ್ಪಿಸಲಾಗುವುದು ಎಂದರು.

ತುಂಗಭದ್ರಾ ಜಲಾಶಯದ 31 ಟಿಎಂಸಿ ಹೂಳು ತುಂಬಿಕೊಂಡಿದ್ದು, ಅದು ತೆಗೆಯುವುದು ಅಸಾಧ್ಯ ಎಂಬ ವರದಿ ಹಿನ್ನೆಲೆಯಲ್ಲಿ ನವಲಿ ಬಳಿ ಸಮಾನಾಂತರ ಜಲಾಶಯ ನಿರ್ಮಾಣಕ್ಕೆ ಸಂಬಂಧಿಸಿದಂತೆ ಡಿಪಿಎಆರ್ ರೂಪಿಸುವುದಕ್ಕೆ ಸೂಚನೆ ನೀಡಲಾಗಿದೆ.

ಅಭಿವೃದ್ಧಿ ವಿಷಯದಲ್ಲ ನಮ್ಮ ಸರಕಾರ ಹಿಂಜರಿಯುವ ಪ್ರಶ್ನೆಯೇ ಇಲ್ಲ. ಅಭಿವೃದ್ಧಿಗೆ ದುಡ್ಡಿನ ಕೊರತೆ ಇಲ್ಲ; ಸಾಲಮನ್ನಾಕ್ಕಾಗಿ ಹಣವನ್ನು ವಿವಿಧ ಇಲಾಖೆಗಳಿಗೆ ಹಣ ಕಡಿತಮಾಡಲಾಗಿದೆ ಎಂಬುದು ಸುಳ್ಳು. ಸಣ್ಣ ಮತ್ತು ಬೃಹತ್ ‌ನೀರಾವರಿಗೆ ಈ ವರ್ಷ 19 ಸಾವಿರ ಕೋಟಿ ರೂ. ಒದಗಿಸಲಾಗಿದೆ.

ರಾಜ್ಯದ 6.5ಕೋಟಿ ಜನರು ನನ್ನ ಅಣ್ಣ ತಮ್ಮಂದಿರು ಅಕ್ಕ ತಂಗಿಯರಿದ್ದಾರೆ. ಬಿಜೆಪಿಯವರ ಹೆಸರು ಹೇಳಿಕೊಂಡು‌ ಕೆಲಸ ಮಾಡುವ ಅಗತ್ಯ ನನಗಿಲ್ಲ. ಈ ಮುಂಚೆ ಅವರದೇ ಸರಕಾರವಿದ್ದಾಗ ಏನು ಮಾಡಿದ್ದರು…? ಎಂದು ಪ್ರಶ್ನಿಸಿದರು.

ದೇವದುರ್ಗ ತಾಲೂಕಿಗೆ ನೀರಾವರಿಯನ್ನು ಎಚ್.ಡಿ.ದೇವೇಗೌಡರು ಒದಗಿಸಿದ್ದ ಸಂದರ್ಭದಲ್ಲಿ ಆರೋಪ ಮಾಡುವ ವ್ಯಕ್ತಿ ಹುಟ್ಟಿದ್ದನೋ ಗೊತ್ತಿಲ್ಲ ಎಂದರು.
ರಾಯಚೂರು ಜಿಲ್ಲೆಗೆ 182 ಕೋಟಿ ರೂ. ರಾಷ್ಟ್ರೀಕೃತ ಬ್ಯಾಂಕುಗಳಿಗೆ ಬಿಡುಗಡೆ ಮಾಡಲಾಗಿದೆ ಎಂದರು.

ನಮ್ಮ ಅಭಿವೃದ್ಧಿ ಕಾರ್ಯಕ್ರಮಗಳು ಅನುಷ್ಠಾನಕ್ಕೆ ಬಂದು‌ ಜನರಿಗೆ ಕಾಣುವುದಕ್ಕೆ ಇನ್ನೂ 4ತಿಂಗಳು ಬೇಕು ಎಂದು ಹೇಳಿದ ಅವರು, ಆರೋಪ ಮಾಡುವವರು ಸುಖಾಸುಮ್ಮನೆ ಆರೋಪ ಮಾಡಬಾರದು ಗ್ರಾಮವಾಸ್ತವ್ಯಕ್ಕೆ ಸಂಬಂಧಿಸಿದಂತೆ ವಿನಾಕಾರಣ ಟೀಕೆ, ಆರೋಪಗಳು ಮಾಡುತ್ತಿದ್ದು, ಅವರನ್ನು ವಿಧಾನಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಲಾಗುವುದು ಎಂದರು.

ವಿವಿಧ ಇಲಾಖೆಗಳ 61 ಯೋಜನೆಗಳ ಜಾರಿಗೆ ಸಂಬಂಧಿಸಿದಂತೆ ಪಟ್ಟಿ ಪಡೆದುಕೊಳ್ಳಲಾಗಿದ್ದು, ಅನುಷ್ಠಾನಕ್ಕೆ ಕ್ರಮವಹಿಸಲಾಗುವುದು ಎಂದರು.

ಶಾಶ್ವತವಾದ ಕುಡಿಯುವ ನೀರಿನ ಯೋಜನೆಗಳು ಇಡೀ ರಾಜ್ಯಾದ್ಯಂತ ಆಗಬೇಕು ಎಂಬುದು ನಮ್ಮ ಬಯಕೆ ಎಂದರು.

ಗ್ರಾಮವಾಸ್ತವ್ಯ ಕಾರ್ಯಕ್ರಮ ಮೈತ್ರಿ ಸರಕಾರದ್ದೇ ಹೊರತು ಯಾವುದೇ ಪಕ್ಷಕ್ಕೆ ಸಂಬಂಧಿಸಿಲ್ಲ ಎಂಬುದನ್ನು ಅವರು ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.
ಈ ಸಂದರ್ಭದಲ್ಲಿ ಸಚಿವರಾದ ಸಾ.ರ.ಮಹೇಶ, ವೆಂಕಟರಾವ ನಾಡಗೌಡ, ಜಿಲ್ಲೆಯ ಶಾಸಕರು ಹಾಗೂ ಅಧಿಕಾರಿಗಳು ಇದ್ದರು.

 ಜನಾಕರ್ಷಣೆಯ ಕೇಂದ್ರವಾದ ವಾರ್ತಾ ಇಲಾಖೆ ಮಳಿಗೆ
ಮಳಿಗೆಗಳಲ್ಲಿ ಇಲಾಖೆಗಳ ಮಾಹಿತಿ ಅನಾವರಣ: ವೀಕ್ಷಿಸಿ ಖುಷಿಪಟ್ಟ ಜನರು
ಕರೇಗುಡ್ಡ,ಜೂ.26: ಮಾನ್ವಿ ತಾಲೂಕಿನ ಕರೇಗುಡ್ಡ ಗ್ರಾಮದಲ್ಲಿ ಬುಧವಾರ ನಡೆದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಜನತಾದರ್ಶನ ಹಾಗೂ ಗ್ರಾಮವಾಸ್ತವ್ಯದ ಹಿನ್ನೆಲೆಯಲ್ಲಿ ಗ್ರಾಮದ ಹೊರವಲಯದಲ್ಲಿ ವಿವಿಧ ಇಲಾಖೆಗಳ ಯೋಜನೆಗಳ ಮಾಹಿತಿ ಒದಗಿಸುವ ಮತ್ತು ಸಾಧನೆ ಬಿಂಬಿಸುವ ಹಾಗೂ ಅರಿವು ಮೂಡಿಸುವ ಮಳಿಗೆಗಳನ್ನು ಸ್ಥಾಪಿಸಲಾಗಿದ್ದು, ಜನರು ಮಳಿಗೆಗಳ ಹತ್ತಿರ ತೆರಳಿ ವೀಕ್ಷಿಸಿ ಮಾಹಿತಿ ಪಡೆದುಕೊಳ್ಳುತ್ತಿರುವ ದೃಶ್ಯಗಳು ಕಂಡುಬಂದವು.

ಸರ್ಕಾರದ ಕಳೆದ ಒಂದು ವರ್ಷದ ಮಾಹಿತಿಯನ್ನು ನಿಖರ ಅಂಕಿ ಅಂಶಗಳೊಂದಿಗೆ ಆಕರ್ಷಕ ಫಲಕಗಳನ್ನು ನಿರ್ಮಿಸಿ ಕಲಾತ್ಮಕವಾಗಿ ಅನಾವರಣಗೊಳಿಸಿರುವ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಪ್ರದರ್ಶನ ಮಳಿಗೆ ಕಾರ್ಯಕ್ರಮದ ಆವರಣದ ಆಕರ್ಷಕ ಕೇಂದ್ರವಾಗಿ ಮಾರ್ಪಟ್ಟಿದೆ. ಜನರು ಹೆಚ್ಚಿನ ಸಂಖ್ಯೆಯಲ್ಲಿ ಈ ಮಳಿಗೆಗೆ ಆಗಮಿಸಿ ವೀಕ್ಷಿಸಿದರು. ಇನ್ನೂ ಕೆಲವರು ವೀಕ್ಷಿಸುವುದರ ಜತೆಗೆ ಸೆಲ್ಪಿ ತೆಗೆದುಕೊಂಡು ಸಂಭ್ರಮಿಸಿದ ದೃಶ್ಯಗಳು ಕಂಡುಬಂದವು.

ರೈತರ ಸಾಲ ಮನ್ನಾ, ಬಡವರ ಬಂಧು, ಕಾಯಕ, ಎಲ್ಲರಿಗೂ ಶಿಕ್ಷಣ, ತಳಸಮುದಾಯಗಳ ಅಭಿವೃದ್ಧಿಗೆ ಹಮ್ಮಿಕೊಂಡಿರುವ ಕಾರ್ಯಕ್ರಮಗಳು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಇಲಾಖೆ, ಸಣ್ಣ ನೀರಾವರಿ ಇಲಾಖೆ ಮೂಲಕ ಕೈಗೊಂಡಿರುವ ಚಟುವಟಿಕೆಗಳನ್ನು ಸಚಿತ್ರವಾಗಿ ,ನಿಖರ ಮಾಹಿತಿಯೊಂದಿಗೆ ಅಳವಡಿಸಿ ಜನರಿಗೆ ಪರಿಚಯಿಸುತ್ತಿರುವ ಕಾರ್ಯಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದರು.

ಪಶುಸಂಗೋಪನೆ, ಶಿಕ್ಷಣ ಇಲಾಖೆ, ಅರಣ್ಯ ಇಲಾಖೆ, ಮಹಿಳಾ‌ ಮತ್ತು ಮಕ್ಕಳ ಕಲ್ಯಾಣ ಇಲಾಖೆ,ಕೃಷಿ ಇಲಾಖೆ, ಕೈಗಾರಿಕೆ ಇಲಾಖೆ,ಕಾರ್ಮಿಕ ಇಲಾಖೆ ಸೇರಿದಂತೆ ‌ವಿವಿಧ ಇಲಾಖೆಗಳ ಮಳಿಗೆಗಳು ಗಮನಸೆಳೆದವು.

ಮಳಿಗೆಗಳಲ್ಲಿ ಇಲಾಖೆಗೆ ಸಂಬಂಧಿಸಿದ ಹಾಗೂ ಅಲ್ಲಿನ ಯೋಜನೆಗಳ‌ ಮಾಹಿತಿಗಳನ್ನು ಫಲಕಗಳ ಮೂಲಕ ಪ್ರದರ್ಶನಕ್ಕಿಟ್ಟಿದ್ದರು. ಆಗಮಿಸಿದ ಜನರಿಗೆ ಇಲಾಖೆಯ ಮಾಹಿತಿ ಒಳಗೊಂಡ ಕರಪತ್ರಗಳನ್ನು ವಿತರಿಸಿದರು.

 *ಕರೇಗುಡ್ಡದಲ್ಲಿ ಸಿಎಂ ಎಚ್ಡಿಕೆಯಿಂದ ಜನಸ್ಪಂದನ ಮತ್ತು ಗ್ರಾಮವಾಸ್ತವ್ಯ*
*ಮುಂದಿನ ವರ್ಷದಿಂದ ಹಿರಿಯ ನಾಗರಿಕರಿಗೆ 2 ಸಾವಿರ, ವಿಕಲಚೇತನರಿಗೆ 2500ಕ್ಕೆ‌ ಹೆಚ್ಚಳ: ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ*
ಕರೇಗುಡ್ಡ,ಜೂ.26: ಮುಂದಿನ ವರ್ಷದಿಂದ ಹಿರಿಯ ನಾಗರಿಕರಿಗೆ 1ಸಾವಿರದಿಂದ 2 ಸಾವಿರಕ್ಕೆ ಹಾಗೂ ಅಂಗವಿಕಲರಿಗೆ 2500 ರೂ. ಮಾಸಾಶನ ಹೆಚ್ಚಳ ಮಾಡಲಾಗುವುದು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಘೋಷಣೆ ಮಾಡಿದ್ದಾರೆ.

ಮಾನ್ವಿ ತಾಲೂಕಿನ ಕರೇಗುಡ್ಡದಲ್ಲಿ ‌ಬುಧವಾರ ಏರ್ಪಡಿಸಿದ್ದ ಜನಸ್ಪಂದನ,ಗ್ರಾಮವಾಸ್ತವ್ಯ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಈ ಮುಂಚೆ ಹಿರಿಯ ನಾಗರಿಕರಿಗೆ ಇದ್ದ 600ಮಾಸಾಶನವನ್ನು‌1 ಸಾವಿರಕ್ಕೆ ಹೆಚ್ಚಿಸಿದ್ದೆ. ಈಗ ಅದನ್ನು 2 ಸಾವಿರಕ್ಕೆ ಹಾಗೂ ವಿಕಲಚೇತನರೂ ನೆಮ್ಮದಿಯಿಂದ ಇರಬೇಕು ಎಂಬ ದೃಷ್ಟಿಯಿಂದ ಅವರ ಮಾಸಾಶನವನ್ನು 2500ಕ್ಕೆ ಹೆಚ್ಚಿಸಲು ನಿರ್ಧರಿಸಿದ್ದೇನೆ.

ರಾಜ್ಯದಲ್ಲಿರುವ ಎಲ್ಲ ಜನರು ನೆಮ್ಮದಿಯಿಂದ ಬದುಕು ಕಟ್ಟಿಕೊಳ್ಳುವ ನಿಟ್ಟಿನಲ್ಲಿ ಏನೆಲ್ಲ ಕ್ರಮಗಳನ್ನು ಕೈಗೊಳ್ಳಬೇಕೋ ಅವುಗಳನ್ನೆಲ್ಲ ಕೈಗೊಳ್ಳಲಾಗುವುದು ಎಂದರು.

ಕೃಷಿಯ ಅಭಿವೃದ್ಧಿ ಮಾಡಲಿಕ್ಕೆ ಸರಕಾರ ಎಲ್ಲ ಕ್ರಮಗಳನ್ನು ಕೈಗೊಳ್ಳಲಿದ್ದು, ಸುಸ್ಥಿರ ಬದುಕು ರೂಪಿಸಿಕೊಳ್ಳುವುದಕ್ಕೆ ಮುಂದಾಗಬೇಕು ಎಂದರು.

ಎನ್ ಪಿಎಸ್ ನೌಕಕರ ನೋವು ನನಗೆ ಅರ್ಥವಾಗಿದ್ದು, ಎನ್ ಪಿಎಸ್ ರದ್ದು ಮಾಡಬೇಕೇ ಬೇಡವೇ ಎಂಬುದಕ್ಕೆ ಸಂಬಂಧಿಸಿದಂತೆ ಸಮಿತಿ ರಚಿಸಲಾಗಿದ್ದು, ವರದಿ ಬಂದ ತಕ್ಷಣ ತಮ್ಮನ್ನು ಕರೆದು ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.

*ನವಲಿ ಬಳಿ ಜಲಾಶಯ ನಿರ್ಮಾಣ: ಆಂಧ್ರ ಮತ್ತು ತೆಲಂಗಾಣ ಮುಖ್ಯಮಂತ್ರಿಗಳೊಂದಿಗೆ ಶೀಘ್ರ ಚರ್ಚೆ*
ತುಂಗಾಭದ್ರಾ ಜಲಾಶಯದಲ್ಲಿ ಹೂಳು ತುಂಬಿದ ಪರಿಣಾಮ ಕೊನೆಯ ಅಂಚಿನ ರೈತರ ಜಮೀನುಗಳಿಗೆ ನೀರು ತಲುಪುತ್ತಿಲ್ಲ. ಇದರಿಂದ ನಮ್ಮ ರೈತರು ತೀವ್ರ ತೊಂದರೆ ಅನುಭವಿಸುತ್ತಿರುವುದು ಗಮನದಲ್ಲಿದ್ದು, ನವಲಿ ಬಳಿ ಸಮಾನಾಂತರ ಜಲಾಶಯ ನಿರ್ಮಾಣಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶ ಹಾಗೂ ತೆಲಂಗಾಣ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಅವರ ಮನವೋಲಿಸಿ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಈಗಾಗಲೇ ನವಲಿ ಬಳಿ ಸಮಾನಂತರ ಜಲಾಶಯ ನಿರ್ಮಾಣಕ್ಕಾಗಿ ಡಿಪಿಎಆರ್ ರೂಪಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದ ಅವರು ರಾಯಚೂರು ಜಿಲ್ಲೆಯ 10ಲಕ್ಷ ಎಕರೆ ಜಮೀನಿಗೆ ನನ್ನ ಅವಧಿಯಲ್ಲಿಯೇ ನೀರುಣಿಸಲಾಗುವುದು ಮತ್ತು ಜಿಲ್ಲೆಗೆ ಸಮಗ್ರ ನೀರಾವರಿ ಕಲ್ಪಿಸುವುದಕ್ಕೆ ಕ್ರಮಕೈಗೊಳ್ಳಲಾಗುವುದು ಎಂದರು. ಈ‌ ವರ್ಷ ಸಣ್ಣ ಮತ್ತು ಬೃಹತ್ ನೀರಾವರಿಗೆ 19ಸಾವಿರ‌ ಕೋಟಿ ರೂ.ತೆಗೆದಿರಿಸಲಾಗಿದೆ ಎಂದರು.

ಜಲಧಾರೆ ಯೋಜನೆ ಅಡಿ 1500ಕೋಟಿ ರೂ.ವೆಚ್ಚದಲ್ಲಿ ಜಿಲ್ಲೆಯ ಪ್ರತಿ ಮನೆಗೂ ಕುಡಿಯುವ ನೀರು ಒದಗಿಸಲಾಗುವುದು ಎಂದು ಹೇಳಿದ ಅವರು ಇಡೀ ರಾಯಚೂರು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ನನ್ನ ಸರಕಾರ 4 ಸಾವಿರ ಕೋಟಿ ರೂ. ಒದಗಿಸಿದೆ ಎಂದರು.

* ರೈತರ ಸಾಲಮನ್ನಾಗೆ ರಾಯಚೂರು ಜಿಲ್ಲೆಗೆ 272.22ಕೋಟಿ ರೂ. ಇದುವರೆಗೆ ಸಂದಾಯ: ರೈತರ ಸಾಲಮನ್ನಾ ವಿಷಯಕ್ಕೆ ಸಂಬಂಧಿಸಿದಂತೆ ಅನಗತ್ಯ ಟೀಕೆ ಮಾಡುವ ಪ್ರತಿಪಕ್ಷಗಳಿಗೆ ತಮ್ಮ ಶೈಲಿಯಲ್ಲಿಯೇ ಚಾಟಿ ಬಿಸಿದ ಸಿಎಂ ಅವರು ರಾಯಚೂರು ಜಿಲ್ಲೆಯಲ್ಲಿ 272.22ಕೋಟಿ ರೂ. ರೈತರ ಸಾಲಮನ್ನಾಗೆ ಇದುವರೆಗೆ ರಾಯಚೂರು ಜಿಲ್ಲೆಗೆ ಸಂದಾಯ ಮಾಡಲಾಗಿದೆ ಎಂದು ಹೇಳಿದರು.

ಪ್ರಾಮಾಣಿಕವಾಗಿ ರೈತರ ಸಾಲಮನ್ನಾಗೆ ಹಾಗೂ ರೈತರ ಕಲ್ಯಾಣಕ್ಕೆ ಶ್ರಮಿಸುತ್ತಿರುವುದಾಗಿ ತಿಳಿಸಿದ ಸಿಎಂ ಕುಮಾರಸ್ವಾಮಿ ಅವರು ರೈತರ ಸಾಲಮನ್ನಕ್ಕಾಗಿ ಒಂದು ವರ್ಷದಲ್ಲಿಯೇ 25ಸಾವಿರ ಕೋಟಿ ರೂ.ಗಳನ್ನು ಹಂಚಿಕೆ ಮಾಡಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.

ಮಾನ್ವಿ ವಿಧಾನಸಭಾ ಕ್ಷೇತ್ರದಲ್ಲಿ ಲೋಕೋಪಯೋಗಿ ಇಲಾಖೆ, ಸಣ್ಣ ನೀರಾವರಿ, ಪಶುಸಂಗೋಪನೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಪ್ರವಾಸೋದ್ಯಮ ಇಲಾಖೆ, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ, ಎಚ್ ಕೆಆರ್ಡಿಬಿ, ಬಿಸಿಎಂ ಇಲಾಖೆಗಳಿಗೆ ಸಂಬಂಧಿಸಿದ 8144.99 ಲಕ್ಷ ರೂ.ಗಳ 38ಕಾಮಗಾರಿಗಳು ಶಂಕುಸ್ಥಾಪನೆ ಮತ್ತು ಉದ್ಘಾಟನೆಯನ್ನು ಮುಖ್ಯಮಂತ್ರಿಗಳು‌ ಇದೇ ಸಂದರ್ಭದಲ್ಲಿ ನೆರವೇರಿಸಿದರು.

ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ರೈತರ ಸಾಲಮನ್ನಾ ಋಣಮುಕ್ತಪತ್ರ, ವಿವಿಧ ಸೌಲಭ್ಯಗಳನ್ನು ಫಲಾನುಭವಿಗಳಿಗೆ ವಿತರಿಸಿದರು.

ಸಚಿವರಾದ ವೆಂಕಟರಾವ ನಾಡಗೌಡ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಮುಖ್ಯಮಂತ್ರಿಗಳಿಗೆ ಈಗಾಗಲೇ ಜಿಲ್ಲೆಯ ಬೇಡಿಕೆಗಳ ಪಟ್ಟಿಯನ್ನು ನೀಡಿದ್ದೇವೆ.

1500ಕೋಟಿ ರೂ. ವೆಚ್ಚದಲ್ಲಿ ಜಲಧಾರೆ ಯೋಜನೆ ಅಡಿ ಜಿಲ್ಲೆಯ ಎಲ್ಲ ಹಳ್ಳಿಗಳಿಗೆ ಕುಡಿಯುವ ನೀರುನ ಒದಗಿಸುವುದಕ್ಕೆ ಅಸ್ತು ನೀಡಿದ್ದಾರೆ.

ನವಲಿ ಬಳಿ ಜಲಾಶಯ‌ ಒದಗಿಸುವುದಕ್ಕೆ ಸಂಬಂಧಿಸಿದಂತೆ ಡಿಪಿಎಆರ್ ರೂಪಿಸಲು ಮುಖ್ಯಮಂತ್ರಿಗಳು ಸೂಚಿಸಿದ್ದಾರೆ. ರಾಯಚೂರಿನಲ್ಲಿ ಐಐಐಟಿಗೆ ಮೂಲಸೌಕರ್ಯ ಕಲ್ಪಿಸುವುದಕ್ಕೆ‌ ಸಿಎಂ ಅವರು ಹಸಿರು‌ ನಿಶಾನೆ ತೋರಿದ್ದಾರೆ. ರಾಯಚೂರು ವಿವಿ ಆರಂಭಿಸುವುದಕ್ಕೆ ಸಂಬಂಧಿಸಿದಂತೆ ಸಣ್ಣ ತೊಡಕೊಂದಿದ್ದು ಅದನ್ನು ಶೀಘ್ರವಾಗಿ ನಿವಾರಿಸಿ ಆರಂಭಿಸಲಾಗುವುದು ಎಂದು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಆಗಬೇಕಾದ ಆದ್ಯತಾ ಪಟ್ಟಿಗಳನ್ನು ಸಲ್ಲಿಸಿದ್ದು, ಅದನ್ನು ಮುಖ್ಯಮಂತ್ರಿಗಳು ಅನುಷ್ಠಾನ ಮಾಡುವುದಾಗಿ ತಿಳಿಸಿದ್ದಾರೆ ಎಂದರು.

ಮುಖ್ಯಮಂತ್ರಿಗಳ ಗ್ರಾಮವಾಸ್ತವ್ಯ ಕಾರ್ಯಕ್ರಮ ತುಂಬಾ ಪರಿಣಾಮಕಾರಿಯಾಗಿದೆ ಎಂಬ ಮಾತುಗಳನ್ನು ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ವ್ಯಕ್ತಪಡಿಸಿದರು.

ಮಾನ್ವಿ ಶಾಸಕರು ಹಾಗೂ ಪ್ರವಾಸೋದ್ಯಮ ನಿಗಮ ನಿಯಮಿತದ ಅಧ್ಯಕ್ಷ ರಾಜಾ ವೆಂಕಟಪ್ಪ ನಾಯಕ್ ಅವರು ಮಾತನಾಡಿ, ಗ್ರಾಮವಾಸ್ತವ್ಯಕ್ಕೆ ನನ್ನ ಕ್ಷೇತ್ರದ ಐತಿಹಾಸಿಕ ಕರೇಗುಡ್ಡ ಆಯ್ಕೆ ಮಾಡಿಕೊಂಡಿರುವುದು ಸಂತಸ ತಂದಿದೆ ಮತ್ತು ಇಡೀ ಗ್ರಾಮದಲ್ಲಿಯೇ ಹಬ್ಬದ ವಾತಾವರಣ ನಿರ್ಮಾಣವಾಗಿದೆ ಎಂದರು.

150ಕೋಟಿ ರೂ.ಗಳ ಅನುದಾನ ಇದುವರೆಗೆ ತಂದಿದ್ದು, ತಮ್ಮ ಮಾರ್ಗದರ್ಶನದ ಇನ್ನೂ ಹೆಚ್ಚು ಅನುದಾನ ನೀಡುವುದರ ಮೂಲಕ ಅಭಿವೃದ್ಧಿಪಡಿಸುವುದಾಗಿ ಅವರು ತಿಳಿಸಿದರು.

ಮಾನ್ವಿಯಲ್ಲಿ ಮಿನಿ ವಿಧಾನಸೌಧ, ತಾಲೂಕು ಕ್ರೀಡಾಂಗಣ ಮತ್ತು ಸರಕಾರಿ ಡಿಪ್ಲೊಮಾ ಕಾಲೇಜು ನಿರ್ಮಾಣ, ಕಲ್ಲೂರು ಮತ್ತು ಆತನೂರು ಕೆರೆ ಭರ್ತಿ, ಹೊಸ ತಾಲೂಕಾಗಿರುವ ಸಿರವಾರಗೆ ಅಗತ್ಯ ಮೂಲಸೌಕರ್ಯ ಕಲ್ಪಿಸಬೇಕು. ಮಾನ್ವಿ ವಿ್ಧಧಾನಸಭಾ ಕ್ಷೇತ್ರದ ಹಾಗೂ ಸಿರವಾರ ತಾಲೂಕಿನ ಕೊನೆಯ ಭಾಗದ ಭೂಮಿಗೆ ನೀರು ಒದಗಿಸಬೇಕು ಎಂಬುದು ಸೇರಿದಂತೆ ಮಾನ್ವಿಯ ಸಮಗ್ರ ಅಭಿವೃದ್ಧಿಗೆ ಕೈಗೊಳ್ಳಬೇಕಾದ ಬೇಡಿಕೆಯ ಪಟ್ಟಿಯನ್ನು ಮುಖ್ಯಮಂತ್ರಿಗಳ ಮುಂದಿಟ್ಟರು.

ಪರಿಶಿಷ್ಟ ಪಂಗಡ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಬಸವನಗೌಡ ದದ್ದಲ್ ಮಾತನಾಡಿ, ಮುಖ್ಯಮಂತ್ರಿಗಳು ತಾಯಿಯ ಹೃದಯವಂತ ಇರುವ ವ್ಯಕ್ತಿ. ಅವರು ನನ್ನ ಕ್ಷೇತ್ರಕ್ಕೆ ಇದಿವರೆಗೆ 500ಕೋಟಿ ರೂ.ಅನುದಾನ ಒದಗಿಸಿದ್ದಾರೆ ಎಂದರು.

ಪ್ರತಿ ಪಕ್ಷಗಳ ನಡೆಸುತ್ತಿರುವ ಕುತಂತ್ರ ಆಟ ಫಲಿಸುವುದಿಲ್ಲ. ಅವರೇ 5 ವರ್ಷಗಳ ಕಾಲ ಮುಖ್ಯಮಂತ್ರಿಗಳಾಗಿರಲಿದ್ದಾರೆ ಎಂದರು.

ವಿಧಾನ ಪರಿಷತ್ ಸದಸ್ಯ ಎನ್.ಎಸ್.ಭೋಸರಾಜು ಮಾತನಾಡಿದರು.
ಈ ಸಂದರ್ಭದಲ್ಲಿ ಸಚಿವರಾದ ಸಾ.ರಾ.ಮಹೇಶ, ಉಗ್ರಾಣ ನಿಗಮದ ಅಧ್ಯಕ್ಷರು ಹಾಗೂ ಶಾಸಕ ಪ್ರತಾಪಗೌಡ ಪಾಟೀಲ್, ಸಂಸದೀಯ ಕಾರ್ಯದರ್ಶಿ ಹಾಗೂ ಶಾಸಕ ಡಿ.ಎಸ್.ಹೂಲಿಗೇರಿ,ಶಾಸಕ ಅಮರೇಗೌಡ ಬಯ್ಯಾಪುರ,ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎನ್.ಎಚ್.ಕೋನರೆಡ್ಡಿ, ಶಾಸಕ ಬಸವರಾಜ ಪಾಟೀಲ ಇಟಗಿ, ನಕ್ಕುಂದಿ ಗ್ರಾಪಂ‌ ಅಧ್ಯಕ್ಷೆ ಅನ್ನಪೂರ್ಣಮ್ಮ, ಜಿಪಂ ಸಿಇಒ ನಳಿನಿ ಅತುಲ್ ಸೇರಿದಂತೆ ಅನೇಕರು ಇದ್ದರು.

ಜಿಲ್ಲಾಧಿಕಾರಿ ಬಿ.ಶರತ್ ಅವರು ಸರ್ವರನ್ನು ಸ್ವಾಗತಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ