ಅಧಿವೇಶನದ ಎರಡನೇ ದಿನವಾದ ಇಂದು-ವಿಪಕ್ಷಗಳ ಮುಖ್ಯಸ್ಥರು ಸೇರಿದಂತೆ ಸಂಸದರ ಪ್ರಮಾಣ ವಚನ ಸ್ವೀಕಾರ

ನವದೆಹಲಿ, ಜೂ.18-ಹದಿನೇಳನೇ ಲೋಕಸಭೆ ಅಧಿವೇಶನ ನಿನ್ನೆಯಿಂದ ಆರಂಭವಾಗಿದೆ.ಸಂಸತ್ ಅಧಿವೇಶದ ಎರಡನೇ ದಿನವಾದ ಇಂದು ವಿವಿಧ ಪಕ್ಷಗಳ ಮುಖ್ಯಸ್ಥರು ಸೇರಿದಂತೆ ಹಲವು ಸಂಸದರು ಪ್ರಮಾಣ ವಚನ ಸ್ವೀಕರಿಸಿದರು.

ಸದನ ಇಂದು ಸಮಾವೇಶಗೊಳ್ಳುತ್ತಿದ್ದಂತೆ ರಾಷ್ಟ್ರಗೀತೆ ಮೊಳಗಿತು. ಸದಸ್ಯರೆಲ್ಲರೂ ಎದ್ದು ನಿಂತು ಗೌರವ ಸೂಚಿಸಿದರು.

ನಂತರ ಸದನದ ಮಹಾ ಪ್ರಧಾನಕಾರ್ಯದರ್ಶಿ ನೂತನ ಸದಸ್ಯರುಗಳ ಹೆಸರುಗಳನ್ನು ಕರೆದು ಪ್ರಮಾಣವಚನ ಸ್ವೀಕಾರಕ್ಕೆ ಅನುವು ಮಾಡಿಕೊಟ್ಟರು.

ಶಿರೋಮಣಿ ಅಕಾಲಿದಳದ ನಾಯಕ ಸುಖ್‍ಬಿರ್ ಸಿಂಗ್ ಬಾದಲ್, ಚಿತ್ರನಟ-ಬಿಜೆಪಿ ಸಂಸದ ಸನ್ನಿ ಡಿಯೋಲ್, ಅಮ್ ಆದ್ಮಿ ಪಾರ್ಟಿ (ಎಎಪಿ) ಏಕೈಕ ಎಂಪಿ ಭಗವಂತ್ ಮಾನ್ ಸೇರಿದಂತೆ ಅನೇಕರು ಇಂದು ಲೋಕಸಭಾ ಸದಸ್ಯರು ಪ್ರಮಾಣವಚನ ಸ್ವೀಕರಿಸಿದರು.

ಲೋಕಸಭಾಧ್ಯಕ್ಷರಾಗುವ ಸಾಧ್ಯತೆ ಇರುವ ಓಂ ಬಿರ್ಲಾ ಅವರು ಪ್ರಮಾಣ ವಚನ ಸ್ವೀಕರಿಸಲು ಆಗಮಿಸಿದಾಗ ಎನ್‍ಡಿಎ ಸದಸ್ಯರ ಜೋರು ಚಪ್ಪಾಳೆ ಸದನದಲ್ಲಿ ಮೊಳಗಿತ್ತು.

ಕೇಂದ್ರದ ಮಾಜಿ ಸಚಿವರುಗಳಾದ ರಾಜ್ಯವರ್ಧನ್ ಸಿಂಗ್ ರಾಥೋಡ್, ಶಶಿ ತರೂರ್, ಪ್ರಣೀತ್ ಕೌರ್, ಐಯುಡಿಎಫ್ ನಾಯಕ ಬದ್ರುದ್ದೀನ್ ಅಜ್ಮಲ್, ಪಿ.ಚಿದಂಬರಂ ಪುತ್ರ ಕಾರ್ತಿ ಚಿದಂಬರಂ ಮೊದಲಾದವರೂ ಸಹ ಸಂಸದರಾಗಿ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.

ಹಂಗಾಮಿ ಸ್ಪೀಕರ್ ವೀರೇಂದ್ರ ಕುಮಾರ್ ಸಂಸತ್‍ನಲ್ಲಿ ಇಂದು ಕೂಡ ಹೊಸ ಸದಸ್ಯರ ಪ್ರಮಾಣ ವಚನಗಳ ಕಲಾಪದ ಉಸ್ತುವಾರಿ ನೋಡಿಕೊಂಡರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ