ಶಾಸಕರಿಗೆ ನಿಗಮ ಮಂಡಳಿಗಳಲ್ಲಿ ಅವಕಾಶ-ಮೈತ್ರಿ ಪಕ್ಷಗಳ ನಾಯಕರ ತಯಾರಿ

ಬೆಂಗಳೂರು, ಜೂ.18-ಚುನಾವಣೆಯಲ್ಲಿ ಹಗಲಿರುಳು ದುಡಿದು ಪಕ್ಷ ಅಧಿಕಾರಕ್ಕೆ ತರಲು ಶ್ರಮಿಸಿದ ಕಾರ್ಯಕರ್ತರನ್ನು ಕಡೆಗಣಿಸಿ ಶಾಸಕರಿಗಷ್ಟೆ ಮಣೆ ಹಾಕಲಾಗುತ್ತಿದೆ ಎಂಬ ಆರೋಪಗಳ ನಡುವೆಯೂ ಮತ್ತಷ್ಟು ಮಂದಿ ಶಾಸಕರಿಗೆ ನಿಗಮ ಮಂಡಳಿಗಳಲ್ಲಿ ಅವಕಾಶ ಕಲ್ಪಿಸುವ ತಯಾರಿಯನ್ನು ದೋಸ್ತಿ ಪಕ್ಷಗಳ ನಾಯಕರು ನಡೆಸಿದ್ದಾರೆ.

ಈ ಹಿಂದೆ ಸುಮಾರು 30ಕ್ಕೂ ಹೆಚ್ಚು ನಿಗಮ ಮಂಡಳಿಗಳಿಗೆ ರಾಜ್ಯ ಸಮ್ಮಿಶ್ರ ಸರ್ಕಾರ ನೇಮಕಾತಿ ನಡೆಸಿತ್ತು.ಆ ಸಂದರ್ಭದಲ್ಲಿ ಎಲ್ಲಾ ಹುದ್ದೆಗಳಿಗೂ ಕಾಂಗ್ರೆಸ್-ಜೆಡಿಎಸ್ ಶಾಸಕರನ್ನೇ ನೇಮಿಸಲಾಗಿತ್ತು.ಇನ್ನೂ ಸುಮಾರು 30ಕ್ಕೂ ಹೆಚ್ಚು ನಿಗಮ ಮಂಡಳಿಗಳ ಅಧ್ಯಕ್ಷ ಹುದ್ದೆಗಳ ಭರ್ತಿ ಬಾಕಿ ಇದ್ದು, ಅವುಗಳ ಪೈಕಿ ಅರ್ಧಕ್ಕರ್ಧ ಸ್ಥಾನಗಳನ್ನು ಮತ್ತೆ ಶಾಸಕರಿಗೆ ನೀಡಲು ಕಾಂಗ್ರೆಸ್ ಚಿಂತನೆ ನಡೆಸಿದೆ.

ಸಂಪುಟದಲ್ಲಿ ಸ್ಥಾನ ಸಿಗದೆ ಅಸಮಾಧಾನಗೊಂಡಿರುವ ಶಾಸಕರುಗಳಿಗೆ ನಿಗಮ ಮಂಡಳಿಗಳಲ್ಲಿ ಅವಕಾಶ ಕೊಟ್ಟು ಸಮಾಧಾನ ಪಡಿಸಲು ಚಿಂತನೆ ನಡೆದಿದೆ.

ಸಂಪುಟದಲ್ಲಿ ಅವಕಾಶ ಸಿಗದೆ ಅಸಮಾಧಾನಗೊಂಡಿರುವ ಶಾಸಕರಾದ ಮಹೇಶ್ ಕುಮಟಳ್ಳಿ, ಎಸ್.ರಾಮಪ್ಪ, ಭೀಮಾನಾಯ್ಕ್ ಸೇರಿದಂತೆ ಹಲವರಿಗೆ ನಿಗಮ ಮಂಡಳಿಗಳಲ್ಲಿ ಸ್ಥಾನ ಕಲ್ಪಿಸಲು ಚಿಂತನೆ ನಡೆದಿದೆ. ಆದರೆ ಈ ಶಾಸಕರು ಅದನ್ನು ಒಪ್ಪದೆ ತಮಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡುವಂತೆ ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ.

ಸಂಪುಟದಲ್ಲಿ ಈಗ ಒಂದು ಸ್ಥಾನ ಮಾತ್ರ ಖಾಲಿ ಇದ್ದು, ಅದಕ್ಕೆ ಯಾರನ್ನೂ ನೇಮಿಸದೆ ಖಾಲಿ ಉಳಿಸಿಕೊಳ್ಳಲು ನಿರ್ಧರಿಸಲಾಗಿದೆ. ಮುಂದಿನ ದಿನಗಳಲ್ಲಿ ಸಂಪುಟ ಪುನಾರಚನೆ ವೇಳೆ ನಮಗೆ ಅವಕಾಶ ಕೊಡಿ, ನಿಗಮ ಮಂಡಳಿ ಸ್ಥಾನ ಬೇಡ ಎಂದು ಬಹಳಷ್ಟು ಮಂದಿ ಶಾಸಕರು ಮನವಿ ಮಾಡಿದ್ದಾರೆ. ಆದರೆ ಬಿಜೆಪಿಯ ಆಪರೇಷನ್ ಕಮಲಕ್ಕೆ ಹೆದರಿರುವ ಕಾಂಗ್ರೆಸ್-ಜೆಡಿಎಸ್ ನಾಯಕರು ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ತಮ್ಮ ಕೈಲಾದ ಪ್ರಯತ್ನ ನಡೆಸುತ್ತಿದ್ದಾರೆ. ಹೀಗಾಗಿ ಸದ್ಯಕ್ಕೆ ನಿಗಮ ಮಂಡಳಿ ಒಪ್ಪಿಕೊಳ್ಳುವಂತೆ ಶಾಸಕರ ಮನವೊಲಿಸುವ ಪ್ರಯತ್ನಗಳು ನಡೆದಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ