ಸಚಿವ ಸ್ಥಾನ ನೀಡುತ್ತಿರುವ ಹಿನ್ನೆಲೆ: ‘ಕೈ’ ಹಿಡಿಯಲು ಪಕ್ಷೇತರ ಶಾಸಕ ಆರ್.ಶಂಕರ್ ನಿರ್ಧಾರ

ಬೆಂಗಳೂರು:  ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರ ಸಂಪುಟಕ್ಕೆ ಎರಡನೇ ಬಾರಿ ಸೇರ್ಪಡೆಯಾಗಲಿರುವ ರಾಣೆಬೆನ್ನೂರು ಪಕ್ಷೇತರ ಶಾಸಕ ಆರ್‌.ಶಂಕರ್‌ ಶೀಘ್ರವೇ ಕಾಂಗ್ರೆಸ್ ಪಕ್ಷ ಸೇರಲು ನಿರ್ಧರಿಸಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಅವರ ಸೂಚನೆ ಮೇರೆಗೆ ಪಕ್ಷವನ್ನು ಕಾಂಗ್ರೆಸ್‌ನಲ್ಲಿ ವಿಲೀನಗೊಳಿಸಲು ಅಗತ್ಯ ಸಿದ್ಧತೆ ನಡೆಸಿರುವ ಅವರು, ಈ ಬಗ್ಗೆ ಕೆಪಿಸಿಸಿಯಿಂದಲೂ ಅಗತ್ಯ ಪತ್ರ (ಕೆಪಿಜೆಪಿಯನ್ನು ವಿಲೀನಗೊಳಿಸಿಕೊಳ್ಳಲು ಪಕ್ಷ ಸಿದ್ಧವಿದೆ ಎಂಬುದನ್ನು ಸ್ಪೀಕರ್‌ಗೆ ತಿಳಿಸುವ ಪತ್ರ)ವನ್ನು ಪಡೆದುಕೊಂಡಿದ್ದಾರೆ.

ಇದನ್ನು ಚುನಾವಣಾ ಆಯೋಗ ಹಾಗೂ ಸ್ಪೀಕರ್‌ ಅವರಿಗೆ ಶೀಘ್ರವೇ ನೀಡಲಿದ್ದಾರೆ ಎಂದು ಅಧಿಕೃತವಾಗಿ ಹೇಳಲಾಗಿದೆ.

ಈ ಹಿಂದೆ ಕುಮಾರಸ್ವಾಮಿ ಸಂಪುಟದಲ್ಲಿ ಸಚಿವರಾಗಿದ್ದ ಶಂಕರ್‌ ಅವರು ಅತೃಪ್ತ ಶಾಸಕರೊಂದಿಗೆ ಗುರುತಿಸಿಕೊಂಡಿದ್ದರು. ಈ ವೇಳೆ ಪಕ್ಷವನ್ನು ವಿಲೀನಗೊಳಿಸುವಂತೆ ಕಾಂಗ್ರೆಸ್‌ ಸೂಚಿಸಿದರೂ ಅದನ್ನು ನಿರ್ಲಕ್ಷಿಸಿದ ಪರಿಣಾಮ ಸಂಪುಟದಿಂದ ಹೊರಬೀಳಬೇಕಾಗಿ ಬಂದಿತ್ತು

ಹೀಗಾಗಿ, ಮತ್ತೆ ಕಾಂಗ್ರೆಸ್‌ ಕೋಟಾದ ಅಡಿಯಲ್ಲಿ ಸಚಿವ ಸ್ಥಾನ ಪಡೆಯಲಿರುವ ಶಂಕರ್‌  ಕಾಂಗ್ರೆಸ್ ಸೇರಲು ನಿರ್ಧರಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ