ರೋಷನ್ ಬೇಗ್ ಬಿಜೆಪಿ ಸೇರುವ ಕನಸು ಭಗ್ನ

ಬೆಂಗಳೂರು, ಜೂ.12- ಸಚಿವ ಸ್ಥಾನ ಸಿಗದೆ ಕಾಂಗ್ರೆಸ್ ನಾಯಕರ ವಿರುದ್ಧ ಬಹಿರಂಗವಾಗಿ ತೊಡೆ ತಟ್ಟಿ ಬಿಜೆಪಿ ಸೇರುವ ಹುಮ್ಮಸ್ಸಿನಲ್ಲಿದ್ದ ಅಲ್ಪಸಂಖ್ಯಾತ ಸಮುದಾಯದ ಪ್ರಭಾವಿ ಮುಖಂಡ ಮಾಜಿ ಸಚಿವ ರೋಷನ್ ಬೇಗ್ ಕನಸು ಭಗ್ನವಾಗಿದೆ.

ಏಕೆಂದರೆ ರಾಷ್ಟ್ರದ ಗಮನ ಸೆಳೆದ ಬೆಂಗಳೂರಿನ ಐಎಮ್‍ಎ ಜುವ್ಯೆಲೆರ್ಸ್ ಹೂಡಿಕೆದಾರರ ಸಂಸ್ಥೆಯಲ್ಲಿ ನೂರಾರು ಕೋಟಿ ವಂಚನೆಯಾಗಿರುವುದು ಬೆಳಕಿಗೆ ಬಂದಿದೆ. ಇದರಲ್ಲಿ ಶಿವಾಜಿನಗರದ ಶಾಸಕರು ಆಗಿರುವ ರೋಷನ್ ಬೇಗ್ ಹೆಸರು ತಳಕು ಹಾಕಿರುವುದರಿಂದ ಬಿಜೆಪಿ ಸೇರುವ ಅವರ ಕನಸು ಈಗ ಭಗ್ನವಾಗಿದೆ.

ನಿನ್ನೆ ನವದೆಹಲಿಗೆ ತೆರಳಿದ್ದ ರೋಷನ್ ಬೇಗ್ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಕ್ವಿ ಅವರನ್ನು ಭೇಟಿಯಾಗಿದ್ದರು. ಇದಲ್ಲದೆ ಕಳೆದ ವಾರವಷ್ಟೇ ರಾಜ್ಯಸಭಾ ಸದಸ್ಯ ಎಂ.ಜೆ.ಅಕ್ಬರ್ ಅವರನ್ನು ಭೇಟಿಯಾಗಿ ಬಿಜೆಪಿ ಸೇರುವ ಇಂಗಿತವನ್ನು ವ್ಯಕ್ತಪಡಿಸಿದ್ದರು.

ಮುಖ್ತಾರ್ ಅಬ್ಬಾಸ್ ನಕ್ವಿ ಮತ್ತು ಎಂ.ಜೆ.ಅಕ್ಬರ್ ಇಬ್ಬರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರನ್ನು ಭೇಟಿಯಾಗಿ ರೋಷನ್ ಬೇಗ್ ಅವರನ್ನು ಕರೆತರುವ ಸಂಬಂಧ ಮಾತುಕತೆ ಬಹುತೇಕ ಫಲಪ್ರದವಾಗಿತ್ತು. ಶುಕ್ರವಾರ ಸಚಿವ ಸಂಪುಟ ವಿಸ್ತರಣೆಯಾದ ನಂತರ ಸಿಡಿದೇಳಲು ಸಜ್ಜಾಗಿದ್ದರು.

ಆದರೆ ಸೋಮವಾರ ಇದ್ದಕ್ಕಿದ್ದಂತೆ ಐಎಂಎ ಸಂಸ್ಥೆಯ ಮಾಲೀಕ ಮಹಮ್ಮದ್ ಮಸೂರ್ ಖಾನ್ ಬಿಡುಗಡೆ ಮಾಡಿರುವ ಆಡಿಯೋ ರೋಷನ್ ಬೇಗ್‍ಗೆ ಕುತ್ತು ತರುವ ಸಂಭವವಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ ಎಸ್‍ಐಟಿಗೆ ವಹಿಸಿದೆ.

ಪ್ರಕರಣದಲ್ಲಿ ರೋಷನ್ ಬೇಗ್ ಹೆಸರು ತಳುಕುಹಾಕಿರುವುದು ಅಲ್ಲದೆ ಮಹಮ್ಮದ್ ಮಸೂರ್ ಖಾನ್ ಜತೆ ಕಳೆದ ಹಲವು ದಿನಗಳಿಂದ ವ್ಯವಹಾರ ನಡೆಸಿರುವುದು ಕಂಡು ಬಂದಿದೆ. ಇದರಲ್ಲಿ ಸಾವಿರಾರೂ ಬಂಡವಾಳ ಹೂಡಿಕೆ ಮಾಡಿದ್ದರು. ಇನ್ನು ಎಸ್‍ಐಟಿ ತನಿಖೆ ನಡೆಯುವುದರಿಂದ ಯಾವುದೇ ಸಂದರ್ಭದಲ್ಲಾದರೂ ರೋಷನ್ ಬೇಗ್ ಕಾನೂನಿನ ಕುಣಿಕೆಗೆ ಸಿಗುವ ಸಾಧ್ಯತೆಗಳಿವೆ.

ಬಿಜೆಪಿಗೆ ಸೇರಲು ಮುಂದಾಗಿರುವ ರೋಷನ್ ಬೇಗ್‍ಗೆ ಕಾನೂನಿನ ಕುಣಿಕೆ ತೊಡಿಸಲು ದೋಸ್ತಿ ಪಕ್ಷದ ಮುಖಂಡರು ಮುಂದಾಗಿದ್ದಾರೆ.ಈ ಮೂಲಕವಾದರೂ ಬಿಜೆಪಿ ಸೇರುವ ಅವರ ಆಟಕ್ಕೆ ಅಂಕುಶ ಹಾಕುವ ಲೆಕ್ಕಾಚಾರ ಅಡಗಿದೆ.

ಇನ್ನು ಕಳಂಕ ಹೊತ್ತಿರುವ ರೋಷನ್ ಬೇಗ್ ಬಿಜೆಪಿಗೆ ಬರುತ್ತೇನೆಂದರೂ ಸದ್ಯದ ಪರಿಸ್ಥಿತಿಯಲ್ಲಿ ಬಿಜೆಪಿ ಅವರನ್ನು ಕರೆದುಕೊಳ್ಳುವುದು ದೂರದ ಮಾತು. ಹೀಗಾಗಿ ಬೇಗ್ ರಾಜಕೀಯ ಭವಿಷ್ಯ ಅತಂತ್ರಕ್ಕೆ ಸಿಲುಕಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ