ಭವಿಷ್ಯದಲ್ಲಿ ಜೆಡಿಯು ಎನ್ ಡಿ ಎ ಜತೆಗಿರುವುದಿಲ್ಲ: ಕೆ ಸಿ ತ್ಯಾಗಿ

ಪಾಟ್ನಾ: ಜೆಡಿಯು ಇನ್ನುಮುಂದೆ ಎಂದಿಗೂ ಎನ್ ಡಿಎ ನಾಯಕತ್ವದ ಕೇಂದ್ರ ಸಂಪುಟದ ಭಾಗವಾಗಿರುವುದಿಲ್ಲ ಎಂದು ಜೆಡಿಯು ಪ್ರಧಾನ ಕಾರ್ಯದರ್ಶಿ ಹಾಗೂ ಮುಖ್ಯ ವಕ್ತಾರ ಕೆ. ಸಿ. ತ್ಯಾಗಿ ಹೇಳಿದ್ದಾರೆ.

ಎನ್ ಡಿಎ ಕೇಂದ್ರ ಸಂಪುಟದಲ್ಲಿ ಬಿಹಾರಕ್ಕೆ ಕೇವಲ ಒಂದು ಸಚಿವ ಸ್ಥಾನ ನೀಡಿರುವುದರಿಂದ ಅಸಮಾಧಾನಗೊಂಡು ಜೆಡಿಯು ಈ ನಿರ್ಧಾರ ಕೈಗೊಂಡಿರುವುದಾಗಿ ಅವರು ತಿಳಿಸಿದ್ದಾರೆ.

ಬಿಜೆಪಿ ಪ್ರಸ್ತಾವವನ್ನು ತಿರಸ್ಕರಿಸಲಾಗಿದೆ. ಆದ್ದರಿಂದ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಇದೇ ನಮ್ಮ ಅಂತಿಮ ನಿರ್ಧಾರವಾಗಿದೆ. ಮುಂದೆಯೂ ಕೂಡಾ ಜೆಡಿಯು ಎನ್ ಡಿಎ ನಾಯಕತ್ವದ ಕೇಂದ್ರ ಸಂಪುಟದ ಭಾಗವಾಗಿರುವುದಿಲ್ಲ ಎಂದು ತ್ಯಾಗಿ ಹೇಳಿದ್ದಾರೆ.

ಇತ್ತೀಚಿಗೆ ನಡೆದ ನೂತನ ಕೇಂದ್ರ ಸಂಪುಟದಲ್ಲಿ ಎನ್ ಡಿಎ ಅಂಗಪಕ್ಷಗಳಾದ ಜೆಡಿಯು, ರಾಮ್ ವಿಲಾಸ್ ಪಾಸ್ವನ್ ನೇತೃತ್ವದ ಎಲ್ ಜೆಎಸ್ ಪಿ, ಅಕಾಲಿ ದಳ, ಶಿವಸೇನಾ ಹಾಗೂ ಆರ್ ಪಿಐ ಪಕ್ಷಗಳಿಗೆ ತಲಾ ಒಂದು 1 ಸಚಿವ ಸ್ಥಾನವನ್ನು ನೀಡಲಾಗಿದೆ. ಜೆಡಿಯುಗೆ ಕೇವಲ 1 ಸಚಿವ ಸ್ಥಾನ ನೀಡಿರುವುದೇ ಜೆಡಿಯು ನಾಯಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು.

ಬಿಹಾರದಲ್ಲಿ ಲೋಕಸಭಾ ಚುನಾವಣೆಯಲ್ಲಿ ಜೆಡಿಯು 16 , ಬಿಜೆಪಿ 17 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದವು. ಬಿಜೆಪಿಯ ಸುಶೀಲ್ ಕುಮಾರ್ ಮೋದಿ ಬಿಹಾರ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿದ್ದಾರೆ. ಈಗ ಹೊಸದಾಗಿ ಜೆಡಿಯುನ 8 ಶಾಸಕರನ್ನು ಸಚಿವರನ್ನಾಗಿ ಮಾಡಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ