ಕಾವೇರಿಪುರ ವಾರ್ಡ್ ಉಪ ಚುನಾವಣೆ-ಜೆಡಿಎಸ್-ಬಿಜೆಪಿ ಕಾರ್ಯಕರ್ತರ ಮಾರಾಮಾರಿ

ಬೆಂಗಳೂರು, ಮೇ 29- ಉಪ ಮೇಯರ್ ರಮೀಳಾ ಉಮಾಶಂಕರ್ ಅವರಿಂದ ತೆರವಾಗಿರುವ ಕಾವೇರಿಪುರ ವಾರ್ಡ್ ಉಪ ಚುನಾವಣೆ ಕದನ ಕಣವಾಗಿ ಮಾರ್ಪಟ್ಟಿದೆ.

ವಾರ್ಡ್‍ನ ಮುನೇಶ್ವರ ಬ್ಲಾಕ್‍ನಲ್ಲಿರುವ ಸೆಂಟ್‍ಪೌಲ್ಸ್ ಶಾಲೆ ಸಮೀಪ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದೆ.
ಬೆಂಗಳೂರು ನಗರ ಜೆಡಿಎಸ್ ಅಧ್ಯಕ್ಷ ಆರ್.ಪ್ರಕಾಶ್ ಮತ್ತು ಬಿಜೆಪಿ ಬಿಬಿಎಂಪಿ ಸದಸ್ಯ ಉಮೇಶ್ ಶೆಟ್ಟಿ ನಡುವೆ ಮಾತಿನ ಚಕಮಕಿ ನಡೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿತು.

ತಕ್ಷಣ ಘಟನಾ ಸ್ಥಳಕ್ಕೆ ಆಗಮಿಸಿದ ಪೆÇಲೀಸರು ಪರಿಸ್ಥಿತಿ ನಿಯಂತ್ರಿಸಲು ಉದ್ರಿಕ್ತರ ಮೇಲೆ ಲಾಠಿ ಬೀಸಿ ಚದುರಿಸಿದರು.

ಆದರೂ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪೆÇಲೀಸರು ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದಾರೆ.

ನಡೆದದ್ದೇನು: ಮುನೇಶ್ವರ ಬ್ಲಾಕ್ ಬೂತ್ ಸಮೀಪ ಬಿಜೆಪಿಯವರು ಮತದಾರರಿಗೆ ದುಡ್ಡು ಹಂಚುತ್ತಿದ್ದಾರೆ ಎಂದು ಆರೋಪಿಸಿ ಜೆಡಿಎಸ್‍ನವರು ವ್ಯಕ್ತಿಯೊಬ್ಬರಿಗೆ ಥಳಿಸಿದ್ದರಿಂದ ಕಾವೇರಿಪುರ ವಾರ್ಡ್‍ನಲ್ಲಿ ಘರ್ಷಣೆ ಆರಂಭವಾಯಿತು.

ವಿಷಯ ತಿಳಿದ ಬಿಬಿಎಂಪಿ ಸದಸ್ಯ ಉಮೇಶ್ ಶೆಟ್ಟಿ , ಮಾಜಿ ಸದಸ್ಯ ವಾಗೀಶ್ ಮತ್ತಿತರ ಬಿಜೆಪಿ ಕಾರ್ಯಕರ್ತರು ಸ್ಥಳಕ್ಕೆ ಆಗಮಿಸಿದ್ದರಿಂದ ಪರಿಸ್ಥಿತಿ ವಿಕೋಪಕ್ಕೆ ತಲುಪಿತು.

ಈ ಸಂದರ್ಭದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ಪರಸ್ಪರ ಕೈ ಕೈ ಮಿಲಾಯಿಸಲು ಮುಂದಾದರು. ತಕ್ಷಣ ಪೆÇಲೀಸರ ಮಧ್ಯಪ್ರವೇಶದಿಂದ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿತು.

ನೀರಸ ಪ್ರತಿಕ್ರಿಯೆ:
ಉಪ ಮೇಯರ್ ರಮೀಳಾ ಉಮಾಶಂಕರ್ ಹಾಗೂ ಏಳುಮಲೈ ನಿಧನದಿಂದ ತೆರವಾಗಿರುವ ಕಾವೇರಿಪುರ ಮತ್ತು ಸಗಾಯ್‍ಪುರಂ ವಾರ್ಡ್‍ಗೆ ಇಂದು ನಡೆಯುತ್ತಿರುವ ಉಪ ಚುನಾವಣೆಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಬೆಳಗ್ಗೆ 7 ಗಂಟೆಗೆ ಮತದಾನ ಆರಂಭಗೊಂಡರೂ ಮತದಾರರು ಮತದಾನಕ್ಕೆ ನಿರಾಸಕ್ತಿ ತೋರುತ್ತಿದ್ದಾರೆ. ಬೆಳಗ್ಗೆ ಕೆಲವು ಕೇಂದ್ರಗಳಲ್ಲಿ ಸರದಿ ಸಾಲು ಕಂಡು ಬಂದಿತ್ತಾದರೂ 9 ಗಂಟೆಯ ನಂತರ ಮತದಾನ ಕೇಂದ್ರಗಳು ಬಿಕೋ ಎನ್ನುತ್ತಿದ್ದವು.

ಕಾವೇರಿಪುರ ವಾರ್ಡ್‍ನಲ್ಲಿ ಒಟ್ಟು 49,238 ಮತದಾರರಿದ್ದು , 43 ಮತದಾನ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಸಗಾಯ್‍ಪುರಂ ವಾರ್ಡ್‍ನಲ್ಲಿ 31,928 ಮತದಾರರಿದ್ದು, 33 ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು , ಸಂಜೆ 5 ಗಂಟೆಯವರೆಗೂ ಮತದಾನಕ್ಕೆ ಅವಕಾಶ ಕಲ್ಪಿಸಿಕೊಡಲಾಗಿದೆ.

ಕಾವೇರಿ ಪುರ ವಾರ್ಡ್‍ನಲ್ಲಿ ಬಿಜೆಪಿ ಅಭ್ಯರ್ಥಿ ಸಿ.ಪಲ್ಲವಿ ಹಾಗೂ ಮೈತ್ರಿ ಅಭ್ಯರ್ಥಿ ಸುಶೀಲಾ ನಡುವೆ ಬಿರುಸಿನ ಸ್ಪರ್ಧೆ ಕಂಡು ಬಂದಿದ್ದರೆ, ಸಗಾಯ್‍ಪುರಂ ವಾರ್ಡ್‍ನಲ್ಲಿ ಬಿಜೆಪಿ ಅಭ್ಯರ್ಥಿ ಜೈರಿಮ್, ಮೈತ್ರಿ ಅಭ್ಯರ್ಥಿ ಪಳನಿಯಮ್ಮ , ಪಕ್ಷೇತರ ಅಭ್ಯರ್ಥಿ ಮಾರಿಮುತ್ತು ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.

ಶೇಕಡಾವಾರು ಮತದಾನ: ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾದರೂ 9 ಗಂಟೆ ವೇಳೆಗೆ ಸಗಾಯ್‍ಪುರಂ ವಾರ್ಡ್ ನಲ್ಲಿ ಶೇ.7.74, ಕಾವೇರಿ ಪುರ ವಾರ್ಡ್‍ನಲ್ಲಿ ಶೇ.9.93ನಷ್ಟು ಮತದಾನವಾಗಿತ್ತು.

ಬೆಳಗ್ಗೆ 11 ಗಂಟೆ ವೇಳೆಗೆ ಸಗಾಯ್‍ಪುರಂ ವಾರ್ಡ್‍ನಲ್ಲಿ ಶೇ.17.27ರಷ್ಟು , ಕಾವೇರಿ ಪುರದಲ್ಲಿ ಶೇ.19.17ರಷ್ಟು ಮತದಾನವಾಗಿತ್ತು.

ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ಎರಡೂ ವಾರ್ಡ್‍ಗಳಲ್ಲಿ ಶೇ.30ರಷ್ಟು ಮತದಾನವಾದ ಬಗ್ಗೆ ವರದಿಯಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ