ಗಾಂಧೀಜಿಯವರ ತತ್ವವನ್ನು ಆಚರಿಸುತ್ತಿದ್ದೇನೆ-ಸಚಿವ ಡಿ.ಕೆ.ಶಿವಕುಮಾರ್

ಬೆಂಗಳೂರು, ಮೇ 28- ರಾಜಕೀಯ ಚತುರ ಟ್ರಬಲ್ ಶೂಟರ್ ಎಂದೇ ಹೆಸರು ಪಡೆದಿರುವ ಪವರ್ ಫುಲ್ ಮಿನಿಸ್ಟರ್ ಡಿ.ಕೆ.ಶಿವಕುಮಾರ್ ಆಸ್ಟ್ರೇಲಿಯಾ ಪ್ರವಾಸದಿಂದ ಇಂದು ಬೆಂಗಳೂರಿಗೆ ವಾಪಸಾಗಿ ಮಾಧ್ಯಮಗಳಿಗೆ ಅಚ್ಚರಿ ಮೂಡಿಸುವಂತಹ ಮಾತುಗಳನ್ನಾಡಿದ್ದಾರೆ…!

ಗಾಂಧೀಜಿಯವರು ಹೇಳಿದಂತೆ ಬಾಯಿಗೆ ಬೀಗ ಹಾಕಿಕೊಂಡಿದ್ದೇನೆ. ಕಣ್ಣಿಗೆ ಬಟ್ಟೆ ಕಟ್ಟಿಕೊಂಡಿದ್ದೇನೆ, ಕಿವಿಗೆ ಹತ್ತಿ ಇಟ್ಟುಕೊಂಡಿದ್ದೇನೆ ಎಂದು ಹೇಳಿ ಎಲ್ಲರನ್ನು ಚಕಿತಗೊಳಿಸಿದ್ದಾರೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇಂದು ಮುಂಜಾನೆ ಆಸ್ಟ್ರೇಲಿಯಾದಿಂದ ಕುಟುಂಬ ಸಮೇತರಾಗಿ ಬಂದ ಡಿ.ಕೆ.ಶಿವಕುಮಾರ್ ಅವರು ಮಾಧ್ಯಮದವರು ಮಾತನಾಡಿಸಲು ಮುಂದಾದಾಗ ನಿಮಗೆಲ್ಲಾ ಏನು ನಡೆಯುತ್ತಿದೆ ಎಂದು ಗೊತ್ತಿದೆ. ಎಲ್ಲಾ ಮಾಹಿತಿ ದೊರೆತಿದೆ. ಆದರೆ ಸದ್ಯದ ರಾಜಕೀಯ ವಿದ್ಯಮಾನ ಮಂಡ್ಯ, ತುಮಕೂರು ಸೇರಿದಂತೆ ವಿವಿಧೆಡೆ ಬಂದ ವ್ಯತಿರಿಕ್ತ ಫಲಿತಾಂಶದ ಬಗ್ಗೆ ನಾನೇನೂ ಮಾತನಾಡುವುದಿಲ್ಲ ಎಂದು ಹೇಳಿದರು.

ಆಸ್ಟ್ರೇಲಿಯಾ ಪ್ರವಾಸದ ವೇಳೆ ನಾನು ಫೇಸ್‍ಬುಕ್, ಟ್ವಿಟರ್ ಸೇರಿದಂತೆ ಯಾವುದೇ ಸಾಮಾಜಿಕ ಜಾಲ ತಾಣಗಳನ್ನು ಬಳಸಲಿಲ್ಲ. ಎಲ್ಲದರಿಂದ ದೂರವಿದ್ದೆ.

ಆದರೆ ಲೋಕಸಭಾ ಚುನಾವಣೆಯ ಫಲಿತಾಂಶದ ಮಾಹಿತಿ ನನಗೆ ಕಾಲ ಕಾಲಕ್ಕೆ ಅಲ್ಲಿನ ಮಾಧ್ಯಮಗಳಿಂದ ತಿಳಿಯುತ್ತಿತ್ತು. ಆದರೆ ಈಗ ನಾನು ಗಾಂಧೀಜಿಯವರ ತತ್ವವನ್ನು ಆಚರಿಸುತ್ತಿದ್ದೇನೆ. ಹೆಚ್ಚಿಗೆ ಮಾತನಾಡುವುದಿಲ್ಲ ಎಂದು ಅಲ್ಲಿಂದ ನಿರ್ಗಮಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ