ದಿ.ಅಂಬರೀಷ್‍ರವರ ಸಮಾದಿ ಸ್ಥಳಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಸುಮಲತಾ

ಬೆಂಗಳೂರು, ಮೇ 24- ರೆಬೆಲ್ ಸ್ಟಾರ್ ದಿ.ಅಂಬರೀಷ್ ಅವರ ಸಮಾಧಿ ಸ್ಥಳಕ್ಕೆ ಇಂದು ಪತ್ನಿ ಸುಮಲತಾ ಮತ್ತು ಪುತ್ರ ಅಭಿಷೇಕ್ ತೆರಳಿ ಪೂಜೆ ಸಲ್ಲಿಸಿದರು.

ಅಂಬರೀಷ್ ಅವರ 6ನೇ ತಿಂಗಳ ಪುಣ್ಯತಿಥಿ ಹಿನ್ನೆಲೆಯಲ್ಲಿ ಅಂಬಿ ಅವರ ಭಾವಚಿತ್ರಕ್ಕೆ ನಮನ ಸಲ್ಲಿಸಿದರು. ನಿನ್ನೆಯಷ್ಟೆ ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಜಯಗಳಿಸಿದ ಸುಮಲತಾ ಅವರು ಗೆಲುವಿನ ಪ್ರಮಾಣಪತ್ರವನ್ನು ಸಹ ಇಂದು ಅಂಬರೀಷ್ ಸಮಾಧಿ ಬಳಿ ಇಟ್ಟು ಪೂಜೆ ಸಲ್ಲಿಸಿದರು.

ಈ ವೇಳೆ ಅಲ್ಲೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಎಂಬ ಮೂವರು ಅಭ್ಯರ್ಥಿಗಳು ಸಹ ಸ್ಪರ್ಧಾ ಕಣದಲ್ಲಿದ್ದರು. ಈ ಮೂವರಿಗೆ ಬಂದಂತಹ ಮತಗಳು ನನಗೆ ಬರಬೇಕಿತ್ತು. ಆ ಮತಗಳು ಲಭಿಸಿದ್ದರೆ ಇನ್ನೂ ಹೆಚ್ಚಿನ ಮತಗಳ ಅಂತರದಿಂದ ನಾನು ಜಯ ಗಳಿಸುತ್ತಿದ್ದೆ ಎಂದರು.

ಇದು ನನ್ನ ಗೆಲುವು ಅಲ್ಲ, ಸ್ವಾಭಿಮಾನದ ಗೆಲುವು.ಜನ ನನ್ನ ಪರ ಇದ್ದಾರೆ. ನನ್ನ ಕೈಯಲ್ಲಿ ಆಗುವಷ್ಟು ಅಭಿವೃದ್ಧಿ ಕೆಲಸವನ್ನು ಮಾಡುತ್ತೇನೆ. ಅಂಬರೀಷ್ ಅವರ ಕನಸನ್ನು ನಾನು ಪೂರ್ಣಗೊಳಿಸುತ್ತೇನೆ ಎಂದು ಭರವಸೆ ನೀಡಿದರು.

ಇದೇ ತಿಂಗಳು 29ರಂದು ಅಂಬರೀಷ್ ಅವರ ಹುಟ್ಟುಹಬ್ಬ ಇದ್ದು, ಅಂದೇ ಸ್ವಾಭಿಮಾನದ ವಿಜಯೋತ್ಸವ ಎಂಬ ಹೆಸರಿನಲ್ಲಿ ಅಂಬಿ ಹುಟ್ಟುಹಬ್ಬವನ್ನು ಆಚರಿಸಲಾಗುವುದು ಅಂದು ನಟರಾದ ದರ್ಶನ್, ಯಶ್ ಪಾಲ್ಗೊಳಲಿದ್ದಾರೆ ಎಂದು ತಿಳಿಸಿದರು.

ಈ ವೇಳೆ ನಿರ್ದೇಶಕ ರಾಕ್‍ಲೈನ್ ವೆಂಕಟೇಶ್ ಸೇರಿದಂತೆ ಕುಟುಂಬ ಸದಸ್ಯರು ಇದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ