ಕಾಂಗ್ರೇಸ್ ಮುಖಂಡರಿಗೆ ಮುಜುಗರ ತಂದ ಶಾಸಕ ಸುಧಾಕರ್ ಹೇಳಿಕೆ

ಬೆಂಗಳೂರು, ಮೇ22-ಮಾಜಿ ಸಚಿವ ರೋಷನ್‍ಬೇಗ್ ಸಮ್ಮಿಶ್ರ ಸರ್ಕಾರದ ನಾಯಕತ್ವದ ವಿರುದ್ಧ ಬಹಿರಂಗ ವಿರೋಧ ವ್ಯಕ್ತಪಡಿಸಿ ಪಕ್ಷಕ್ಕೆ ಮುಜುಗರ ಉಂಟು ಮಾಡಿದ ಬೆನ್ನಲ್ಲೇ ಶಾಸಕ ಡಾ.ಕೆ.ಸುಧಾಕರ್ ಇವಿಎಂಗಳನ್ನು ಸಮರ್ಥಿಸಿಕೊಳ್ಳುವ ಮೂಲಕ ಪಕ್ಷದ ನಾಯಕರ ಹೇಳಿಕೆಗಳ ವಿರುದ್ಧ ಪ್ರತಿಕ್ರಿಯೆ ನೀಡಿ ಮತ್ತಷ್ಟು ಇರಿಸುಮುರಿಸು ಉಂಟುಮಾಡಿದ್ದಾರೆ.

ನಿನ್ನೆ ಟ್ವಿಟರ್‍ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಡಾ.ಕೆ.ಸುಧಾಕರ್, ವೈಯಕ್ತಿಕವಾಗಿ ನನಗೆ ಗೊಂದಲಗಳು ಉಂಟಾಗಿವೆ. ಚುನಾವಣೋತ್ತರ ಸಮೀಕ್ಷೆಗಳನ್ನು ಆಧರಿಸಿ ಮತ ಯಂತ್ರಗಳನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಚುನಾವಣೋತ್ತರ ಸಮೀಕ್ಷೆಗಳು ಮತದಾರರ ಒಲವನ್ನು ಹೊರಹಾಕಿವೆ. ಒಟ್ಟಾರೆ ಮತದಾನದ ದಿಕ್ಕನ್ನು ಪ್ರಕಟಿಸಿದೆ ಎಂದು ಹೇಳಿದ್ದಾರೆ. ಈ ಮೂಲಕ ಕಾಂಗ್ರೆಸ್ ನಾಯಕರಿಗೆ ವ್ಯತಿರಿಕ್ತವಾಗಿ ಸುಧಾಕರ್ ಹೇಳಿಕೆ ನೀಡಿ ಮುಜುಗರ ಉಂಟು ಮಾಡಿದ್ದಾರೆ.

ಚುನಾವಣೋತ್ತರ ಸಮೀಕ್ಷೆಗಳಲ್ಲಿ ಎನ್‍ಡಿಎ ಹೆಚ್ಚು ಸ್ಥಾನ ಗೆಲ್ಲಲಿದೆ. ಬಿಜೆಪಿ ಮತ್ತೆ ಅಧಿಕಾರ ಹಿಡಿಯಲಿದೆ ಎಂದು ತಿಳಿಸಲಾಗಿದೆ.

ಸಮೀಕ್ಷೆಗಳ ಬಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿ, ಡಿಸಿಎಂ ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸೇರಿದಂತೆ ರಾಜ್ಯದ ಎಲ್ಲ ನಾಯಕರು ಚುನಾವಣೋತ್ತರ ಸಮೀಕ್ಷೆ ಮೂಲಕ ಬಿಜೆಪಿ ಜನಾಭಿಪ್ರಾಯ ತಮ್ಮ ಪರವಾಗಿದೆ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಇವಿಎಂಗಳನ್ನು ತಿರುಚಿ ಆ ತಪ್ಪುಗಳನ್ನು ಮುಚ್ಚಿಕೊಳ್ಳಲು ಈ ರೀತಿಯ ಕುತಂತ್ರ ನಡೆಸಿದೆ ಎಂದು ಆರೋಪಿಸಿದ್ದರು.

ಕಾಂಗ್ರೆಸ್-ಜೆಡಿಎಸ್ ನಾಯಕರ ಹೇಳಿಕೆಗಳಿಗೆ ವ್ಯತಿರಿಕ್ತವಾಗಿ ಆಡಳಿತ ಪಕ್ಷದ ಶಾಸಕರೇ ತಮಗಿಷ್ಟ ಬಂದ ಹಾಗೆ ಅಭಿಪ್ರಾಯ ವ್ಯಕ್ತಪಡಿಸುತ್ತಿರುವುದು ಸಮ್ಮಿಶ್ರ ಸರ್ಕಾರಕ್ಕೆ ನುಂಗಲಾರದ ತುತ್ತಾಗಿದೆ.

ನಿನ್ನೆಯಷ್ಟೇ ಮಾಜಿ ಸಚಿವ ರೋಷನ್ ಬೇಗ್ ಅವರು, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯನವರ ವಿರುದ್ದ ಬಹಿರಂಗ ವಾಗ್ದಾಳಿ ನಡೆಸಿ ಕಿಡಿಕಾರಿದ್ದರು.

ಕೆಪಿಸಿಸಿ ನೀಡಿರುವ ನೋಟಿಸ್‍ಗೂ ಕ್ಯಾರೆ ಎನ್ನದೆ ಅಸಮರ್ಥರು ನೀಡಿರುವ ನೋಟಿಸ್‍ನ್ನು ನಾನು ಓದುವುದೂ ಇಲ್ಲ ಎಂದು ಹೇಳಿದ್ದಾರೆ. ಡಿ.ಕೆ.ಶಿವಕುಮಾರ್, ಎಂ.ಬಿ.ಪಾಟೀಲ್, ಎಚ್.ಕೆ.ಪಾಟೀಲ್, ಕೆ.ಜೆ.ಜಾರ್ಜ್ ಅವರಂತಹ ಸಮರ್ಥ ನಾಯಕರು ಕಾಂಗ್ರೆಸ್‍ಗಾಗಿ ದುಡಿಯುತ್ತಿದ್ದಾರೆ. ನಾನು ಆಕ್ಷೇಪ ಎತ್ತಿರುವುದು ಅಸಮರ್ಥ ನಾಯಕರ ಬಗ್ಗೆ ಎಂದು ರೋಷನ್ ಬೇಗ್ ತಮ್ಮ ವಾಗ್ದಾಳಿಯನ್ನು ಮುಂದುವರೆಸಿದ್ದರು.

ಸಮ್ಮಿಶ್ರ ಸರ್ಕಾರದಲ್ಲಿ ರಮೇಶ್ ಜಾರಕಿಹೊಳಿ, ರೋಷನ್ ಬೇಗ್ ಪಕ್ಷದ ನಾಯಕರ ವಿರುದ್ಧ ಕಿಡಿಕಾರಿದರೆ, ಈಗ ಸುಧಾಕರ್ ಅದೇ ದಾರಿಯಲ್ಲಿ ಹೆಜ್ಜೆ ಹಾಕಿದಂತಿದೆ. ಇಂದು ಸಂಜೆ ಸುಧಾಕರ್ ಪತ್ರಿಕಾಗೋಷ್ಠಿಯನ್ನು ಕರೆದಿರುವುದು ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ