ಬಿಜೆಪಿಯವರು ಹಗಲು ಕನಸು ಕಾಣುತ್ತಿದ್ದಾರೆ-ಎಚ್.ವಿಶ್ವನಾಥ್

ಬೆಂಗಳೂರು, ಮೇ 20-ಲೋಕಸಭೆ ಮತದಾನೋತ್ತರ ಸಮೀಕ್ಷೆ ಹಿನ್ನೆಲೆಯಲ್ಲಿ ಬಿಜೆಪಿಯವರು ಹಗಲು ಕನಸು ಕಾಣುತ್ತಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಟೀಕಿಸಿದ್ದಾರೆ.

ಬಿಜೆಪಿಯವರು ಎಲ್ಲಾ ರೀತಿಯ ಕನಸುಗಳನ್ನು ಕಾಣಬಹುದು.ನಮ್ಮದೇನೂ ಅಭ್ಯಂತರವಿಲ್ಲ. ಇನ್ನು ಮೂರು ದಿನದಲ್ಲಿ ಮತದಾರರ ತೀರ್ಪು ಹೊರಬರಲಿದೆ. ಆಗ ಎಲ್ಲವೂ ಗೊತ್ತಾಗಲಿದೆ ಎಂದರು.

ಈ ಹಿಂದೆಯೂ ಸಮೀಕ್ಷೆಗಳು ನಡೆದಿದ್ದವು.ಆ ಸಮೀಕ್ಷೆಗಳ ವಾಸ್ತವಿಕತೆ ಏನಾಗಿತ್ತೆಂಬುದು ನಮ್ಮ ಮುಂದಿದೆ. ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಮತದಾರರು ಯಾರ ವಿರುದ್ಧ ಇದ್ದರು ಎಂಬುದನ್ನು ಹೇಳುವುದು ಕಷ್ಟ. ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ, ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಆಡಳಿತ ನಡೆಸುತ್ತಿವೆ. ಮತದಾರರು ಈ ಎರಡೂ ಸರ್ಕಾರಗಳ ಆಡಳಿತವನ್ನು ಪರಿಗಣನೆಗೆ ತೆಗೆದುಕೊಂಡಿದ್ದಾರೆ ಎಂದರು.

ಮತದಾನದ ದಿನದಂದು ಮತದಾರರು ಗುಂಪುಗುಂಪಾಗಿ ಸರತಿ ಸಾಲಿನಲ್ಲಿ ನಿಂತು ಉತ್ಸಾಹದಿಂದ ಮತ ಚಲಾವಣೆ ಮಾಡಿದ್ದಾರೆ.ಯಾರ ಪರವಾಗಿ, ಯಾರ ವಿರುದ್ಧವಾಗಿ ಮತ ಚಲಾಯಿಸಿದ್ದಾರೆ ಎಂಬುದು ನಿಗೂಢವಾಗಿದೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿಗೆ ಲೋಕಸಭೆ ಚುನಾವಣೆಯಲ್ಲಿ ನಿರೀಕ್ಷಿತ ಫಲಿತಾಂಶ ದೊರೆಯಲಿದೆ ಎಂಬುದನ್ನು ನಿರ್ದಿಷ್ಟವಾಗಿ ಹೇಳಲಾಗದು ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ