ಸಮಾಜದ ಸಜ್ಜನ ಶಕ್ತಿಯು ಸಂಘದ ಜೊತೆ ಸೇರಲು ಉತ್ಸುಕವಾಗಿದೆ : ನಾ. ತಿಪ್ಪೇಸ್ವಾಮಿ

ಸಮಾಜದ ಸಜ್ಜನ ಶಕ್ತಿಯು ಸಂಘದ ಜೊತೆ ಸೇರಲು ಉತ್ಸುಕವಾಗಿದೆ : ನಾ. ತಿಪ್ಪೇಸ್ವಾಮಿ

ಹಾಸನದಲ್ಲಿ ನಡೆಯುತ್ತಿದ್ದ ಸಂಘ ಶಿಕ್ಷಾ ವರ್ಗಗಳ ಸಮಾರೋಪ ಸಮಾರಂಭ

20 ಮೇ 2019,

ಹಾಸನ: ಸಮಾಜ ಪರಿವರ್ತನೆ ಮಾಡುವ ಕೆಲಸದಲ್ಲಿ ‌93 ವರ್ಷಗಳಿಂದ ಸಕ್ರಿಯವಾಗಿರುವ ಆರೆಸ್ಸೆಸ್ ಜೊತೆ ಸೇರಿ ಕೆಲಸ ಮಾಡಲು ಸಮಾಜದ ಸಜ್ಜನ ಶಕ್ತಿಯು ಉತ್ಸುಕವಾಗಿದೆ ಎಂದು ಆರೆಸ್ಸೆಸ್ ನ ದಕ್ಷಿಣ ಮಧ್ಯ ಕ್ಷೇತ್ರದ ಕಾರ್ಯವಾಹರಾದ ನಾ. ತಿಪ್ಪೇಸ್ವಾಮಿ ಅವರು ಹೇಳಿದರು. ಅವರು ಹಾಸನದ ಹೆಚ್. ಪಿ. ಎಸ್. ಶಿಕ್ಷಣ ಸಂಸ್ಥೆಯ ಪರಿಸರದಲ್ಲಿ ನಡೆಯುತ್ತಿರುವ 20 ದಿನಗಳ ಕರ್ನಾಟಕ ‌ರಾಜ್ಯದ ಸಂಘ‌ ಶಿಕ್ಷಾ ವರ್ಗಗಳ ಸಮಾರೋಪ ಸಮಾರಂಭದಲ್ಲಿ ಮಾತನಾಡುತ್ತಿದ್ದರು. ಸಮಾಜದ ಪರಿವರ್ತನೆಯು ಜನರ ಸಂಘಟನೆ ಮತ್ತು ಸಹಭಾಗಿತ್ವದಿಂದಷ್ಟೇ ಸಾಧ್ಯವಾಗುತ್ತದೆ, ಸಮಾಜವನ್ನು ಸಂಘಟಿಸುವ ಕೆಲಸವನ್ನು ಸಂಘ ಮಾಡುತ್ತಿದೆ ಎಂದವರು ಹೇಳಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಬೆಳೆಗಾರರ ಸಂಘದ ಅಧ್ಯಕ್ಷರಾದ ಶ್ರೀ ತೀರ್ಥಮಲ್ಲೇಶ್, ಆರೆಸ್ಸೆಸ್ ಶಿಸ್ತು ಮತ್ತು ಸಮಯಪಾಲನೆಗೆ ಮಾದರಿ ಎಂದರು. ದೇಶಭಕ್ತಿ ಮತ್ತು ರಾಷ್ಟ್ರೀಯತೆಯನ್ನು ಕಲಿಸುವುದರಲ್ಲಿ ಆರೆಸ್ಸೆಸ್ ಗೆ ಸಮನಾದ ಸಂಘಟನೆ ಇನ್ನೊಂದಿಲ್ಲ ಎಂದು ಅಭಿಪ್ರಾಯಪಟ್ಟರು.

ಪ್ರಥಮ ವರ್ಷದ ಶಿಬಿರದಲ್ಲಿ 98 ಮತ್ತು ದ್ವಿತೀಯ ವರ್ಷದಲ್ಲಿ 77 ಶಿಕ್ಷಾರ್ಥಿಗಳು ಶಿಕ್ಷಣ ಪಡೆದಿದ್ದಾರೆ. ಆರೆಸ್ಸೆಸ್ ನ ಸರಸಂಘಚಾಲಕ ಡಾ. ಮೋಹನ್ ಭಾಗವತ್ ಆದಿಯಾಗಿ‌ ಅನೇಕ ಪ್ರಮುಖರು ಶಿಕ್ಷಾರ್ಥಿಗಳಿಗೆ ಮಾರ್ಗದರ್ಶನ ಮಾಡಿದ್ದಾರೆ.

ಶಿಬಿರಾಧಿಕಾರಿಗಳಾದ ದಾವಣಗೆರೆಯ ಜಿಲ್ಲಾ ಸಂಘಚಾಲಕರಾದ ಉಮಾಪತಿಯವರು ಸ್ವಾಗತಿಸಿದರು. ಪುತ್ತೂರಿನ ಡಾ. ಸಚ್ಚಿದಾನಂದ ರೈ ಶಿಬಿರದ ವರದಿ ವಾಚನ ಮಾಡಿದರೆ, ಹಾಸನದ ವಿಜಯಕುಮಾರ್ ಅವರು‌ ವಂದಿಸಿದರು. ಕಾರ್ಯಕ್ರಮದಲ್ಲಿ ಶಿಕ್ಷಾರ್ಥಿಗಳಿಂದ ಆಕರ್ಷಕ ಶಾರೀರಿಕ ಪ್ರದರ್ಶನ ನಡೆಯಿತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ