ಕೊಲಂಬೋದಲ್ಲಿ ಉಗ್ರರಿಂದ ಬಾಂಬ್​ ದಾಳಿ ಹಿನ್ನೆಲೆ ಇಂದಿನಿಂದ ಶ್ರೀಲಂಕಾದಲ್ಲಿ ಬುರ್ಖಾ ಬ್ಯಾನ್

ನವದೆಹಲಿ: ಕೆಲವು ದಿನಗಳ ಹಿಂದಷ್ಟೇ ಶ್ರೀಲಂಕಾದ ಕೊಲಂಬೋದಲ್ಲಿ ಚರ್ಚ್​ ಮತ್ತು ಐಷಾರಾಮಿ ಹೋಟೆಲ್​ಗಳ ಮೇಲೆ ಸರಣಿ ಬಾಂಬ್​ ಸ್ಫೋಟ ನಡೆದಿರುವ ಹಿನ್ನೆಲೆಯಲ್ಲಿ ಭಯೋತ್ಪಾದಕ ದಾಳಿ ಮತ್ತೆ ಮರುಕಳಿಸದಂತೆ ಅಲ್ಲಿನ ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಅದರ ಭಾಗವಾಗಿ ನಿನ್ನೆ ಹೊಸ ಆದೇಶ ಹೊರಡಿಸಿರುವ ಶ್ರೀಲಂಕಾ ಸರ್ಕಾರ ಇಂದಿನಿಂದ ಬುರ್ಖಾ ಮತ್ತು ಮುಖಕ್ಕೆ ಬಟ್ಟೆಗಳನ್ನು ಕಟ್ಟಿಕೊಂಡು ಓಡಾಡುವುದನ್ನು ನಿಷೇಧಿಸಿದೆ.

ಈಸ್ಟರ್​ ಹಬ್ಬದ ಸಂಭ್ರಮದಲ್ಲಿದ್ದ ಶ್ರೀಲಂಕಾಗೆ ಆ ದಿನ ಕರಾಳ ದಿನವಾಗಿ ಹೋಗಿತ್ತು. ಕೊಲಂಬೋದ ಒಟ್ಟು 8 ಕಡೆಗಳಲ್ಲಿ ಬಾಂಬ್​ ಸ್ಫೋಟವಾಗಿತ್ತು. ಈ ವೇಳೆ 250ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. ಅದರಲ್ಲಿ ಕರ್ನಾಟಕದ 10 ಜನರೂ ಸೇರಿದ್ದರು. ಈ ದಾಳಿ ನಡೆಸಿದ್ದು ನಾವೇ ಎಂದು ಐಸಿಸ್​ ಒಪ್ಪಿಕೊಂಡಿತ್ತು. ಬಾಂಬ್​ ದಾಳಿ ಹಿನ್ನೆಲೆ ಶ್ರೀಲಂಕಾ ಸರ್ಕಾರ 2 ಉಗ್ರ ಸಂಘಟನೆಗಳ ಮೇಲೆ ನಿಷೇಧ ಹೇರಿತ್ತು.

ದಿ ನ್ಯಾಷನಲ್ ತವಹೀದ್​ ಜಮಾತ್ ಮತ್ತು ಜಮಾಥಿ ಮಿಲ್ಲಾಥು ಇಬ್ರಾಹಿಂ ಸಂಘಟನೆಗಳ ಮೇಲೆ ಶ್ರೀಲಂಕಾ ಸರ್ಕಾರ ನಿಷೇಧ ಹೇರಿತ್ತು. ಅದರ ಬೆನ್ನಲ್ಲೇ ಇಂದಿನಿಂದ ಬುರ್ಖಾ ಮೇಲೂ ನಿಷೇಧ ಹೇರಲಾಗಿದೆ. ಈ ಬಗ್ಗೆ ನಿನ್ನೆ ಶ್ರೀಲಂಕಾ ಸರ್ಕಾರ ಆದೇಶ ಹೊರಡಿಸಿದೆ. ಬುರ್ಖಾ ಜೊತೆಗೆ ಮುಖವನ್ನು ಮುಚ್ಚಿಕೊಳ್ಳುವಂತೆ ಬಟ್ಟೆ ಸುತ್ತಿಕೊಳ್ಳುವುದನ್ನು ಕೂಡ ನಿಷೇಧಿಸಿದೆ. ಭಯೋತ್ಪಾದಕ ಕೃತ್ಯಗಳ ನಿಯಂತ್ರಣಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದ್ದು, ಮುಖವನ್ನು ಮುಚ್ಚಿಕೊಂಡಿರುವವರನ್ನು ಅನುಮಾನಾಸ್ಪದ ವ್ಯಕ್ತಿಗಳೆಂದು ಪರಿಗಣಿಸಬೇಕಾಗುತ್ತದೆ. ಸಾರ್ವಜನಿಕ ಹಿತಾಸಕ್ತಿಗಾಗಿ ಈ ನಿಷೇಧದ ಆದೇಶ ಹೊರಡಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ.

ಭದ್ರತಾ ದೃಷ್ಟಿಯಿಂದ  ಶ್ರೀಲಂಕಾದ ಸಂಸದರು ಬುರ್ಖಾ ಬ್ಯಾನ್​ ಮಾಡುವಂತೆ ಕೋರಿದ್ದರು. ಇದಾಗಿ ಎರಡು ದಿನಗಳಲ್ಲೇ ಬುರ್ಖಾವನ್ನು ನಿಷೇಧಿಸಲಾಗಿದೆ.

ಸಂಸದರಾದ ಅಶು ಮರಸಿಂಘೆ ಈ ಬಗ್ಗೆ ಪ್ರಸ್ತಾಪಿಸಿದ್ದು, ಬುರ್ಖಾ ಮುಸ್ಲಿಮರ ಸಾಂಪ್ರದಾಯಿಕ ಉಡುಗೆಯಲ್ಲ ಎಂದು ಹೇಳಿದ್ದರು. ಹಾಗೇ, ಆಲ್ ಸೀಲಾನ್ ಜಮೀಯತ್ ಉಲಾಮ ಎಂಬ ಮತ್ತೊಂದು ಸಂಘಟನೆ ಕೂಡ ಮಹಿಳೆಯರು ಮುಖವನ್ನು ಬಟ್ಟೆಯಿಂದ ಮುಚ್ಚಿಕೊಳ್ಳಬಾರದು. ರಾಷ್ಟ್ರೀಯ ಭದ್ರತಾ ದೃಷ್ಟಿಯಿಂದ ಈ ಕ್ರಮ ಅನಿವಾರ್ಯವಾಗಿದೆ ಎಂದು ಹೇಳಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ