ರೋನಿತ್ ತಿವಾರಿ ಹತ್ಯೆ ಪ್ರಕರಣ-ಪೊಲೀಸರಿಂದ ರೋನಿತ್ ಪತ್ನಿ ಅಪೂರ್ವ ಬಂಧನ

ನವದೆಹಲಿ, ಏ.24- ಕಾಂಗ್ರೆಸ್ ಧುರೀಣ ಮತ್ತು ಮಾಜಿ ಮುಖ್ಯಮಂತ್ರಿ ಎನ್.ಡಿ.ತಿವಾರಿ ಅವರ ಪುತ್ರ ರೋನಿತ್ ಶೇಖರ್ ತಿವಾರಿ ಹತ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸೊಸೆ ಅಪೂರ್ವರನ್ನು ದೆಹಲಿ ಪೊಲೀಸರು ಇಂದು ಬೆಳಿಗ್ಗೆ ಬಂಧಿಸಿದ್ದಾರೆ.

ರೋನಿತ್‍ರವನ್ನು ಉಸಿರುಗಟ್ಟಿಸಿ ಕೊಂದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೆಲವು ದಿನಗಳಿಂದ ಅವರ ಪತ್ನಿ ಅಪೂರ್ವರನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದರು.

ಆಕೆ ಈ ಹಿಂದೆ ನೀಡಿದ್ದ ಹೇಳಿಕೆಗೂ ಮತ್ತು ಈಗಿನ ಹೇಳಿಕೆಗೂ ತುಂಬಾ ವ್ಯತ್ಯಾಸ ಕಂಡು ಬಂದಿದ್ದರಿಂದ ಪೊಲೀಸರು ಅಪೂರ್ವರನ್ನು ಬಂಧಿಸಿದ್ದಾರೆ.

ಕಳೆದ ವಾರ ಅನುಮಾಸ್ಪದವಾಗಿ ಮೃತಪಟ್ಟ ರೋನಿತ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ ನಂತರ ಅದು ಅಸ್ವಾಭಾವಿಕ ಸಾವು ಎಂದು ತಿಳಿದು ಬಂತು. ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ತೀವ್ರ ತನಿಖೆ ಕೈಗೊಂಡಿದ್ದರು.

ಎನ್.ಡಿ.ತಿವಾರಿ ಅವರ ಪತ್ನಿ ಮತ್ತು ರೋನಿತ್ ಅವರ ತಾಯಿ ಉಜ್ವಲಾ ತಮ್ಮ ಪುತ್ರನ ಸಾವಿಗೆ ಅಪೂರ್ವ ಮತ್ತು ಆಕೆಯ ಮನೆಯವರೆ ಕಾರಣ ಆಸ್ತಿ ಕಬಳಿಸುವ ಉದ್ದೇಶದಿಂದ ತಮ್ಮ ಪುತ್ರನನ್ನು ಕೊಲ್ಲಲಾಗಿದೆ ಎಂದು ಉಜ್ವಲಾ ಆರೋಪಿಸಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ