ಲಂಕಾ ಸ್ಫೋಟ: ತೌಹೀದ್ ಜಮಾತ್ ಸಂಘಟನೆ ಕೈವಾಡ?, ತಮಿಳುನಾಡಿನಲ್ಲೂ ಸಕ್ರಿಯ!

ಕೊಲಂಬೊ: ಕ್ರಿಶ್ಚಿಯನ್ನರ ಈಸ್ಟರ್‌ ಹಬ್ಬದ ದಿನವೇ ಶ್ರೀಲಂಕಾದ ಕೊಲಂಬೊದಲ್ಲಿ ಭಾನುವಾರ ರಕ್ತದೋಕುಳಿ ಹರಿದಿದೆ. ಸುಮಾರು ಮೂರು ದಶಕಗಳ ಕಾಲ ಎಲ್‌ಟಿಟಿಇ ಉಗ್ರರ ಹಿಂಸಾಚಾರದಲ್ಲಿ ಬೆಂದು ಹೋಗಿದ್ದ ದ್ವೀಪ ರಾಷ್ಟ್ರದಲ್ಲಿ 2009ರ ಬಳಿಕ ನೆಲೆಸಿದ್ದ ಶಾಂತಿಗೆ ಭಂಗ ಬಂದಿದೆ.

ಎಂಟು ಸರಣಿ ಬಾಂಬ್‌ ಸ್ಫೋಟಗಳ ಮೂಲಕ 215 ಜನರ ಮಾರಣಹೋಮ ನಡೆದಿದ್ದು, ಈ ಪೈಶಾಚಿಕ ಕೃತ್ಯದ ಹಿಂದೆ ಯಾವ ಉಗ್ರ ಸಂಘಟನೆಗಳ ಕೈವಾಡವಿದೆ ಎಂಬುದು ಈವರೆಗೂ ಸ್ಪಷ್ಟಗೊಂಡಿಲ್ಲ. ಆದರೆ, ಈ ದಾಳಿಯ ಹಿಂದೆ ತೌಹೀದ್ ಜಮಾದ್ ಉಗ್ರ ಸಂಘಟನೆಯ ಕೈವಾಡ ಇದೆ ಎಂಬ ಶಂಕೆ ವ್ಯಕ್ತವಾಗುತ್ತಿದೆ. ಈ ಸಂಘಟನೆ ತಮಿಳುನಾಡಿನಲ್ಲಿಯೂ ಸಕ್ರಿಯವಾಗಿದೆ ಎಂದು ಹೇಳಲಾಗುತ್ತಿದೆ.

ಇಂತಹದ್ದೊಂದು ಭೀಕರ ದಾಳಿ ನಡೆಯುವ ಸಾಧ್ಯತೆಗಳಿವೆ ಎಂಬ ಗುಪ್ತಚರ ಮಾಹಿತಿಯನ್ನು ಶ್ರೀಲಂಕಾ ಪೊಲೀಸ್‌ ಮುಖ್ಯಸ್ಥ ಪುಜುತ್‌ ಜಯಸುಂದ್ರ ಅವರು 10 ದಿನಗಳ ಹಿಂದೆಯೇ ಸರಕಾರದ ಗಮನಕ್ಕೆ ತಂದಿದ್ದರೂ ಅದರ ಬಗ್ಗೆ ನಿರ್ಲಕ್ಷ್ಯ ತೋರಿದ್ದೇ ಈ ರಕ್ತಪಾತಕ್ಕೆ ಕಾರಣವಾಗಿದೆ ಎಂಬ ಮಾತುಗಳು ಕೇಳಿಬಂದಿವೆ.

ವಿದೇಶಿ ಪ್ರವಾಸಿಗರು ಹೆಚ್ಚು ಭೇಟಿ ನೀಡುವ ದೇಶದ ಪ್ರಮುಖ ಚರ್ಚ್‌ಗಳು, ಪಂಚತಾರಾ ಹೋಟೆಲ್‌ಗಳು ಹಾಗೂ ಭಾರತೀಯ ದೂತಾವಾಸ ಕಚೇರಿಯನ್ನು ಗುರಿಯಾಗಿಸಿಕೊಂಡು ‘ನ್ಯಾಷನಲ್‌ ತೌಹೀತ್‌ ಜಮಾತೆ’ (ಎನ್‌ಟಿಜೆ) ಉಗ್ರ ಸಂಘಟನೆಯು ಆತ್ಮಾಹುತಿ ದಾಳಿ ನಡೆಸಲು ಸಂಚು ರೂಪಿಸುತ್ತಿದೆ ಎಂದು ವಿದೇಶಿ ಗುಪ್ತಚರ ಸಂಸ್ಥೆಯೊಂದು ಮಾಹಿತಿ ನೀಡಿದೆ. ಇದೊಂದು ಗಂಭೀರ ವಿಷಯವಾಗಿದ್ದು, ಭದ್ರತೆ ವಿಚಾರದಲ್ಲಿ ರಾಜಿ ಮಾಡಿಕೊಳ್ಳದೇ ತುರ್ತು ಕ್ರಮಗಳನ್ನು ಜಾರಿಗೊಳಿಸುವ ಅಗತ್ಯವಿದೆ,” ಎಂದು ಪುಜುತ್‌ ಜಯಸುಂದ್ರ ಅವರು ಏಪ್ರಿಲ್‌ 11ರಂದು ಸರಕಾರದ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದರು. ಇದನ್ನು ಸರಕಾರ ಗಂಭೀರವಾಗಿ ಪರಿಗಣಿಸದ ಪರಿಣಾಮ ಭಾನುವಾರ ಭಾರಿ ಬೆಲೆ ತತ್ತಿದೆ. ಎನ್‌ಟಿಜೆಯು ಮುಸ್ಲಿಂ ಮೂಲಭೂತವಾದಿ ಸಂಘಟನೆಯಾಗಿದೆ. ಕಳೆದ ವರ್ಷ ಶ್ರೀಲಂಕಾದ ಹಲವೆಡೆ ಬುದ್ಧನ ಪ್ರತಿಮೆಗಳನ್ನು ನಾಶಪಡಿಸಿದ್ದ ಆರೋಪ ಈ ಸಂಘಟನೆ ವಿರುದ್ಧ ಕೇಳಿಬಂದಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ