ಭಾಷಣ ಮಾಡುತ್ತಿದ ವೇಳೆ ಹಾರ್ದಿಕ್ ಪಟೇಲ್‍ಗೆ ವ್ಯಕ್ತಿಯಿಂದ ಕಪಾಳ ಮೋಕ್ಷ

ಅಹಮದಾಬಾದ್, ಏ.19-ಲೋಕಸಭಾ ಚುನಾವಣಾ ಪ್ರಚಾರ ಭಾಷಣ ಮಾಡುತ್ತಿದ್ದ ವೇಳೆ ಕಾಂಗ್ರೆಸ್ ಯುವ ನಾಯಕ ಮತ್ತು ಪಟೀದಾರ್ ಸಮುದಾಯದ ಮುಖಂಡ ಹಾರ್ದಿಕ್ ಪಟೇಲ್ ಅವರಿಗೆ ಅಪರಿಚಿತ ವ್ಯಕ್ತಿಯೊಬ್ಬ ಕಪಾಳ ಮೋಕ್ಷ ಮಾಡಿರುವ ಘಟನೆ ಸುರೇಂದರ್‍ನಗರ್ ಜಿಲ್ಲೆಯಲ್ಲಿ ಇಂದು ಬೆಳಗ್ಗೆ ನಡೆದಿದೆ.

ಸುರೇಂದರ್‍ನಗರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸೋಮ ಪಾಟೀಲ್ ಪರ ವಾದ್ವಾನ್ ಜಿಲ್ಲೆಯ ಬಲ್ಡಾನಾ ಗ್ರಾಮದಲ್ಲಿ ಚುನಾವಣಾ ಪ್ರಚಾರ ರ್ಯಾಲಿ ಆಯೋಜಿಸಲಾಗಿತ್ತು.

ಪಾಟೀಲ್ ಪರ ಮತಯಾಚಿಸಿ ಹಾರ್ದಿಕ್ ಪಟೇಲ್ ಭಾಷಣ ಮಾಡುತ್ತಿದ್ದ ವೇಳೆ ಅಪರಿಚಿತನೊಬ್ಬ ಹಠಾತ್ ವೇದಿಕೆ ಏರಿ ಕಪಾಳ ಮೋಕ್ಷ ಮಾಡಿದ. ಈ ಘಟನೆಯಿಂದ ವೇದಿಕೆಯಲ್ಲಿದ್ದ ಪಾಟೀಲ್ ಸೇರಿದಂತೆ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು ಒಂದು ಕ್ಷಣ ತಬ್ಬಿಬ್ಬಾದರು.

ತಕ್ಷಣ ಕಾರ್ಯಕರ್ತರು ಧಾವಿಸಿ ಕಪಾಳ ಮೋಕ್ಷ ಮಾಡಿದ ವ್ಯಕ್ತಿಯನ್ನು ಥಳಿಸಿ ಹೊರಗೆ ಎಳೆದೊಯ್ದು ಪೊಲೀಸರಿಗೆ ಒಪ್ಪಿಸಿದರು.

ಇಡೀ ಘಟನೆಯ ದೃಶ್ಯಾವಳಿಗಳು ಖಾಸಗಿ ಟಿವಿ ಚಾನೆಲ್‍ಗಳ ಕ್ಯಾಮೆರಾಗಳಲ್ಲಿ ಸೆರೆಯಾಗಿವೆ.

ಯಾವ ಉದ್ದೇಶಕ್ಕಾಗಿ ಹಾರ್ದಿಕ್‍ಪಟೇಲ್‍ಗೆ ಈ ವ್ಯಕ್ತಿ ಕಪಾಳ ಮೋಕ್ಷ ಮಾಡಿದ ಎಂಬ ಬಗ್ಗೆ ವಿಚಾರಣೆ ನಡೆಯುತ್ತಿದೆ. ಈ ಘಟನೆ ನಂತರ ಅಲ್ಲಿ ಕೆಲಕಾಲ ಉದ್ರಿಕ್ತ ವಾತಾವರಣ ನಿರ್ಮಾಣವಾಗಿತ್ತು. ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ