ಶಾಂತಿ ಮತ್ತು ಮುಕ್ತ ಮತದಾನಕ್ಕೆ ಚುನಾವಣಾ ಆಯೋಗ ಸಜ್ಜು

ಬೆಂಗಳೂರು, ಏ.16- ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಮೊದಲ ಹಂತದ ಮತದಾನ ಗುರುವಾರ ನಡೆಯಲಿದ್ದು, ಶಾಂತಿ ಮತ್ತು ಮುಕ್ತ ಮತದಾನಕ್ಕೆ ಚುನಾವಣಾ ಆಯೋಗ ಸಕಲ ರೀತಿಯಲ್ಲಿ ಸಜ್ಜಾಗಿದೆ.

ಚುನಾವಣಾ ಸಿಬ್ಬಂದಿ, ಭದ್ರತಾ ಸಿಬ್ಬಂದಿ ನಾಳೆ ಮತಗಟ್ಟೆಗಳಿಗೆ ಮತಯಂತ್ರ ಸೇರಿದಂತೆ ಅಗತ್ಯ ಪರಿಕರಗಳೊಂದಿಗೆ ತೆರಳಲಿದ್ದಾರೆ.ಏ.18ರಂದು ಬೆಳಗ್ಗೆ 7 ರಿಂದ ಸಂಜೆ 6 ಗಂಟೆವರೆಗೆ ಮತದಾನ ನಡೆಯಲಿದೆ.

ಮೊದಲ ಹಂತದಲ್ಲಿ 14 ಕ್ಷೇತ್ರಗಳಾದ ಉಡುಪಿ-ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ, ಚಿತ್ರದುರ್ಗ, ತುಮಕೂರು, ಮಂಡ್ಯ, ಮೈಸೂರು, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು, ಚುನಾವಣಾ ಕಣದಲ್ಲಿ 241 ಅಭ್ಯರ್ಥಿಗಳಿದ್ದಾರೆ.

ಮೊದಲ ಹಂತದಲ್ಲಿ 30,197 ಮತಗಟ್ಟೆಗಳಿದ್ದು, 6318 ಸೂಕ್ಷ್ಮ ಹಾಗೂ 23,874 ಮತಗಟ್ಟೆಗಳನ್ನು ಸಾಮಾನ್ಯ ಮತಗಟ್ಟೆಗಳೆಂದು ಗುರುತಿಸಲಾಗಿದ್ದು, ಅತಿಸೂಕ್ಷ್ಮ ಮತಗಟ್ಟೆಗಳಿಗೆ ಸಿಆರ್‍ಪಿಎಫ್ ಪಡೆಯ ಭದ್ರತೆ ಒದಗಿಸಲು ಆಯೋಗ ಉದ್ದೇಶಿಸಿದೆ.

ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ 5,10,59,103 ಮತದಾರರಿದ್ದು, ಮೊದಲ ಬಾರಿ ಮತ ಚಲಾಯಿಸುವ ಹಕ್ಕು ಪಡೆದವರ ಸಂಖ್ಯೆ 10,09,167, ಸೇವಾ ಮತದಾರರ ಸಂಖ್ಯೆ 43,337.

ಮತದಾನ ಮಾಡಲು ಮತದಾರರ ಪಟ್ಟಿಯಲ್ಲಿ ಹೆಸರಿರುವುದು ಕಡ್ಡಾಯ. ಮತದಾರರ ಪಟ್ಟಿಯಲ್ಲಿ ಹೆಸರುಳ್ಳ ಅರ್ಹ ಮತದಾರರು ಭಾರತದ ಚುನಾವಣಾ ಆಯೋಗ ನೀಡಿರುವ ಮತದಾರರ ಗುರುತಿನ ಚೀಟಿ, ಪಾಸ್‍ಪೋರ್ಟ್, ಡ್ರೈವಿಂಗ್ ಲೈಸೆನ್ಸ್, ಕೇಂದ್ರ, ರಾಜ್ಯ ಸೇರಿದಂತೆ ಸಾರ್ವಜನಿಕ ವಲಯದ ಸಂಸ್ಥೆಗಳು ನೀಡಿರುವ ಸೇವಾ ಗುರುತಿನ ಚೀಟಿ, ಪೋಸ್ಟ್ ಆಫೀಸ್, ಬ್ಯಾಂಕ್‍ಗಳ ಪಾಸ್‍ಬುಕ್, ಪ್ಯಾನ್‍ಕಾರ್ಡ್, ಉದ್ಯೋಗ ಖಾತ್ರಿಯ ಗುರುತಿನ ಚೀಟಿ, ಕಾರ್ಮಿಕ ಇಲಾಖೆಯ ಆರೋಗ್ಯ ವಿಮಾ, ಸ್ಮಾರ್ಟ್ ಕಾರ್ಡ್, ಆಧಾರ್ ಕಾರ್ಡ್, ಭಾವಚಿತ್ರವಿರುವ ಪೆನ್ಷನ್ ಕಾರ್ಡ್‍ಗಳು ಸೇರಿದಂತೆ 11 ವಿಧದ ಗುರುತಿನ ಚೀಟಿಗಳನ್ನು ಹಾಜರುಪಡಿಸಿ ಮತದಾನ ಮಾಡಬಹುದಾಗಿದೆ.

ಈಗಾಗಲೇ ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಮತದಾರರಿಗೆ ವೋಟರ್ ಸ್ಲಿಪ್‍ಗಳನ್ನು ನೀಡಲಾಗಿದೆ.

ಮತಗಟ್ಟೆಗಳಲ್ಲಿ ಮತದಾರರಿಗೆ ಅನುಕೂಲವಾಗುವಂತೆ ಅಗತ್ಯ ಮೂಲ ಸೌಲಭ್ಯ ಕಲ್ಪಿಸಲಿದ್ದು, ದಿವ್ಯಾಂಗರಿಗೆ ರ್ಯಾಂಪ್‍ಗಳು, ಭೂತಕನ್ನಡಿ, ಕುಡಿಯುವ ನೀರುಗಾಲಿ ಕುರ್ಚಿ, ಸಾರಿಗೆ ವ್ಯವಸ್ಥೆ ಮೊದಲಾದ ಸೌಕರ್ಯಗಳನ್ನು ಕಲ್ಪಿಸಲಾಗುತ್ತದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ