ಖಂಡ್ರೆಗೆ ಗೆಲ್ಲಿಸಿದರೆ ರಾಷ್ಟ್ರೀಯ ನಾಯಕರು : ವಿಜಯ್ ಕುಮಾರ್ ಕೌಡ್ಯಾಳ್

ಬೀದರ್: ಬೀದರ್ ಲೋಕಸಭಾ ಕ್ಷೇತ್ರದ ಮೈತ್ರಿ ಪಕ್ಷದ ಅಭ್ಯರ್ಥಿ ಈಶ್ವರ ಖಂಡ್ರೆ ಅವರಿಗೆ ಸಂಸದರಾಗಿ ಆಯ್ಕೆ ಮಾಡಿದರೆ ಅವರು ರಾಷ್ಟ್ರಮಟ್ಟದ ದೊಡ್ಡ ನಾಯಕರಾಗಿ ಗುರುತಿಸಿಕೊಳ್ಳುವ ಜತೆಗೆ ಬೀದರ್ ಕ್ಷೇತ್ರದ ಸಮಗ್ರ ಅಭಿವೃದ್ಧಿ ಮಾಡಲಿದ್ದಾರೆ ಎಂದು ಕಾಂಗ್ರೆಸ್‍ನ ಯುವ ಮುಖಂಡ ವಿಜಯಕುಮಾರ ಕೌಡ್ಯಾಳ ಹೇಳಿದರು.

ಗುರುವಾರ ಔರಾದ್ ತಾಲೂಕಿನ ಠಾಣಾ ಕುಶನೂರ, ಕಮಲನಗರ ಸೇರಿದಂತೆ ವಿವಿಧೆಡೆ ಈಶ್ವರ ಖಂಡ್ರೆ ಪರವಾಗಿ ಮತಯಾಚನೆ ಮಾಡಿ ಮಾತನಾಡಿ, ಈಶ್ವರ ಖಂಡ್ರೆ ಸರಳ, ಸಜ್ಜನಿಕೆಯ ವ್ಯಕ್ತಿ. ಅವರನ್ನು ಈ ಬಾರಿ ಆಯ್ಕೆ ಮಾಡಿದರೆ ಖಂಡ್ರೆ ರಾಷ್ಟ್ರೀಯ ನಾಯಕರಾಗಿ ಬೆಳೆದು, ಬೀದರ್ ಕೀರ್ತಿ ದೇಶಾದ್ಯಂತ ಹರಡಿಸಲಿದ್ದಾರೆ ಎಂದರು.

2018ರ ವಿಧಾನಸಭಾ ಚುನಾವಣೆಯಲ್ಲಿ ಔರಾದ್ ಕ್ಷೇತ್ರದಿಂದ ಸ್ಪರ್ಧಿಸಿದ ನನಗೆ ಕ್ಷೇತ್ರದ ಮತದಾರರು ಬೆಂಬಲಿಸಿದರೆ. ಆದರೆ ಸ್ವಲ್ಪ ಮತಗಳ ಅಂತರದಿಂದ ನನಗೆ ಹಿನ್ನೆಡೆಯಾಯಿತು. ಹೀಗಾಗಿ ಲೋಕಸಭಾ ಚುನಾವಣೆಯಲ್ಲಿ ಖಂಡ್ರೆ ಅವರಿಗೆ ಔರಾದ್ ಜನತೆ ಸಂಪೂರ್ಣವಾಗಿ ಬೆಂಬಲಿಸುವ ಮೂಲಕ ಭರ್ಜರಿಯಾಗಿ ಗೆಲ್ಲಿಸಬೇಕು ಎಂದರು.

ಸುಳ್ಳುಗಾರ ನರೇಂದ್ರ ಮೋದಿ ಅವರನ್ನು ಈ ಬಾರಿ ಅಧಿಕಾರದಿಂದ ಕೆಳಗಿಳಿಸದಿದ್ದಲ್ಲಿ ನಾವೆಲ್ಲ ಭೀಕಾರಿಗಳಾಗಬೇಕಾಗಿದೆ. ಜಿಎಸ್‍ಟಿ ಮೂಲಕ ಟ್ಯಾಕ್ಸ್ ವಸೂಲಿ ಮಾಡಿ ಮೋದಿ ಸರ್ಕಾರ ನಡೆಸಿದ್ದಾರೆ. ಇದು ಜನಸಾಮಾನ್ಯ ಸರ್ಕಾರವಲ್ಲ. ಕಾಂಗ್ರೆಸ್‍ನಿಂದ ಮಾತ್ರ ಜನಸಾಮಾನ್ಯರ ಸರ್ಕಾರ ನೀಡಲು ಸಾಧ್ಯ ಎಂದರು.

ಮಾಜಿ ಸಂಸದ ನರಸಿಂಗರಾವ ಸೂರ್ಯವಂಶಿ, ಜಿಪಂ ಅಧ್ಯಕ್ಷೆ ಗೀತಾ ಚಿದ್ರಿ, ಪ್ರಮುಖರಾದ ಕೆ.ಪುಂಡಲೀಕರಾವ, ಮೀನಾಕ್ಷಿ ಸಂಗ್ರಾಮ, ರಾಜಕುಮಾರ ಹಲಬುರ್ಗೆ ಇತರರರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ