ರಾಜಕೀಯ ಮುಖಂಡರ ಆಪ್ತರು ತಂಗಿದ್ದ ಹೋಟೆಲ್ ಮೇಲೆ ಐಟಿ ದಾಳಿ

ಬಳ್ಳಾರಿ,ಏ.10- ಚುನಾವಣಾ ಅಕ್ರಮ ಹಣ ವಹಿವಾಟಿನ ಮೇಲೆ ಕಣ್ಣಿಟ್ಟಿರುವ ಐಟಿ ಅಧಿಕಾರಿಗಳು ನಿನ್ನೆ ತಡರಾತ್ರಿ ಬಳ್ಳಾರಿಯಲ್ಲಿ ಕಾಂಗ್ರೆಸ್, ಬಿಜೆಪಿ ಮುಖಂಡರ ಆಪ್ತರು ತಂಗಿದ್ದ ಹೊಟೇಲ್ ಮೇಲೆ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

ನಗರದ ನಕ್ಷತ್ರ ಹೊಟೇಲ್‍ನಲ್ಲಿ ಬಿಜೆಪಿ ಅಭ್ಯರ್ಥಿ ದೇವೇಂದ್ರಪ್ಪ, ಮಾಜಿ ಸಚಿವ ಅನಿಲ್ ಲಾಡ್ ಆಪ್ತರು ವಾಸ್ತವ್ಯ ಹೂಡಿದ್ದರು.ಅವರ ರೂಮ್‍ಗಳ ಮೇಲೆ ದಾಳಿ ನಡೆಸಿದ ಚುನಾವಣಾಧಿಕಾರಿ ಸೇರಿದಂತೆ 6 ಮಂದಿ ಐಟಿ ಅಧಿಕಾರಿಗಳ ತಂಡ ಹೊಟೇಲ್‍ನ ಪ್ರತಿ ರೂಮ್‍ಗಳನ್ನು ಪರಿಶೀಲಿಸಿ ಕೆಲ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.

ಈ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿ ದೇವೇಂದ್ರಪ್ಪ ಐಟಿ ಅಧಿಕಾರಿಗಳ ಕ್ರಮ ಪ್ರಶ್ನಿಸಿ ಹೊಟೇಲ್‍ಗೆ ಪ್ರವೇಶಿಸಲು ಮುಂದಾದರು.ಆದರೆ ಅವರನ್ನು ಒಳ ಬಿಡದೆ ವಾಪಸ್ ಕಳುಹಿಸಿ ಶೋಧ ಮುಂದುವರಿಸಿದರು.

ದಾಳಿ ವೇಳೆ ಮಾಜಿ ಸಚಿವ ಅನಿಲ್ ಲಾಡ್ ಕೂಡ ಹೊಟೇಲ್‍ನಲ್ಲೇ ತಂಗಿದ್ದರು.ಅವರ ರೂಮ್‍ಗಳನ್ನು ಸಹ ಐಟಿ ಅಧಿಕಾರಿಗಳು ಪರಿಶೀಲನೆ ನಡೆಸಿದರು.

ಹೋಟೆಲ್ ನಿಂದ ಹೊರ ಬಂದು ಮಾಧ್ಯಮಗಳ ಜೊತೆ ಮಾತನಾಡಿದ ಅನಿಲ್ ಲಾಡ್, ನಾನು ಬೆಂಗಳೂರಿನಿಂದ ಕಾರ್ಯಕರ್ತರ ಸಭೆಗಾಗಿ ಬಂದಿದ್ದೇನೆ. ಐಟಿ ಅಧಿಕಾರಿಗಳು ಬಂದಾಗ ನಾನು ಬಾತ್ ರೂಮ್‍ನಲ್ಲಿದ್ದೆ, ನಮಗೆ ಹಣ ಇದೆ ಅಂತ ಮಾಹಿತಿ ಬಂದಿದೆ ಅಂತ ಅಧಿಕಾರಿಗಳು ಕೋಣೆಯನ್ನು ಪರಿಶೀಲನೆ ನಡೆಸಿದರು.

ಐಟಿ ಅಧಿಕಾರಿಗಳು ನನಗೆ ನೋಟಿಸ್ ನೀಡಿ ವಿಚಾರಣೆಗೆ ಬರಬೇಕು ಎಂದು ತಿಳಿಸಿದ್ದಾರೆ.ದಾಳಿಯಲ್ಲಿ ಬೆಂಗಳೂರು ಮತ್ತು ಬಳ್ಳಾರಿಯ ಐಟಿ ಅಧಿಕಾರಿಗಳು ಭಾಗಿಯಾಗಿದ್ದರು ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ