ಮೋದಿ ಬರೋ ಮೊದಲೇ ಮೈಸೂರಿನಲ್ಲಿ ಬಿಜೆಪಿ ಬಾವುಟ ತೆರವು!

ಮೈಸೂರು: ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸಾಂಸ್ಕೃತಿಕ ನಗರಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಇಡೀ ಮೈಸೂರು ನಗರವನ್ನು ಬಿಜೆಪಿ ಕೇಸರಿ ಮಯವನ್ನಾಗಿ ಮಾಡಿತ್ತು. ಆದರೆ ಈಗ ಮೋದಿ ಬರುವ ಮೊದಲೇ ಹಾಕಿದ್ದ ಬಾವುಟಗಳನ್ನು ಕಾರ್ಯಕರ್ತರು ತೆರವು ಮಾಡಿದ್ದಾರೆ.

ಮೈಸೂರಿನ ಬೀದಿ ಬೀದಿಗಳಲ್ಲಿ ಬಿಜೆಪಿ ಕೇಸರಿ ಬಾವುಟಗಳು ರಾರಾಜಿಸುತಿತ್ತು. ಆದರೆ ಇಂದು ನಡೆಯುವ ಮೋದಿ ಸಮಾವೇಶಕ್ಕೆ ಬಾವುಟ ಪ್ರದರ್ಶನಕ್ಕೆ ಚುನಾವಣಾ ಆಯೋಗ ಅನುಮತಿ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಬಾವುಟಗಳನ್ನು ತೆರವುಗೊಳಿಸುವಂತೆ ಸೂಚನೆ ನೀಡಿತ್ತು. ಹೀಗಾಗಿ ಚುನಾವಣಾ ಆಯೋಗದ ಸೂಚನೆ ಮೇರೆಗೆ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಹಾಕಿದ್ದ ಬಾವುಟಗಳನ್ನು ತೆರವುಗೊಳಿಸಿದ್ದಾರೆ.

ಲೋಕಸಭಾ ಚುನಾವಣೆ ಪ್ರಚಾರ ನಿಮಿತ್ತ ಪ್ರಧಾನಿ ನರೇಂದ್ರ ಮೋದಿ ಇಂದು ಎರಡು ಕಡೆ ಪ್ರಚಾರ ಭಾಷಣ ಮಾಡಲಿದ್ದಾರೆ. ಮೊದಲು ಚಿತ್ರದುರ್ಗದ ಚಳ್ಳಕೆರೆ, ನಂತರ ಮೈಸೂರಿನಲ್ಲಿ ಭಾಗಿಯಾಗಲಿದ್ದಾರೆ. ಹಳೇ ಮೈಸೂರು ಭಾಗದ ಅಭ್ಯರ್ಥಿಗಳ ಪರ ಮೈಸೂರಲ್ಲಿ ಮೋದಿ ಮತಯಾಚನೆ ಮಾಡಲಿದ್ದಾರೆ.

ಮೈಸೂರಿಗೆ ಆಗಮಿಸುವ ಪ್ರಧಾನಿ ಮೋದಿ ಅವರಿಗೆ ಚಾಮುಂಡೇಶ್ವರಿ ಅಮ್ಮನವರ ಬೆಳ್ಳಿ ಮೂರ್ತಿಯನ್ನು ನೀಡಲಾಗುತ್ತಿದೆ. ಇದರ ಜೊತೆಗೆ ಮೋದಿ ಅವರು ಬರೆದಿರುವ ಕವನಗಳನ್ನು ಕನ್ನಡ ಭಾಷೆಗೆ ಅನುವಾದ ಮಾಡಿರುವ ಕವನ ಸಂಕಲನಗಳನ್ನು ಸಹ ಇಂದು ಬಿಡುಗಡೆ ಮಾಡಲಾಗುತ್ತಿದೆ. ಈ ಮೂಲಕ ಮೋದಿ ಅವರಿಗೆ ಕನ್ನಡಕ್ಕೆ ಭಾಷಾಂತರಗೊಂಡ ಅವರ ಕವನ ಸಂಕಲಗಳನ್ನು ಉಡುಗೊರೆಯಾಗಿ ನೀಡಲಾಗುತ್ತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ