ಭಗವಂತ ಖೂಬಾ ಪರ ಪತ್ನಿ ಮತಯಾಚನೆ ಭಾಲ್ಕಿಯಲ್ಲಿ ಬಿಜೆಪಿ ಪರ ಪ್ರಚಾರ

ಬೀದರ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಪರವಾಗಿ ಅವರ ಪತ್ನಿ ಶೀಲಾವತಿ ಖೂಬಾ ಭಾಲ್ಕಿಯಲ್ಲಿ ಭಾನುವಾರ ಬಿರುಸಿನ ಪ್ರಚಾರ ನಡೆಸಿದರು.

ಮಹಿಳಾ ಪ್ರಮುಖರೊಂದಿಗೆ ಭಾಲ್ಕಿಯ ವಿವಿಧ ಬಡಾವಣೆಗಳಿಗೆ ಪಾದಯಾತ್ರೆ ಮೂಲಕ ಪ್ರಚಾರ ನಡೆಸಿ, ದೇಶದ ರಕ್ಷಣೆಗಾಗಿ ಹಗಲಿರುಳು ಶ್ರಮಿಸುತ್ತಿರುವ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯಾಗಬೇಕಿದೆ. ಹೀಗಾಗಿ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಅವರನ್ನು ಪ್ರಚಂಡ ಬಹುಮತದಿಂದ ಆರಿಸಿ ಸಂಸತ್‍ಗೆ ಕಳುಹಿಸಬೇಕು ಎಂದು ಮನವಿ ಮಾಡಿದರು.

ಕ್ಷೇತ್ರದ ಎಲ್ಲೆಡೆ ಸಿಗುತ್ತಿರುವ ಅಭೂತಪೂರ್ವ ಬೆಂಬಲ ನೋಡಿದರೆ, 2014ರ ಚುನಾವಣೆಯಲ್ಲಿ ಒಂದು ಲಕ್ಷ ಮತಗಳ ಅಂತರದಿಂದ ಗೆದ್ದಿರುವ ಖೂಬಾ ಅವರು, ಈ ಬಾರಿ ಎರಡು ಲಕ್ಷಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ಹೇಳಿದರು.

ಕೇಂದ್ರ ಸರ್ಕಾರದ ಸಾಧನೆ ಹಾಗೂ ಭಗವಂತ ಖೂಬಾ ತಮ್ಮ ಐದು ವರ್ಷದ ಅವಧಿಯಲ್ಲಿ ಮಾಡಿದ ಸಾಧನೆ ನೋಡಿ ಮತ ನೀಡಿ. 6 ದಶಕದಲ್ಲಿ ಕಾಂಗ್ರೆಸ್‍ನವರು ಮಾಡದ, ಜಿಲ್ಲೆಗೆ ಅಗತ್ಯವಿರುವ ಅನೇಕ ಯೋಜನೆ ಖೂಬಾ ತಂದಿದ್ದಾರೆ. ಹಲವು ರಾಷ್ಟ್ರೀಯ ಹೆದ್ದಾರಿ, ರೈಲ್ವೆ ಯೋಜನೆ ತಂದಿರುವೆ ಶ್ರೇಯಸ್ಸು ಖೂಬಾ ಅವರಿಗೆ ಸಲ್ಲುತ್ತದೆ ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ಶಕುಂತಲಾ ಬೆಲ್ದಾಳೆ ಸೇರಿದಂತೆ ನೂರಾರು ಮಹಿಳಾ ಪ್ರಮುಖರು, ಕಾರ್ಯಕರ್ತರು ಪಾಲ್ಗೊಂಡಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ