ದೇಶದ ಅಭಿವೃದ್ಧಿ, ಯಶಸ್ಸು ಕಂಡು ವಿಪಕ್ಷಗಳಿಗೆ ನಿರಾಸೆಯಾಗಿದೆ: ಪ್ರಧಾನಿ ಮೋದಿ ವಾಗ್ದಾಳಿ

ಅರುಣಾಚಲಪ್ರದೇಶ: ದೇಶ ಅಭಿವೃದ್ಧಿಯಾಗುತ್ತಿರುವುದನ್ನು ಕಂಡು ವಿಪಕ್ಷಗಳಿಗೆ ಸಹಿಸಿಕೊಳ್ಳಲಾಗುತ್ತಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ.

ಅರುಣಾಚಲ ಪ್ರದೇಶದ ಲೋಕಸಭಾ ಚುನಾವಣೆ, ವಿಧಾನಸಭಾ ಚುನಾವಣೆ ಪ್ರಚಾರಕ್ಕೆ ಚಾಲನೆ ನೀಡಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ ವಿಪಕ್ಷಗಳ ವಿರುದ್ಧ ಹರಿಹಾಯ್ದಿದ್ದಾರೆ.

ದೇಶದ ಅಭಿವೃದ್ಧಿ, ಯಶಸ್ಸು ಕಂಡು ವಿಪಕ್ಷಗಳಿಗೆ ನಿರಾಶೆಯುಂಟಾಗಿದೆ. ದೇಶ ಏನೇ ಸಾಧನೆ ಮಾಡಿದರೂ ನಿಮಗೆ ಸಂತಸವಾಗುವುದಿಲ್ಲವೇ? ತಮ್ಮ ಸಾಮಾಜಿಕ ಆರ್ಥಿಕ ಸ್ಥಿತಿಯನ್ನೂ ಮೀರಿ ಜನತೆ ದೇಶದ ಸಾಧನೆಗಳ ಬಗ್ಗೆ ಸಂತಸ ವ್ಯಕ್ತಪಡಿಸುತ್ತಾರೆ. ಆದರೆ ಕೆಲವರು ಭಾರತದ ಅಭಿವೃದ್ಧಿ ಹಾಗೂ ಯಶಸ್ಸನ್ನು ಕಂಡು ಎದೆಗುಂದುತ್ತಾರೆ ಎಂದು ಗುಡುಗಿದರು.

ಭ್ರಷ್ಟಾಚಾರಕ್ಕೆ ಸಮಾನವಾದ ಪಕ್ಷ ಕಾಂಗ್ರೆಸ್ ಎಂದ ಪ್ರಧಾನಿ, ದೇಶದ ಜನತೆಯನ್ನು ಲಘುವಾಗಿ ಪರಿಗಣಿಸುವುದು ಕಾಂಗ್ರೆಸ್ ಗೆ ಅಭ್ಯಾಸವಾಗಿಬಿಟ್ಟಿದೆ ಎಂದು ಆರೋಪಿಸಿದರು.

ಭಯೋತ್ಪಾದಕರನ್ನು ಭಾರತ ಅವರ ನೆಲದಲ್ಲೇ ಹೊಡೆದಾಗ ವಿಪಕ್ಷಗಳು ಹೇಗೆ ನಡೆದುಕೊಂಡವು ಎಂಬುದನ್ನು ನೀವೆಲ್ಲರೂ ನೋಡಿದ್ದೀರಿ. ನಮ್ಮ ವಿಜ್ಞಾನಿಗಳು ಸಾಧನೆ ಮಾಡಿದಾಗಲೆಲ್ಲಾ ಅವರ ಬಗ್ಗೆ ಲಘುವಾಗಿ ಮಾತನಾಡಲು ಕಾಂಗ್ರೆಸ್ ಕಾರಣಗಳನ್ನು ಹುಡುಕುತ್ತಿರುತ್ತದೆ ಇಂತಹ ವಿಪಕ್ಷಗಳಿಗೆ ಪಾಠ ಕಲಿಸಿ ದೇಶಕ್ಕೆ ಭದ್ರತೆ ನೀಡುವ ಚೌಕೀದಾರನಿಗೆ ಮತ ಚಲಾವಣೆ ಮಾಡಿ ಎಂದು ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ.

PM attacks opposition parties at Arunachal rally

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ