ಸಂಜೋತಾ ಸ್ಫೋಟ ಪ್ರಕರಣದಿಂದ ಅಸೀಮಾನಂದ ಖುಲಾಸೆ

ಪಂಚಕುಲ: ದಶಕದ ಹಿಂದೆ ದೇಶದಲ್ಲಿ ಕೋಲಾಹಲ ಸೃಷ್ಟಿಸಿದ್ದ ಸಂಜೋತಾ ಎಕ್ಸ್‌ಪ್ರೆಸ್‌ ರೈಲು ಸ್ಫೋಟ ಪ್ರಕರಣದಿಂದ ಸ್ವಾಮಿ ಅಸೀಮಾನಂದ ಮತ್ತು ಇತರೆ ಮೂವರನ್ನು ಹರಿಯಾಣದ ಪಂಚಕುಲ ವಿಶೇಷ ನ್ಯಾಯಾಲಯ ಬುಧವಾರ ಖುಲಾಸೆಗೊಳಿಸಿದೆ.

2007ರ ಫೆಬ್ರವರಿ 18ರಂದು ಹರಿಯಾಣದ ಪಾಣಿಪತ್‌ ರೈಲುನಿಲ್ದಾಣದ ಸಮೀಪ ನಡೆದ ಸಂಜೋತಾ ಎಕ್ಸ್‌ಪ್ರೆಸ್‌ ರೈಲು ಸ್ಫೋಟದಲ್ಲಿ 68 ಪ್ರಯಾಣಿಕರು ಮೃತಪಟ್ಟಿದ್ದರು. ಇವರಲ್ಲಿ ಬಹುತೇಕರು ಪಾಕಿಸ್ತಾನಿಗಳಾಗಿದ್ದರು. ಇದನ್ನು ಕಾಂಗ್ರೆಸ್‌ ಸೇರಿದಂತೆ ಬಿಜೆಪಿ ವಿರೋಧಿ ಪಕ್ಷಗಳು ‘ಕೇಸರಿ ಭಯೋತ್ಪಾದನೆ’ ಎಂದು ಕರೆದು, ಬಿಜೆಪಿ ಹಾಗೂ ಹಿಂದೂ ಸಂಘಟನೆಗಳ ವಿರುದ್ಧ ವ್ಯಾಪಕ ಟೀಕಾಪ್ರಹಾರ ನಡೆಸಿದ್ದವು.

ರಾಜಕೀಯ ಮತ್ತು ರಾಜತಾಂತ್ರಿಕವಾಗಿ ಅತಿ ಸೂಕ್ಷ್ಮ ಎಂದೇ ಪರಿಗಣಿತಗೊಂಡಿದ್ದ ಈ ಪ್ರಕರಣದ ವಿಚಾರಣೆ ನಡೆಸಿದ ರಾಷ್ಟ್ರೀಯ ತನಿಖಾ ದಳದ ವಿಶೇಷ ನ್ಯಾಯಾಲಯವು ಸಾವಿರಾರು ಪುಟಗಳ ಸಾಕ್ಷ್ಯಾಧಾರ ಪರಿಶೀಲಿಸಿ, ಅಂತಿಮವಾಗಿ ಸ್ವಾಮಿ ಅಸೀಮಾನಂದ, ಲೋಕೇಶ್‌ ಶರ್ಮ, ಕಮಲ್‌ ಚೌಹಾಣ್‌ ಮತ್ತು ರಾಜೇಂದ್ರ ಚೌಹಾಣ್‌ ಅವರನ್ನು ನಿರಪರಾಧಿಗಳೆಂದು ಪರಿಗಣಿಸಿ ಬಿಡುಗಡೆಗೆ ಆದೇಶ ನೀಡಿತು.

ಈ ಪ್ರಕರಣದ ಕುರಿತಂತೆ ಪಾಕಿಸ್ತಾನದ ಪ್ರತ್ಯಕ್ಷ ದರ್ಶಿಯ ವಿಚಾರಣೆ ನಡೆಸಲು ನಿರ್ದೇಶನ ನೀಡಬೇಕೆಂದು ಕೋರಿ ಪಾಕಿಸ್ತಾನಿ ಪ್ರಜೆಯೊಬ್ಬ ಸಲ್ಲಿಸಿದ್ದ ಅರ್ಜಿಯಿಂದಾಗಿ ಪ್ರಕರಣದ ಬಗ್ಗೆ ನೀಡಬೇಕಾಗಿದ್ದ ಅಂತಿಮ ತೀರ್ಪನ್ನು ಎನ್‌ಐಎ ಕೋರ್ಟ್‌ ಮುಂದೂಡಿತ್ತು. ಇದೇ ವೇಳೆ, ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಹೇಳಿಕೆ ದಾಖಲಿಸಲು ಅನುವು ಮಾಡಿಕೊಡಬೇಕೆಂದು ಕೋರಿ, ಸ್ಫೋಟದಲ್ಲಿ ಮೃತಪಟ್ಟ ಪಾಕ್‌ ಪ್ರಜೆ ಮುಹಮ್ಮದ್‌ ವಾಕೀಲ್‌ ಅವರ ಪುತ್ರಿ ರಾಹಿಲ್‌ ವಾಕೀಲ್‌ ಸಲ್ಲಿಸಿದ್ದ ಮನವಿಯನ್ನೂ ನ್ಯಾಯಾಲಯ ತಳ್ಳಿಹಾಕಿದೆ.

ಪ್ರಕರಣದ ಪ್ರಾಸಿಕ್ಯೂಷನ್‌ ಸಾಕ್ಷಿಗಳೆಂದು ಪರಿಗಣಿಸಲಾಗಿದ್ದ 13 ಪಾಕಿಸ್ತಾನಿಗಳ ಪಟ್ಟಿಯಲ್ಲಿ ಇಲ್ಲದ ರಾಹಿಲ್‌, ತಮ್ಮ ತಂದೆ ಮೃತಪಟ್ಟಿದ್ದಾನೆ ಎನ್ನುವ ಕಾರಣ ನೀಡಿ ಹೇಳಿಕೆ ದಾಖಲಿಸಲು ಮುಂದಾಗಿದ್ದರು. ಇದಕ್ಕೆ ಆರೋಪಿ ಪರ ವಕೀಲರು ವಿರೋಧ ಸೂಚಿಸಿದ್ದರು.

ಗಟ್ಟಿ ಸಾಕ್ಷ್ಯಗಳ ಕೊರತೆ: ಹಿಂದೂ ದೇವಾಲಯಗಳ ಮೇಲೆ ನಡೆದ ಉಗ್ರ ದಾಳಿಗೆ ಪ್ರತೀಕಾರವಾಗಿ ಸ್ವಾಮಿ ಅಸೀಮಾನಂದ ಸೇರಿ ಎಂಟು ಜನರ ತಂಡ ಪಾಕ್‌ ಪ್ರಜೆಗಳೇ ತುಂಬಿದ್ದ ರೈಲನ್ನು ಸ್ಫೋಟಿಸಿದರು ಎಂದು ತನಿಖೆ ನಡೆಸಿದ ಎನ್‌ಐಎ 1500 ಪುಟಗಳ ದೋಷಾರೋಪ ಸಲ್ಲಿಸಿತ್ತು. ಇದನ್ನು ಪರಿಶೀಲಿಸಿದ ಕೋರ್ಟ್‌, ಬಂಧಿತ ಅಸೀಮಾನಂದ ಹಾಗೂ ಇತರೆ ಮೂವರ ವಿರುದ್ಧ ಬಲವಾದ ಪುರಾವೆಗಳನ್ನು ಕೇಳಿತು. ಅಂತೆಕಂತೆಗಳ ಮಟ್ಟದ ಆರೋಪಗಳಿಂದ ಆಚೆಗೆ ದಾಟದ ಎನ್‌ಎಐ, ಕೈಚೆಲ್ಲಿತ್ತು.

ಈ ಸ್ಫೋಟ ಪ್ರಕರಣದ ಇನ್ನೂ ಮೂವರು ಆರೋಪಿಗಳಾದ ಸಂದೀಪ್‌ ದಂಗೆ, ರಾಮಚಂದ್ರ ಕಲಸಂಗ್ರ ಮತ್ತು ಅಮಿತ್‌ ಚೌಹಾಣ್‌ ತಲೆಮರೆಸಿಕೊಂಡಿದ್ದಾರೆ. ಪ್ರಮುಖ ಆರೋಪಿ ಎಂದು ಗುರುತಿಸಲಾಗಿದ್ದ ಸುನಿಲ್‌ ಜೋಶಿಯನ್ನು 2007ರಲ್ಲಿ ಮಧ್ಯಪ್ರದೇಶದ ದೇವಸ್‌ನಲ್ಲಿ ಗುಂಡಿಕ್ಕಿ ಹತ್ಯೆಗೈಯಲಾಗಿತ್ತು.

ಪ್ರಕರಣ ಸಾಗಿ ಬಂದ ಹಾದಿ 

*2007, ಫೆ.18: ದಿಲ್ಲಿ ಮತ್ತು ಪಾಕಿಸ್ತಾನದ ಲಹೋರ್‌ ನಡುವೆ ಸಂಚರಿಸುವ ಸಂಜೋತಾ ರೈಲು ಪಾಣಿಪತ್‌ ಸಮೀಪ ಸ್ಫೋಟ. ಎರಡು ಬೋಗಿಗಳು ಛಿದ್ರ. 68 ಪ್ರಯಾಣಿಕರು ಸಾವು.

*ಹರಿಯಾಣ ಪೊಲೀಸರಿಂದ ಪ್ರಕರಣ ದಾಖಲು. ಅಸೀಮಾನಂದ ಸೇರಿ ಎಂಟು ಮಂದಿ ಬಂಧನ.

*2010, ಜುಲೈ: ಎನ್‌ಐಎಗೆ ಪ್ರಕರಣ ವರ್ಗ.

*2011, ಜೂನ್‌: ಎನ್‌ಐಎಯಿಂದ 1500 ಪುಟಗಳ ಚಾರ್ಜ್‌ಶೀಟ್‌ ಸಲ್ಲಿಕೆ.

*2019, ಮಾರ್ಚ್‌ 20: ಸ್ವಾಮಿ ಅಸೀಮಾನಂದ ಸೇರಿ ನಾಲ್ವರ ಖುಲಾಸೆಗೊಳಿಸಿ ಎನ್‌ಐಎ ವಿಶೇಷ ನ್ಯಾಯಾಲಯ ತೀರ್ಪು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ