ದುಷ್ಕರ್ಮಿಗಳಿಂದ ವ್ಯಕ್ತಿಯೊಬ್ಬನ ಕೊಲೆ

ಬೆಂಗಳೂರು, ಮಾ.19- ದುಷ್ಕರ್ಮಿಗಳು ವ್ಯಕ್ತಿಯೊಬ್ಬರನ್ನು ಕೊಲೆ ಮಾಡಿ ಶವವನ್ನು ರೈಲ್ವೆ ಹಳಿ ಮೇಲೆ ಬಿಸಾಡಿದ್ದು, ವಾರಸುದಾರರು ಪತ್ತೆಯಾಗಿಲ್ಲ.
ಯಶವಂತಪುರ ರೈಲ್ವೆ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಕೊಲೆ ಪ್ರಕರಣ ದಾಖಲಾಗಿದೆ.

ಗುಬ್ಬಿ-ಮಲ್ಲಸಂದ್ರ ರೈಲ್ವೆ ಹಳಿ ಬಳಿ ಸುಮಾರು 30 ವರ್ಷದಂತೆ ಕಾಣುವ ವ್ಯಕ್ತಿಯನ್ನು ದುಷ್ಕರ್ಮಿಗಳು ಬೇರೆಡೆ ಕೊಲೆ ಮಾಡಿ ನಿನ್ನೆ ರೈಲ್ವೆ ಹಳಿ ಮೇಲೆ ಶವ ಬಿಸಾಡಿ ಪರಾರಿಯಾಗಿದ್ದಾರೆ.

ನಿನ್ನೆ ಶವವನು ಕಂಡ ದಾರಿಹೋಕರು ಯಶವಂತಪುರ ರೈಲ್ವೆ ಪೊಲೀಸರಿಗೆ ತಿಳಿಸಿದ್ದರು. ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಶವವನ್ನು ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ.

ಕೋಲು ಮುಖ, ಎಣ್ಣೆಗೆಂಪು ಮೈ ಬಣ್ಣ ಹೊಂದಿರುವ ಈ ವ್ಯಕ್ತಿ ಗಡ್ಡ-ಮೀಸೆ ಬಿಟ್ಟಿದ್ದು, ಸಾಧಾರಣ ಮೈಕಟ್ಟು ಹೊಂದಿದ್ದಾರೆ.

ಮೃತನ ಮೈಮೇಲೆ ತುಂಬುತೋಳಿನ ಪಿಂಕ್ ಬಣ್ಣದ ರೆಡಿಮೇಡ್ ಶರ್ಟ್, ನೀಲಿ ಬಣ್ಣದ ಜೀನ್ಸ್ ಪ್ಯಾಂಟ್, ನೀಲಿ ಬಣ್ಣದ ಶೂಸ್ ಹಾಗೂ ಸ್ಪೋಟ್ರ್ಸ್ ಸಾಕ್ರ್ಸ್ ಧರಿಸಿರುವ ಈ ವ್ಯಕ್ತಿಯ ವಾರಸುದಾರರು ಕೂಡಲೇ ಯಶವಂತಪುರ ರೈಲ್ವೆ ಪೊಲೀಸರನ್ನು ಸಂಪರ್ಕಿಸಬಹುದಾಗಿದೆ.

ರೈಲಿಗೆ ಸಿಕ್ಕಿ ಮಹಿಳೆ ಸಾವು: ಗುಬ್ಬಿ-ನಿಟ್ಟೂರು ರೈಲ್ವೆ ನಿಲ್ದಾಣದ ಮಧ್ಯೆ ಸುಮಾರು 65 ವರ್ಷದ ಮಹಿಳೆ ರೈಲಿಗೆ ಸಿಕ್ಕಿ ಮೃತಪಟ್ಟಿದ್ದು, ವಾರಸುದಾರರು ಪತ್ತೆಯಾಗಿಲ್ಲ.

ಹಸಿರು ಬಣ್ಣದ ಸೀರೆ, ರವಿಕೆ ಧರಿಸಿರುವ ಈ ಮಹಿಳೆ ಗೋಧಿ ಮೈಬಣ್ಣ, ಕೋಲು ಮುಖ ಹೊಂದಿದ್ದು, 4.5 ಅಡಿ ಎತ್ತರವಿದ್ದಾರೆ.

ಶವವನ್ನು ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.

ಮಹಿಳೆಯ ವಾರಸುದಾರರು ಕೂಡಲೇ ಯಶವಂತಪುರ ರೈಲ್ವೆ ಪೊಲೀಸರನ್ನು ಸಂಪರ್ಕಿಸಬಹುದಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ