ಇಂದು ಮತ್ತೊಮ್ಮೆ ಗೌಡರ ಕುಟುಂಬ ಮಿಲನಕ್ಕೆ ಸಾಕ್ಷಿಯಾಗಲಿದೆ ಮಂಡ್ಯ; ಲೋಕಾ ಅಭ್ಯರ್ಥಿಯಾಗಿ ನಿಖಿಲ್ ಘೋಷಣೆಗೆ ಕ್ಷಣಗಣನೆ

ಮಂಡ್ಯಲೋಕಸಭಾ ಚುನಾವಣೆಯ ಕಾಂಗ್ರೆಸ್​- ಜೆಡಿಎಸ್​ ಸೀಟು ಹಂಚಿಕೆ ಗೊಂದಲ ನಿನ್ನೆ ಇತ್ಯರ್ಥವಾಗಿದ್ದು, 8 ಕ್ಷೇತ್ರಗಳಲ್ಲಿ ಜೆಡಿಎಸ್ ಸ್ಪರ್ಧಿಸಲಿದೆ.

ನಿನ್ನೆಯಷ್ಟೇ ಹಾಸನದಲ್ಲಿ ಬೃಹತ್​ ಸಮಾವೇಶ ಮಾಡಿ ಹಿರಿಯ ಮಗ ಎಚ್​.ಡಿ. ರೇವಣ್ಣನವರ ಮಗ ಪ್ರಜ್ವಲ್​ನನ್ನು ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿದ್ದ ದೇವೇಗೌಡರು ಇಂದು ಇನ್ನೋರ್ವ  ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಅವರನ್ನು ಮಂಡ್ಯ ಅಭ್ಯರ್ಥಿಯನ್ನಾಗಿ ಘೋಷಿಸಲಿದ್ದಾರೆ.

ಇಂದು ಮಂಡ್ಯದಲ್ಲಿ ಬೃಹತ್​ ಜೆಡಿಎಸ್​ ಸಮಾವೇಶ ಏರ್ಪಡಿಸಲಾಗಿದ್ದು, ಮಂಡ್ಯದ ಅಭ್ಯರ್ಥಿಯನ್ನಾಗಿ ನಿಖಿಲ್ ಕುಮಾರಸ್ವಾಮಿಯವರನ್ನು ಘೋಷಣೆ ಮಾಡಲಾಗುವುದು. ನಿನ್ನೆ ಹಾಸನದಲ್ಲಿ ಸಚಿವ ರೇವಣ್ಣನವರ ಕುಟುಂಬ ಸಮ್ಮಿಲನವಾದಂತೆ ಇಂದು ಮಂಡ್ಯದಲ್ಲಿ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಕುಟುಂಬ ವೇದಿಕೆಯೇರಲಿದೆ. ಮಂಡ್ಯದ ಸಿಲ್ವರ್​ ಜ್ಯೂಬಿಲಿ ಪಾರ್ಕ್​ನಲ್ಲಿ ಸಮಾವೇಶ ನಡೆಯಲಿದ್ದು, ಮಂಡ್ಯದ ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್ ಹೆಸರನ್ನು ಇಂದು ಅಧಿಕೃತವಾಗಿ ಘೋಷಣೆ ಮಾಡಲಾಗುವುದು.

ಮಂಡ್ಯದಿಂದ ಕಾಂಗ್ರೆಸ್​ ಅಭ್ಯರ್ಥಿಯಾಗಿ ಸುಮಲತಾ ಅಂಬರೀಷ್​ ಅವರನ್ನು ಕಣಕ್ಕೆ ಇಳಿಸಲು ಚಿಂತಿಸಲಾಗಿತ್ತು. ಆದರೆ, ಮಂಡ್ಯ ಕ್ಷೇತ್ರವನ್ನು ಬಿಟ್ಟುಕೊಡುವುದಿಲ್ಲ ಎಂದು ಪಟ್ಟು ಹಿಡಿದ ಜೆಡಿಎಸ್​ ಕೊನೆಗೂ ತಮ್ಮ ಪಕ್ಷದ ಅಭ್ಯರ್ಥಿಯನ್ನೇ ಅಖಾಡಕ್ಕೆ ಇಳಿಸುವಲ್ಲಿ ಯಶಸ್ವಿಯಾಗಿದೆ. ಅಲ್ಲಿಗೆ ದೇವೇಗೌಡರ ಕುಟುಂಬದ ಹೊಸ ತಲೆಮಾರಿನ ಇಬ್ಬರು ಯುವಕರು ಒಂದೇ ಬಾರಿಗೆ ರಾಜಕೀಯ ಪ್ರವೇಶ ಮಾಡಿದಂತಾಗಿದೆ. ಇನ್ನು, ಬೆಂಗಳೂರು ಉತ್ತರ ಕ್ಷೇತ್ರದಿಂದ ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡರು ಸ್ಪರ್ಧಿಸುವುದು ಬಹುತೇಕ ಖಚಿತವಾಗಿದ್ದು, ಅಧಿಕೃತವಾಗಿ ನಾಮಪತ್ರ ಸಲ್ಲಿಕೆಯೊಂದೇ ಬಾಕಿಯಿದೆ.

ನಿಖಿಲ್ ಸ್ಪರ್ಧೆಯ ಬಗ್ಗೆ ಮಂಡ್ಯ ಕಾಂಗ್ರೆಸ್​ ನಾಯಕರು ಮತ್ತು ಕಾರ್ಯಕರ್ತರ ಅಸಮಾಧಾನದ ನಡುವೆಯೇ ಜೆಡಿಎಸ್​ ಕಾರ್ಯಕರ್ತರ ಬೃಹತ್​ ಸಮಾವೇಶಕ್ಕೆ ವೇದಿಕೆ ಸಜ್ಜಾಗಿದೆ. ಬೆಳಗ್ಗೆ 11 ಗಂಟೆಗೆ ಕಾರ್ಯಕರ್ತರ ಸಮಾವೇಶ ನಡೆಯಲಿದ್ದು, ಮದ್ದೂರಿನಿಂದ ಮಂಡ್ಯಕ್ಕೆ ಬೃಹತ್ ಬೈಕ್ ರ್ಯಾಲಿ ಏರ್ಪಡಿಸಲಾಗಿದೆ.

ರ್ಯಾಲಿ ಮೂಲಕ ನಿಖಿಲ್ ಕುಮಾರಸ್ವಾಮಿಯನ್ನು ಕರೆತರಲು ಸಿದ್ಧತೆ ನಡೆಸಲಾಗಿದೆ. ಸಿಎಂ ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ ಸೇರಿದಂತೆ ಎಚ್​.ಡಿ. ದೇವೇಗೌಡರ ಕುಟುಂಬದವರು ಇಂದಿನ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ