ಸಾವನ್ನು ಗೆದ್ದ ಬಂದ ಯೋಧನಿಗೆ ಸಾರ್ವಜನಿಕರಿಂದ ಅದ್ಧೂರಿ ಸ್ವಾಗತ

ಬೀದರ್ ಮಾ.13- ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಉಗ್ರನ ಆತ್ಮಾಹುತಿ ದಾಳಿಯಲ್ಲಿ ಸಾವನ್ನು ಗೆದ್ದುಬಂದ ಯೋಧನಿಗೆ ಗಡಿಜಿಲ್ಲೆ ಬೀದರ್‍ನಲ್ಲಿ ಸಾರ್ವಜನಿಕರು ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ.

ಮನೋಹರ್ ರಾಥೋಡ್ ಎಂಬುವವರು ಸಾವು ಗೆದ್ದು ಬಂದ ಯೋಧ. ಜಿಲ್ಲೆಯ ಭಾಲ್ಕಿ ತಾಲೂಕಿನ ಸೇವಾಲಾಲ್ ತಂಡದ ನಿವಾಸಿಯಾದ ಮನೋಹರ್, ಪುಲ್ವಾಮಾ ಬಳಿ ಉಗ್ರರು ನಡೆಸಿದ ದಾಳಿಯಲ್ಲಿ ಹಿಂಬದಿ ಬಸ್‍ನಲ್ಲಿ ಬರುತ್ತಿದ್ದರು. ಪವಾಡ ಸದೃಶ ರೀತಿಯಲ್ಲಿ ಮನೋಹರ್ ಪಾರಾಗಿದ್ದಾರೆ.

ಇಂದು ಬೀದರ್‍ಗೆ ಆಗಮಿಸಿದ ಹಿನ್ನೆಲೆಯಲ್ಲಿ ಅವರನ್ನು ಯುವಕರು, ಸಾರ್ವಜನಿಕರು ಗೌರವ ನೀಡಿ ಬಸವೇಶ್ವರ ವೃತ್ತದಲ್ಲಿ ಬಸವಣ್ಣನ ಪ್ರತಿಮೆಗೆ ಹಾರ ಹಾಕುವ ಮೂಲಕ ನಗರಕ್ಕೆ ಬರಮಾಡಿಕೊಂಡರು.

ಫೆ.14ರಂದು ಉಗ್ರ ಆದಿಲ್‍ದಾರ್ ಸ್ಫೋಟಕ ತುಂಬಿದ ಕಾರನ್ನು ಸಿಆರ್‍ಪಿಎಫ್ ಯೋಧರಿದ್ದ ಬಸ್‍ಗೆ ಡಿಕ್ಕಿ ಹೊಡೆಸಿದ ಪರಿಣಾಮ 40 ಯೋಧರು ಹುತಾತ್ಮರಾಗಿದ್ದರು.

ಇಂತಹ ಪರಿಸ್ಥಿತಿಯಲ್ಲಿ ಬದುಕಿ ಬಂದ ಮನೋಹರ್ ರಾಥೋಡ್‍ಗೆ ಜನರು ಹೂಗುಚ್ಛ ನೀಡಿ ಭರ್ಜರಿಯಾಗಿ ಸ್ವಾಗತಿಸುತ್ತ ಜಯಘೋಷ ಕೂಗಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ