ಮನೆ ಹಿಂಬಾಗಿಲು ಹೊಡೆದು ಚಿನ್ನಾಭರಣ ದೋಚಿದ ಕಳ್ಳರು

ಬೆಂಗಳೂರು, ಮಾ.13- ಉದ್ಯಮಿಯೊಬ್ಬರ ಕುಟುಂಬದವರೆಲ್ಲ ನಿದ್ರೆಗೆ ಜಾರಿದ್ದಾಗ ಕಳ್ಳರು ಹಿಂಬಾಗಿಲು ಮುರಿದು ಒಳನುಗ್ಗಿ ನಗದು ಸೇರಿದಂತೆ 20 ಲಕ್ಷಕ್ಕೂ ಹೆಚ್ಚು ಬೆಲೆಬಾಳುವ ಚಿನ್ನಾಭರಣಗಳನ್ನು ಕಳ್ಳತನ ಮಾಡಿರುವ ಘಟನೆ ಸದಾಶಿವನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಆರ್‍ಎಂಜಿ ಬಡಾವಣೆಯ 7ನೆ ಕ್ರಾಸ್, 9ನೆ ಮುಖ್ಯರಸ್ತೆಯಲ್ಲಿ ಉದ್ಯಮಿ ರಾಜೀವ್ ಗೋಯಂಕಾ ಎಂಬುವವರು ವಾಸವಿದ್ದಾರೆ.

ಮಾ.11ರಂದು ರಾತ್ರಿ ಉದ್ಯಮಿ ಕುಟುಂಬದವರು ಟಿವಿ ವೀಕ್ಷಿಸಿ ತಡರಾತ್ರಿ ನಿದ್ರೆಗೆ ಜಾರಿದ್ದಾರೆ. ಈ ವೇಳೆ ಕಳ್ಳರು ಇವರ ಮನೆಯ ಹಿಂಬಾಗಿಲು ಮುರಿದು ಒಳನುಗ್ಗಿ ಬೀರುವಿನಲ್ಲಿದ್ದ ಹಣ-ಆಭರಣದೊಂದಿಗೆ ಪರಾರಿಯಾಗಿದ್ದಾರೆ.

ಮಾರನೆ ದಿನ (ಮಾ.12) ಉದ್ಯಮಿ ಕುಟುಂಬದವರು ಎದ್ದಾಗಲೇ ಕಳ್ಳತನ ನಡೆದಿರುವುದು ಗೊತ್ತಾಗಿದೆ.

ಈ ಬಗ್ಗೆ ಸದಾಶಿವನಗರ ಪೊಲೀಸರಿಗೆ ಉದ್ಯಮಿ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕಳ್ಳರಿಗಾಗಿ ಶೋಧ ಕೈಗೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ