ಕ್ಷುಲ್ಲಕ ಕಾರಣಕ್ಕೆ ಸಹೋದರರಿಬ್ಬರಿಂದ ಬಾಲಕನ ಮೇಲೆ ಹಲ್ಲೆ

ಅಥಣಿ, ಮಾ.12-ಮೀನು ಹಿಡಿಯುವ ಸಲುವಾಗಿ ಎರೆಹುಳು ಕದ್ದನೆಂಬ ಕ್ಷುಲ್ಲಕ ಕಾರಣಕ್ಕೆ ಸಹೋದರರಿಬ್ಬರು ಬಾಲಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಬೆಳಗಾವಿ ಜಿಲ್ಲೆ ಅಥಣಿ ಪಟ್ಟಣದ ಹೊರ ವಲಯದಲ್ಲಿ ನಡೆದಿದೆ.

12 ವರ್ಷದ ಶ್ರೀನಿವಾಸ ಹೋಮಕರ ಎಂಬ ಬಾಲಕನನ್ನು ಬೆತ್ತಲೆಗೊಳಿಸಿದ ರಾಜು ಅಣ್ಣಪ್ಪ ಬಳ್ಳೊಳ್ಳಿ ಮತ್ತು ಮುರಳಿ ಅಣ್ಣಪ್ಪ ಬಳ್ಳೊಳ್ಳಿ ಎಂಬ ಸಹೋದರರು ಮನಬಂದಂತೆ ಥಳಿಸಿದ್ದಾರೆ.

ಜತೆಗೆ ಬಾಲಕನನ್ನು ಹಗ್ಗದಿಂದ ಬೈಕ್‍ಗೆ ಕಟ್ಟಿ ಸುಮಾರು 50 ಮೀಟರ್ ದೂರದವರೆಗೆ ಎಳೆದೊಯ್ದಿದ್ದಾರೆ. ಇದರಿಂದ ತೀವ್ರವಾಗಿ ಗಾಯಗೊಂಡಿರುವ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹಲ್ಲೆ ನಡೆಸಿರುವ ಸಹೋದರರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಲಾಗಿದೆ.

ಬಾಲಕನ ತಂದೆ ಮತ್ತು ತಾಯಿ ಇಬ್ಬರೂ ಬಟ್ಟೆ ಅಂಗಡಿಯೊಂದರಲ್ಲಿ ಕೂಲಿ ಕೆಲಸ ಮಾಡಿ ಜೀವನ ನಡೆಸುತ್ತಿದ್ದು, ಮಗನಿಗೆ ಹೀಗಾದ ಘಟನೆ ಕಂಡು ಆಘಾತಕ್ಕೊಳಗಾಗಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ