ಕ್ಷುಲ್ಲಕ ವಿಚಾರಕ್ಕೆ ಜಗಳ-ಆಟೋ ಚಾಲಕನ ಕೊಲೆ

ಬೆಂಗಳೂರು, ಮಾ.11-ಆಟೋದಲ್ಲಿ ಕುಳಿತಿದ್ದ ಚಾಲಕನೊಂದಿಗೆ ಇಬ್ಬರು ಬೈಕ್ ಸವಾರರು ಕ್ಷುಲ್ಲಕ ವಿಚಾರಕ್ಕೆ ಜಗಳವಾಡಿ ಕೈ -ಕೈ ಮಿಲಾಯಿಸಿ ಬೀರ್ ಬಾಟಲಿಯಿಂದ ತಲೆಗೆ ಹೊಡೆದು ಕೊಲೆ ಮಾಡಿರುವ ಘಟನೆ ಬೈಯ್ಯಪ್ಪನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಮಲ್ಲೇಶಪಾಳ್ಯದ ನಿವಾಸಿ ವೆಂಕಟೇಶ್ (29) ಕೊಲೆಯಾದ ದುರ್ದೈವಿ.

ಆಟೋ ಹಾಗೂ ಶಾಲಾ ವಾಹನದ ಚಾಲಕ ವೃತ್ತಿ ಮಾಡುತ್ತಿದ್ದ ವೆಂಕಟೇಶ್, ರಾತ್ರಿ ಸುಮಾರು 11.30ರ ಸಮಯದಲ್ಲಿ ಜಿ.ಎಂ.ಪಾಳ್ಯ, 4ನೇ ಕ್ರಾಸ್, ಆಸ್ಪತ್ರೆ ಸರ್ಕಲ್ ಬಳಿ ತನ್ನ ಇಬ್ಬರು ಸಂಬಂಧಿಕರ ಜೊತೆ ಆಟೋದಲ್ಲಿ ಕುಳಿತು ಮದ್ಯಪಾನ ಮಾಡುತ್ತಿದ್ದರು.

ಈ ಸಂದರ್ಭದಲ್ಲಿ ಇಬ್ಬರು ಬೈಕ್ ಸವಾರರು ಇವರ ಬಳಿ ಬಂದು ಮೆಕಾನಿಕ್ ಇದ್ದಾರಾ ಎಂದು ಕೇಳಿದ್ದಾರೆ.

ಮೆಕಾನಿಕ್ ಇಲ್ಲ್ಯಾರೂ ಇಲ್ಲ, ಮನೆಗೆ ಹೋಗಿ ಕೇಳಿ ಎಂದು ವೆಂಕಟೇಶ್ ಹೇಳುತ್ತಿದ್ದಂತೆ ಇಬ್ಬರು ಸವಾರರು ಈತನೊಂದಿಗೆ ಮಾತಿನ ಚಕಮಕಿ ನಡೆಸಿದ್ದಾರೆ.

ಈ ವೇಳೆ ಕೈ ಕೈ ಮಿಲಾಯಿಸಿದ್ದು, ಜಗಳ ವಿಕೋಪಕ್ಕೆ ತಿರುಗಿದಾಗ ಆಟೋದಲ್ಲಿದ್ದ ಬೀರ್ ಬಾಟಲಿಯನ್ನು ತೆಗೆದುಕೊಂಡ ಸವಾರರು ವೆಂಕಟೇಶ್ ತಲೆಗೆ ಬಲವಾಗಿ ಹೊಡೆದು ಕೊಲೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾರೆ.

ಸುದ್ದಿ ತಿಳಿದ ಬೈಯ್ಯಪ್ಪನಹಳ್ಳಿ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ , ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮೃತದೇಹವನ್ನು ಬೌರಿಂಗ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ