ವಿವಿಧ ಜಿಲ್ಲೆಗಳಲ್ಲಿ ಕಾರ್ಯಾಚರಣೆ ನಡೆಸಿದ ಅಬಕಾರಿ ಇಲಾಖೆ

ಬೆಂಗಳೂರು, ಮಾ.11-ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಅಬಕಾರಿ ಅಕ್ರಮಗಳನ್ನು ವಿಚಕ್ಷಣ ದಳದ ಸಿಬ್ಬಂದಿ ವಿವಿಧ ಜಿಲ್ಲೆಗಳಲ್ಲಿ ಕಾರ್ಯಾಚರಣೆ ನಡೆಸಿ 9 ಪ್ರಕರಣಗಳನ್ನು ದಾಖಲಿಸಿಕೊಂಡು 13.13 ಲಕ್ಷ ರೂ. ಮೌಲ್ಯದ ಮಾಲನ್ನು ವಶಪಡಿಸಿಕೊಂಡಿದೆ.

ಮುಂದಿನ ಲೋಕಸಭಾ ಚುನಾವಣೆಯ ಸಲುವಾಗಿ ಅಬಕಾರಿ ಅಕ್ರಮ ತಡೆಗಟ್ಟುವ ಸಂಬಂಧ ಅಬಕಾರಿ ಆಯುಕ್ತ ಯಶವಂತ್‍ಪೈ ಹಾಗೂ ಹೆಚ್ಚುವರಿ ಅಬಕಾರಿ ಆಯುಕ್ತ ವೆಂಕಟ್‍ರಾಜಾ ನಿರ್ದೇಶನದಲ್ಲಿ, ಅಬಕಾರಿ ಜಂಟಿ ಆಯುಕ್ತ ಎಸ್.ಎಲ್.ರಾಜೇಂದ್ರಪ್ರಸಾದ್ ಮಾರ್ಗದರ್ಶನದಲ್ಲಿ ಅಬಕಾರಿ ಇಲಾಖೆ ರಾಜ್ಯ ವಿಚಕ್ಷಣ ದಳದ ಸಿಬ್ಬಂದಿ ಫೆಬ್ರವರಿಯಿಂದೀಚೆಗೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕಾರ್ಯಾಚರಣೆ ಕೈಗೊಂಡು 9 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.

ಈ ವೇಳೆ ಹುಂಡೈ ಅಸೆಂಟ್ ಕಾರು ಸೇರಿದಂತೆ 5 ವಾಹನಗಳನ್ನು ವಶಪಡಿಸಿಕೊಂಡಿರುವ ಸಿಬ್ಬಂದಿ, 2576 ಲೀಟರ್ ಗೋವಾ ರಾಜ್ಯದ ಮದ್ಯ, 65 ಲೀಟರ್ ಸೇಂದಿ, 94 ಲೀಟರ್ ಮದ್ಯ, 3,300 ಲೀಟರ್ ಬೀರ್ ವಶಪಡಿಸಿಕೊಂಡು ನಾಲ್ವರನ್ನು ಬಂಧಿಸಲಾಗಿದ್ದು, ಎಲ್ಲಾ ಪ್ರಕರಣಗಳ ತನಿಖೆ ಪ್ರಗತಿಯಲ್ಲಿದೆ.

ಚುನಾವಣೆ ಹಿನ್ನೆಲೆಯಲ್ಲಿ ಮುಂಚಿತವಾಗಿಯೇ ಗೋವಾ ರಾಜ್ಯದ 2576 ಲೀ. ಮದ್ಯವನ್ನು ಅಕ್ರಮವಾಗಿ ಸಾಗಾಣಿಕೆ ಮಾಡಿಕೊಂಡು ಸಂಗ್ರಹಿಸಿದ್ದ ಬಗ್ಗೆ ಅಬಕಾರಿ ವಿಚಕ್ಷಣ ದಳದ ಸಿಬ್ಬಂದಿ ಪತ್ತೆ ಹಚ್ಚಿ ಮಾಲನ್ನು ವಶಪಡಿಸಿಕೊಂಡಿದೆ.

ಚುನಾವಣೆಯಲ್ಲಿ ಅಕ್ರಮ ಮದ್ಯ ಹಂಚಿಕೆಯಾಗುವುದನ್ನು ತಡೆಗಟ್ಟಲು ಇಲಾಖೆಯು ಈಗಾಗಲೇ ಕಾರ್ಯೋನ್ಮುಖವಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ