ಕಾಶ್ಮೀರದಲ್ಲಿ ರಜೆಗೆ ಮನೆಗೆ ತೆರಳಿದ್ದ ಭಾರತೀಯ ಸೈನಿಕನನ್ನು ಅಪಹರಿಸಿದ ಉಗ್ರರು

ಶ್ರೀನಗರ: ರಜೆಯ ಮೇಲೆ ಜಮ್ಮು ಕಾಶ್ಮೀರದ ಬದ್ಗಾಂ ಜಿಲ್ಲೆಯಲ್ಲಿರುವ ತನ್ನೂರಿಗೆ ಬಂದಿದ್ದ ಭಾರತೀಯ ಯೋಧರೊಬ್ಬರನ್ನು ಉಗ್ರರು ಅಪಹರಿಸಿದ್ದಾರೆ.

ನಿನ್ನೆ ಸಂಜೆ ಈ ಘಟನೆ ನಡೆದಿದ್ದು, ಉಗ್ರರಿಂದ ಅಪಹರಿಸಲ್ಪಟ್ಟಿರುವ ಯೋಧ ಮೊಹಮ್ಮದ್​ ಯಾಸೀನ್​ ಭಟ್​ ಜಮ್ಮು ಕಾಶ್ಮೀರದ ಲೈಟ್ ಇನ್‍ಫ್ಯಾಂಟ್ರಿಗೆ ನೇಮಕವಾಗಿದ್ದರು. ನಿನ್ನೆ ಸಂಜೆ ಕೆಲವು ಉಗ್ರರು ಯಾಸೀನ್​ ಅವರ ಮನೆಯೊಳಗೆ ನುಗ್ಗಿದ್ದು, ಬಲವಂತವಾಗಿ ಕಾಡಿನೊಳಕ್ಕೆ ಎಳೆದೊಯ್ದಿದ್ದಾರೆ.

ಒಂದು ತಿಂಗಳ ರಜೆಯ ಮೇಲೆ ಫೆ. 26ರಂದು ಯಾಸೀನ್​ ಊರಿಗೆ ಬಂದಿದ್ದರು. ವಿಷಯ ತಿಳಿಯುತ್ತಿದ್ದಂತೆ ಪೊಲೀಸ್​ ಮತ್ತು ಸೇನಾಪಡೆಯ ಸಿಬ್ಬಂದಿ ಯಾಸೀನ್ ಅವರ ಮನೆಗೆ ತೆರಳಿ ಸುತ್ತಮುತ್ತಲಿನ ಅರಣ್ಯ ಪ್ರದೇಶವನ್ನು ತಪಾಸಣೆ ನಡೆಸಿದ್ದಾರೆ.

ಪುಲ್ವಾಮಾ ದಾಳಿ ನಡೆದ ನಂತರ ಭಾರತದ ಗಡಿಯಲ್ಲಿ ಹೈಅಲರ್ಟ್​ ಘೋಷಿಸಲಾಗಿದ್ದು, ಕಾಶ್ಮೀರದ ಗಡಿ ಭಾಗದಲ್ಲೂ ಹೆಚ್ಚಿನ ಬಂದೋಬಸ್ತ್​ ವಹಿಸಲಾಗಿದೆ.

ಯಾಸೀನ್​ ಅವರ ಅಪಹರಣ ಹಳೆಯ ನೆನಪನ್ನು ಮರುಕಳಿಸುವಂತೆ ಮಾಡಿದ್ದು, 2017ರಲ್ಲಿ ತನ್ನ ತಂಗಿಯ ಮದುವೆಗೆಂದು ರಜೆಯ ಮೇಲೆ ಕಾಶ್ಮೀರದ ತನ್ನ ಮನೆಗೆ ತೆರಳಿದ್ದ 22 ವರ್ಷದ ಉಮ್ಮರ್​ ಫಯಾಜ್​ ಎಂಬ ಯೋಧನ ಮನೆಯೊಳಗೆ ನುಗ್ಗಿದ್ದ ಉಗ್ರರು ಅಪಹರಿಸಿ ಹತ್ಯೆಗೈದಿದ್ದರು.

ಇದೇರೀತಿ, ದಕ್ಷಿಣ ಕಾಶ್ಮೀರದ ಸೋಫಿಯಾನ್ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಔರಂಗಜೇಬ್​ ಅವರನ್ನು ಕಳೆದ ವರ್ಷ ಜೂನ್​ನಲ್ಲಿ ಉಗ್ರರು ಅಪಹರಿಸಿದ್ದರು. ಗುಂಡಿನ ದಾಳಿಯಿಂದ ಛಿದ್ರವಾಗಿದ್ದ ಔರಂಗಜೇಬ್​ ಮೃತಶರೀರ ಆತನ ಮನೆಯಿಂದ 10 ಕಿ.ಮೀ. ದೂರದಲ್ಲಿ ಪತ್ತೆಯಾಗಿತ್ತು.

ಈದ್​ ಹಬ್ಬದ ಆಚರಣೆಗೆ ಮನೆಗೆ ತೆರಳಿದ್ದ ಯೋಧ ಔರಂಗಜೇಬ್ ಹಿಜ್ಬುಲ್ ಮುಜಾಹಿದ್ದೀನ್ ಭಯೋತ್ಪಾದಕ ಸಂಘಟನೆಯ ಉಗ್ರ ಸಮೀರ್ ಟೈಗರ್​ನನ್ನು ಹತ್ಯೆಗೈದಿದ್ದ. ಹೀಗಾಗಿ, ಉಗ್ರರು ಅವರನ್ನು ಅಪಹರಣ ಮಾಡಿದ್ದರು. ಅದಾದ ನಂತರ ಇಬ್ಬರು ಪೊಲೀಸರು ಮತ್ತು ಸಿಆರ್​ಪಿಎಫ್​ ಯೋಧನನ್ನು ಕೂಡ ಮನೆಯಿಂದ ಅಪಹರಿಸಲಾಗಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ