ಅಭ್ಯರ್ಥಿ ಆಯ್ಕೆ ಹಿನ್ನಲೆ-ಸ್ಥಳೀಯ ಮುಖಂಡರೊಂದಿಗೆ ಮಾಜಿ ಸಿ.ಎಂ.ಸಿದ್ದರಾಮಯ್ಯ ಚರ್ಚೆ

ಬೆಂಗಳೂರು, ಮಾ.8-ಬಾಗಲಕೋಟೆ ಹಾಗೂ ಕೊಪ್ಪಳ ಎರಡೂ ಕ್ಷೇತ್ರಗಳ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದ್ದು ಪ್ರತಿ ಕ್ಷೇತ್ರದಲ್ಲಿ ಐದಾರು ಜನ ಆಕಾಂಕ್ಷಿಗಳಿದ್ದು ಇದರ ಹೊರತಾಗಿ ಬೇರೆ ಯಾರಿದ್ದಾರೆ ಎಂಬೆಲ್ಲ ವಿಚಾರವಾಗಿ ಇಂದು ಸ್ಥಳೀಯ ಮುಖಂಡರೊಂದಿಗೆ ಮಾಜಿ ಸಿ.ಎಂ.ಸಿದ್ದರಾಮಯ್ಯ ಮಾತುಕತೆ ನಡೆಸಿದರು.

ಬಾಗಲಕೋಟೆಯಲ್ಲಿ ಬಾಯಕ್ಕ ಮೇಟಿ, ವೀಣಾ ಕಾಶಪ್ಪನವರ್, ಅಜಯ್‍ಕುಮಾರ್ ಸರನಾಯಕ್ ಆಕಾಂಕ್ಷಿಗಳಾಗಿದ್ದರೆ, ಕೊಪ್ಪಳದಲ್ಲಿ ಬಸನಗೌಡ ಬಾದರ್ಲಿ, ಬಸವರಾಜ್ ಹಿಟ್ನಾಳ್, ವಿರೂಪಾಕ್ಷಪ್ಪ ಆಕಾಂಕ್ಷಿಗಳಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಲೋಕಸಭಾ ಚುನಾವಣೆಯಲ್ಲಿ ಯಾರಿಗೆ ಸ್ಥಾನ ನೀಡಬೇಕು ಎಂಬ ಕುರಿತಂತೆ ಚರ್ಚಿಸಲಾಯಿತು.

ಹಾವೇರಿಯಲ್ಲಿ ನಡೆಯಲಿರುವ ರಾಹುಲ್ ಗಾಂಧಿ ಅವರ ಕಾರ್ಯಕ್ರಮಕ್ಕೆ ಹೆಚ್ಚಿನ ಜನರನ್ನು ಸೇರಿಸುವ ಮೂಲಕ ಯಶಸ್ವಿಗೊಳಿಸುವಂತೆ ಕಾರ್ಯಕರ್ತರಿಗೆ ಇದೇ ವೇಳೆ ಸೂಚನೆ ನೀಡಿದ ಸಿದ್ದರಾಮಯ್ಯ, ಯಾರಿಗೆ ಕ್ಷೇತ್ರದಲ್ಲಿ ಟಿಕೆಟ್ ಸಿಕ್ಕರೂ ಅವರನ್ನು ಎಲ್ಲರೂ ಬೆಂಬಲಿಸಬೇಕು ಎಂದು ತಿಳಿಸಿದರು.

ಮುಂದಿನ ದಿನಗಳಲ್ಲಿ ಒಳ್ಳೆಯ ಅವಕಾಶ ದೊರೆಯಲಿದೆ. ಈಗ ಸಮ್ಮಿಶ್ರ ಸರ್ಕಾರ ಇರುವುದರಿಂದ ಅವಕಾಶ ಕಡಿಮೆ ಇರಬಹುದು. ಆದರೆ ಮುಂದೆ ಒಳ್ಳೆಯ ಅವಕಾಶ ದೊರೆಯಲಿದೆ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ