ಪಟ್ಟು ಬಿಡದ ಸುಮಲತಾ; ಮಂಡ್ಯ ಕ್ಷೇತ್ರ ಬಿಟ್ಟುಕೊಡಲು ಮುಂದಾದ್ರ ಗೌಡರು?

ಮಂಡ್ಯ : ಲೋಕಸಭಾ ಚುನಾವಣಾ ಜಿದ್ಧಾ ಜಿದ್ದಿ ಕಣವಾಗಿರುವ ಸಕ್ಕರೆ ನಾಡಿನಲ್ಲಿ ಸುಮಲತಾ ಹಾಗೂ ಜೆಡಿಎಸ್​ ನಡುವೆ ರಾಜಕೀಯ ತಾರಕಕ್ಕೇರಿದೆ. ಸ್ವತಂತ್ರ ಅಭ್ಯರ್ಥಿಯಾದರೂ ಸರಿ ಮಂಡ್ಯದಿಂದಲೇ ಚುನಾವಣೆಗೆ ನಿಲ್ಲುತ್ತೇನೆ ಎಂದವರು ಸ್ಪಷ್ಟಪಡಿಸಿದ್ದಾರೆ. ಸುಮಲತಾ ಅವರ ದೃಢ ನಿರ್ಧಾರದಿಂದ ಕಂಗಾಲಾಗಿರುವ ಜೆಡಿಎಸ್​ ಈಗ ಕ್ಷೇತ್ರವನ್ನು ಬಿಟ್ಟುಕೊಡಲು ಸಜ್ಜಾಗಿದೆಯಾ ಎಂಬ ಅನುಮಾನ ಮೂಡುತ್ತಿದೆ. ಇದಕ್ಕೆ ಕಾರಣ ಜಿ.ಟಿ ದೇವೇಗೌಡ ಹಾಗೂ ನಿಖಿಲ್​ ಕುಮಾರಸ್ವಾಮಿ ಅವರ ಮಾತುಗಳು.

ಅಭಿಮಾನಿಗಳ ಮೇರೆಗೆ ಚುನಾವಣೆಗೆ ಸ್ಪರ್ಧಿಸಲು ನಿರ್ಧಾರ ಮಾಡಿದ ನಟಿ ಸುಮಲತಾ ಅಂಬರೀಷ್​ ಇದಕ್ಕಾಗಿ ಕಾಂಗ್ರೆಸ್​ ನಾಯಕರ ಸಲಹೆ ಪಡೆದಿದ್ದಾರೆ. ಎರಡು ಬಾರಿ ಕಾಂಗ್ರೆಸ್​ನಿಂದ ಅಂಬರೀಷ್​  ಸಚಿವರಾದ ಹಿನ್ನೆಲೆ ಕೈ ಮುಖಂಡರನ್ನು ಭೇಟಿಯಾಗಿ ಬೆಂಬಲ ಕೋರಿದ್ದರು. ಆದರೆ, ಮೈತ್ರಿಗೆ ಕಟ್ಟುಬಿದ್ದ ನಾಯಕರು, “ಆ ಕ್ಷೇತ್ರವನ್ನು ಈಗಾಗಲೇ ಜೆಡಿಎಸ್​ಗೆ ಬಿಟ್ಟಕೊಡಬೇಕೆಂಬ ಮಾತಾಗಿದೆ. ಮಂಡ್ಯ ಬಿಟ್ಟು ಬೇರೆ ಯಾವ ಕ್ಷೇತ್ರವನ್ನಾದರೂ ಕೇಳಿ. ಬೇಕಾದಲ್ಲಿ ನೇರವಾಗಿ ದೊಡ್ಡ ಹುದ್ದೆಯನ್ನೇ ನೀಡುತ್ತೇವೆ. ಮಂಡ್ಯ ಕ್ಷೇತ್ರವನ್ನು ಬಿಟ್ಟು ಬಿಡಿ” ಎಂಬ ಸಲಹೆ ನೀಡಿದ್ದರು. ಇದರಿಂದಾಗಿ ಸುಮಲತಾ ಸಹ ಈಗ ಕೈ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್​ ಬೆಂಬಲವಿಲ್ಲದೆಯೂ ಸುಮಲತಾ ಚುನಾವಣೆಯಲ್ಲಿ ನಿಂತು ಗೆಲ್ಲುವುದು ತೀರಾ ಕಷ್ಟವಲ್ಲ ಎನ್ನುವ ಸತ್ಯ ಅರಿತ ಜೆಡಿಎಸ್​ಗೆ ಈಗ ಸಂಕಷ್ಟ ಎದುರಾಗಿದೆ. ಸುಮಲತಾಗೆ ಇರುವ ಅನುಕಂಪದ ಅಲೆಯ ಮುಂದೆ  ತಾವು ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಾ ಎಂಬ ಪ್ರಶ್ನೆ ಮೂಡಿದೆ. ಮಂಡ್ಯದಲ್ಲಿ ಸ್ಪರ್ಧಿಸಲು ಜೆಡಿಎಸ್​ನ ಸ್ಥಳೀಯ ನಾಯಕರು ಕೂಡ ಹಿಂದೇಟು ಹಾಕುತ್ತಿರುವ ಹಿನ್ನೆಲೆಯಲ್ಲಿ, ನಿಖಿಲ್​ ರಾಜಕೀಯ ಭವಿಷ್ಯಕ್ಕಾಗಿ ಕ್ಷೇತ್ರ ಬದಲಿಸುವ ತೀರ್ಮಾನ ಮಾಡಿದ್ದಾರಾ ಎಂಬ ಅನುಮಾನ ಕಾಡುತ್ತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ